ತಿರುಪತಿ : ವಿಶ್ವದಾದ್ಯಂತ ಮರಣ ಮೃದಂಗವನ್ನು ಬಾರಿಸುತ್ತಿರೋ ಕೊರೊನಾ ವೈರಸ್ ಭೀತಿ ಇದೀಗ ದೇಶವನ್ನು ಕಾಡುತ್ತಿದೆ. ದೇಶದಲ್ಲಿ ಹೆಚ್ಚುತ್ತಿರೊ ಕೊರೊನಾ ಎಫೆಕ್ಟ್ ಇದೀಗ ದೇಶದ ಪ್ರಮುಖ ಪುಣ್ಯಕ್ಷೇತ್ರವಾಗಿರೋ ತಿರುಪತಿ ತಿರುಮಲ ದೇವಸ್ಥಾನಕ್ಕೂ ತಟ್ಟಿದೆ. ಕೆಮ್ಮು, ನೆಗಡಿ, ಜ್ವರ ಇರೋ ಭಕ್ತರು ತಿರುಮಲಕ್ಕೆ ಬರೋದೆ ಬೇಡಾ ಅಂತಾ ಟಿಟಿಡಿ ಆಡಳಿತ ಮಂಡಳಿ ಮನವಿ ಮಾಡಿದೆ.
ತಿರುಪತಿಯಲ್ಲಿರೋ ಶ್ರೀನಿವಾಸ ಪದ್ಮಾವತಿಯ ದರ್ಶನಕ್ಕೆ ನಿತ್ಯವೂ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ಆದ್ರೀಗ ಕೊರೊನಾ ವೈರಸ್ ತಿರುಪತಿಗೆ ಬರೋ ಭಕ್ತರಿಗೂ ಹರಡುವ ಆತಂಕ ಎದುರಾಗಿದೆ.
ಕೊರೊನಾ ತಪಾಸಣೆಗಾಗಿ ಈಗಾಗಲೇ ದೇವಸ್ಥಾನಕ್ಕೆ ಆಗಮಿಸೋ ಭಕ್ತರಿಗಾಗಿ ಥರ್ಮಲ್ ಸ್ಕ್ರೀನಿಂಗ್ ಕ್ರಮಕೈಗೊಳ್ಳಲಾಗುತ್ತಿದೆ. ಮಾತ್ರವಲ್ಲ ತಿರುಪತಿಗೆ ಬರೋ ಭಕ್ತರಿಗೆ ಜ್ವರ ಕಾಣಿಸಿಕೊಂಡ್ರೆ ಅಂತವರನ್ನು ವೆಂಕಟೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಕೊರೊನಾ ವೈರಸ್ ಸೋಂಕು ಹರಡದಂತೆ ತಿರುಪತಿಯಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ತರುವಂತೆ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಸೂಚನೆಯನ್ನು ನೀಡಿದೆ.