ಬಳ್ಳಾರಿ ಜೈಲಿನ ಗೋಡೆಯ ನಡುವೆ ಅರಳಿದ ಪ್ರತಿಭೆ: ಜೀವಾವಧಿ ಶಿಕ್ಷೆಯ ನಡುವೆಯೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆ
ದ್ವಿತೀಯ ಪಿಯುಸಿ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಈ ಬಾರಿ ಬಳ್ಳಾರಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬರು ಗಮನಾರ್ಹ ಸಾಧನೆ ಮಾಡಿದ್ದಾರೆ. ಕೊಲೆ ಪ್ರಕರಣದ ಅಡಿಯಲ್ಲಿ ಕಳೆದ 7 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಅಕ್ಷರಗಳಲ್ಲಿ ಸಾಧನೆಗೈದಿದ್ದಾರೆ.
ಹೌದು..! ಕೊಲೆ ಪ್ರಕರಣದಲ್ಲಿ 7 ವರ್ಷಗಳಿಂದ ಬಳ್ಳಾರಿ ಜೈಲಿನಲ್ಲಿಯೇ ಇರುವ ಅಪರಾಧಿ ಅಶೋಕ್ ಕುಮಾರ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 81ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಫಸ್ಟ್ಕ್ಲಾಸ್ನಲ್ಲಿ ಪಾಸ್ ಆಗಿದ್ದಾರೆ.
600ಕ್ಕೆ 481 ಅಂಕ ಪಡೆಯುವ ಮೂಲಕ ಶೇಕಡಾ 81% ಫಲಿತಾಂಶ ಪಡೆದಿದ್ದಾರೆ. ಕನ್ನಡ 82, ಇಂಗ್ಲಿಷ್ 69, ಇತಿಹಾಸ 94, ಅರ್ಥಶಾಸ್ತ್ರ 84, ಸಮಾಜಶಾಸ್ತ್ರ 77, ರಾಜ್ಯಶಾಸ್ತ್ರ75 ಅಂಕ ಪಡೆದಿದ್ದಾರೆ. ಜೈಲಿನ ಪ್ರತ್ಯೇಕ ಸೆಲ್ ನಲ್ಲಿಯೇ ಅಭ್ಯಾಸ ಮಾಡಿದ್ದ ಅಪರಾಧಿ ಅಶೋಕ್ ಕುಮಾರ್, ಇದೀಗ ಫಸ್ಟ್ ಕ್ಲಾಸ್ ಮಾರ್ಕ್ಸ್ನೊಂದಿಗೆ ಉತ್ತೀರ್ಣರಾಗುವ ಮೂಲಕ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದಾರೆ.
ಇದನ್ನೂ ಓದಿ: ಮುದ್ರಿತ ಅಂಕಪಟ್ಟಿಗೆ ಕೊಕ್..! 2027ರಿಂದ ವಿದ್ಯಾರ್ಥಿಗಳಿಗಿಲ್ಲ ಮುದ್ರಿತ ಅಂಕಪಟ್ಟಿ – ಸಚಿವ ಮಧು ಬಂಗಾರಪ್ಪ ಮಾಹಿತಿ
ಜೈಲಿನಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸಿ ಸುದ್ದಿಯಾಗುವ ಕೈದಿಗಳ ನಡುವೆ, ಓದಿಗೆ ತನ್ನ ಸಮಯ ಮೀಸಲಿಟ್ಟು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಅಶೋಕ್ ಸಾಧನೆಗೆ ಜೈಲಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜೀವಾವಧಿ ಶಿಕ್ಷೆಯನ್ನು ವ್ಯಾಸಂಗ ಮಾರ್ಗವಾಗಿ ಬದಲಾಯಿಸಿಕೊಂಡಿರುವ ಅಶೋಕ್ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.



