
ಛತ್ತೀಸ್ಗಢದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಸಿನಿಮೀಯ ತಿರುವು ಪಡೆದುಕೊಂಡಿದೆ. ಮದ್ಯದ ಅಮಲಿನಲ್ಲಿದ್ದ ಟ್ರಕ್ ಚಾಲಕ 11 ವರ್ಷದ ಬಾಲಕಿಗೆ ಡಿಕ್ಕಿ ಹೊಡೆದು ಆಕೆಯ ಸಾವಿಗೆ ಕಾರಣನಾದ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ನಿರಂತರ ಬೆನ್ನಟ್ಟಿ ಕೊನೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮಾಹಿತಿಯಂತೆ, ರಾಜನಾಂದಗಾಂವ್–ಮಾನ್ಪುರ ಹೆದ್ದಾರಿಯ ಗುಂದರ್ದೇಹಿ ಗ್ರಾಮದಲ್ಲಿ ವೇಗವಾಗಿ ಸಾಗುತ್ತಿದ್ದ ಟ್ರಕ್, ಪೂನಂ ಎಂಬ 11 ವರ್ಷದ ಬಾಲಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತದ ನಂತರ ವಾಹನ ನಿಲ್ಲಿಸದೇ ಚಾಲಕ ವೇಗವಾಗಿ ಮೋಹ್ಲಾ ಕಡೆಗೆ ಪರಾರಿಯಾಗಿದ್ದಾನೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ವಿವಿಧ ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಟ್ರಕ್ ತಡೆಯಲು ಯತ್ನಿಸಿದರು. ಆದರೆ ಚಾಲಕ ಬ್ಯಾರಿಕೇಡ್ಗಳನ್ನು ಧ್ವಂಸಗೊಳಿಸಿ ಮತ್ತೊಂದು ಟ್ರಕ್ಗೆ ಡಿಕ್ಕಿ ಹೊಡೆದು ಅಲ್ಲಿಂದಲೂ ತಪ್ಪಿಸಿಕೊಂಡಿದ್ದಾನೆ. ನಂತರ ಮಾನ್ಪುರ ಪಟ್ಟಣದ ಸಮೀಪ ಮತ್ತೊಮ್ಮೆ ಪೊಲೀಸರು ತಡೆ ನಿರ್ಮಿಸಿದರೂ, ಅದನ್ನೂ ಲೆಕ್ಕಿಸದೆ ವಾಹನ ಚಲಾಯಿಸಿದ್ದರಿಂದ ಕೆಲ ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ.
ಸುಮಾರು 60 ಕಿಲೋಮೀಟರ್ಗಳ ರೋಚಕ ಬೆನ್ನಟ್ಟುವಿಕೆಯ ಬಳಿಕ ಮಹಾರಾಷ್ಟ್ರ ಗಡಿಯಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಕೋರ್ಕೊಟ್ಟಿ ಗ್ರಾಮದ ಬಳಿ ಟ್ರಕ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನುಗ್ಗಿ ನಿಂತಿದೆ. ಈ ವೇಳೆ ಗಾಯಗೊಂಡಿದ್ದ ಚಾಲಕನನ್ನು ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆಯಲ್ಲಿ ಆತ ಮದ್ಯ ಸೇವಿಸಿದ್ದ ವಿಚಾರವೂ ಬೆಳಕಿಗೆ ಬಂದಿದೆ.
ಅಪಘಾತದ ನಂತರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಾಲಕಿಯ ಮೃತದೇಹವನ್ನು ರಸ್ತೆಯಲ್ಲೇ ಇಟ್ಟು ಸುಮಾರು ಎರಡು ಗಂಟೆಗಳ ಕಾಲ ಸಂಚಾರ ತಡೆ ನಡೆಸಿದರು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ಬಾಲಕಿಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಇದೇ ವೇಳೆ ಪೊಲೀಸ್ ವಾಹನಗಳು ಟ್ರಕ್ ಬೆನ್ನಟ್ಟಿದ ದೃಶ್ಯಗಳ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.



