90 ಅಡಿ ಆಳದ ಬಾವಿಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ
ಸುಮಾರು 90 ಅಡಿ ಆಳ ಹಾಗೂ 35 ಅಡಿ ನೀರು ಹೊಂದಿದ್ದ ಬಾವಿಗೆ ಇಳಿದಿದ್ದ ಶ್ರೀಶ್ ಬಲ್ಲಾಳ್ ಅವರು, ಕೆಲಸ ಮುಗಿಸಿ ಮೇಲಕ್ಕೆ ಬರಲು ಯತ್ನಿಸಿದಾಗ ಸಾಧ್ಯವಾಗದೆ ಬಾವಿಯೊಳಗೆ ಸಿಲುಕಿಕೊಂಡಿದ್ದರು
ಉಡುಪಿ: ನಗರದ ಕೊರಂಗ್ರಪಾಡಿ ಗೋಪಾಲ್ ರಸ್ತೆ ನಿವಾಸಿ ಶ್ರೀಶ್ ಬಲ್ಲಾಳ್ ಅವರು ಸ್ವಚ್ಛತಾ ಕಾರ್ಯಕ್ಕಾಗಿ ಬಾವಿಗೆ ಇಳಿದ ವೇಳೆ ಆತಂಕಕಾರಿ ಘಟನೆ ಸಂಭವಿಸಿದೆ. ಸುಮಾರು 90 ಅಡಿ ಆಳ ಹಾಗೂ 35 ಅಡಿ ನೀರು ಹೊಂದಿದ್ದ ಬಾವಿಗೆ ಇಳಿದಿದ್ದ ಅವರು, ಕೆಲಸ ಮುಗಿಸಿ ಮೇಲಕ್ಕೆ ಬರಲು ಯತ್ನಿಸಿದಾಗ ಸಾಧ್ಯವಾಗದೆ ಬಾವಿಯೊಳಗೆ ಸಿಲುಕಿಕೊಂಡಿದ್ದರು.
ಇದನ್ನೂ ಓದಿ: ಕಾರ್ಕಳದ ರೌಡಿ ಶೀಟರ್ ಸೋಮನಾಥ ಗಡಿಪಾರು
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ಇಲಾಖೆಗೆ ತುರ್ತು ಕರೆ ನೀಡಲಾಗಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅಪಾಯದ ಪರಿಸ್ಥಿತಿಯ ನಡುವೆಯೂ ಸಿಬ್ಬಂದಿಗಳು ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಕಾರ್ಯನಿರ್ವಹಿಸಿ, ಬಾವಿಯೊಳಗೆ ಸಿಲುಕಿದ್ದ ಶ್ರೀಶ್ ಬಲ್ಲಾಳ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದು ಪ್ರಾಣಾಪಾಯದಿಂದ ಪಾರು ಮಾಡಿದರು.
ಅಗ್ನಿಶಾಮಕ ದಳದ ತ್ವರಿತ ಸ್ಪಂದನೆ ಹಾಗೂ ಸಾಹಸಮಯ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



