ಕರಾವಳಿಯಲ್ಲಿ ಬಿಸಿಲಧಗೆ ಮತ್ತಷ್ಟು ಹೆಚ್ಚಳ..! ಉತ್ತರ ಕರ್ನಾಟಕದಲ್ಲಿಯೂ ಶಾಖದ ಅಲೆ..!
ರಾಜ್ಯಾದ್ಯಂತ ಬಿಸಿಲ ಧಗೆ ಮಿತಿಮೀರುತ್ತದೆ. ಈ ಎಲ್ಲದರ ನಡುವೆ ಇಂದು ಬಿಸಿಲಿನ ಧಗೆಯನ್ನು ಇಳಿಸಲು ವರುಣನ ಆಗಮನವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಳೆಯ ಸಂದರ್ಭದಲ್ಲಿ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು ಹಾಗೂ ನಾಳೆ ಮಳೆಯಾಗಲಿದೆ ಐಎಂಡಿ ತಿಳಿಸಿದೆ. ಇನ್ನುಳಿದಂತೆ ದಕ್ಷಿಣ ಒಳನಾಡಿನ ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ‘ಬಿಸಿ ರಾತ್ರಿ’ಗಳ ಭೀತಿ: 30 ವರ್ಷಗಳಲ್ಲೇ ದಾಖಲೆ ಬರೆದ ತಾಪಮಾನ; ಈ ಜಿಲ್ಲೆಗಳಿಗೆ ಉಷ್ಣಾಘಾತದ ಎಚ್ಚರಿಕೆ!
ಮೊದಲೇ ಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ಕರಾವಳಿಗರಿಗೆ ಐಎಂಡಿ ಬೇಸರದ ಸಂಗತಿಯನ್ನು ನೀಡಿದೆ. ಕರಾವಳಿ ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಹೆಚ್ಚಳವಾಗಲಿದೆ. ಸೆಖೆಯ ಪ್ರಮಾಣ ಮಿತಿಮೀರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನವು 2 ರಿಂದ 4 ಡಿಗ್ರಿ ಹೆಚ್ಚಲಿದ್ದು, ಶಾಖದ ಅಲೆ ಕೂಡ ಇರಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.



