ನಿಶ್ಚಿತಾರ್ಥದಲ್ಲಿ ರಿಂಗ್ ಬದಲು ಎಕ್ಸೆಂಜ್ ಆಯ್ತು ಭಾರತಾಂಬೆಯ ಪೋಟೋ…! ಕಾಫಿನಾಡಿನಲ್ಲೊಂದು ಡಿಫರೆಂಟ್ ಎಂಗೇಜ್ ಮೆಂಟ್…!!

ಸಾಮಾನ್ಯವಾಗಿ ಯುವಜೋಡಿಗಳು ನಿಶ್ಚಿತಾರ್ಥದಲ್ಲಿ ಉಂಗುರ ಬದಲಾಯಿಸಿಕೊಳ್ಳೋದು ವಾಡಿಕೆ. ಆದರೆ ಅಪ್ಪಟ ದೇಶಪ್ರೇಮಿಗಳಾದ  ಯುವಜೋಡಿಯೊಂದು ನಿಶ್ಚಿತಾರ್ಥದಂದು  ಉಂಗುರದ ಬದಲು ಭಾರತಾಂಬೆಯ ಪೋಟೋ ಬದಲಾಯಿಸಿಕೊಂಡು ವಿಭಿನ್ನತೆ ಮರೆದಿದ್ದಾರೆ.

ಚಿಕ್ಕಮಗಳೂರಿನ ಹಿರೇಮಗಳೂರು ನಿವಾಸಿಗಳಾದ ವಿದ್ಯಾಶ್ರೀ ಹಾಗೂ ರವೀಶ್ ಪಟೇಲ್ ವಿವಾಹ ನಿಶ್ಚಿತಾರ್ಥ ಇಂದು ನಡೆದಿದೆ. ಈ ವೇಳೆ ಪರಸ್ಪರ ವಧು-ವರರು ಉಂಗುರ ಬದಲಾಯಿಸಿಕೊಳ್ಳುವ ಬದಲು ದೇಶಭಕ್ತಿಯಿಂದ ಭಾರತಮಾತೆಯ ಪೋಟೋವನ್ನು ಎಕ್ಸೆಂಜ್ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಇಂಜೀನಿಯರ್ ಗಳಾಗಿರುವ ವಿದ್ಯಾಶ್ರೀ-ರವೀಶ್ ಪಟೇಲ್ ಪರಸ್ಪರ ಮಾತನಾಡಿಕೊಂಡು ನಿರ್ಧರಿಸಿ ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಅಡಿ ಇಟ್ಟಿದ್ದಾರೆ. ದೇಶಪ್ರೇಮವನ್ನು ವ್ಯಕ್ತಪಡಿಸೋಕೆ ಮಕ್ಕಳು ಆಯ್ಕೆ ಮಾಡಿಕೊಂಡ ರೀತಿಯನ್ನು ಪೋಷಕರು ಒಪ್ಪಿ ಪ್ರೋತ್ಸಾಹಿಸಿದ್ದಾರೆ.

ಹಿರೇಮಗಳೂರಿನ ಪೈಕಲ್ಯಾಣಮಂಟಪದ ಬಳಿ ಇರುವ ವಿದ್ಯಾಶ್ರೀ ನಿವಾಸದಲ್ಲಿ ಈ ಸರಳ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಈ ವೇಳೆ ವರನ ಮನೆಯವರು ಸೀರೆ,ಒಡವೆ,ಹೂವು-ಹಣ್ಣಿನ ಜೊತೆ ಭಾರತಮಾತೆಯ ಪೋಟೋವನ್ನು ವಧುವಿಗೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಿದ್ಯಾಶ್ರೀ ಕುಟುಂಬವೂ ವರನ ಮನೆಗೆ ಭಾರತಾಂಬೆಯ ಪೋಟೋ ನೀಡಿದೆ.

ಈ ವಿಭಿನ್ನ ಹಾಗೂ ಅರ್ಥಪೂರ್ಣ ನಿಶ್ಚಿತಾರ್ಥಕ್ಕೆ ವಧು-ವರರ ಸ್ನೇಹಿತರು,ಬಂಧುಮಿತ್ರರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದು ಶುಭಹಾರೈಸಿದ್ದಾರೆ.  

Comments are closed.