ಬೆಂಗಳೂರು : ಕೊರೊನಾ ಚಿಕಿತ್ಸೆಯ ವಿಚಾರದಲ್ಲಿ ರಾಜ್ಯ ಸರಕಾರ ಹೊಸ ಗೈಡ್ ಲೈನ್ಸ್ ಪ್ರಕಟಿಸಿದ್ದು, ಕೋವಿಡ್ ರಿಪೋರ್ಟ್ ಇನ್ಮುಂದೆ ರೋಗಿಗಳ ಕೈಗೆ ನೀಡಲಾಗುತ್ತದೆ. ಅಲ್ಲದೇ ರೋಗಿಗಳ ಕೈಗೆ ನೀಡಬಾರದೆಂಬ ಆದೇಶವನ್ನು ಸರಕಾರ ವಾಪಾಸ್ ಪಡೆದಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಡ್ ಸಮಸ್ಯೆ ಎದುರಾಗಿದ್ದು, ರೋಗಿಗಳು ರಸ್ತೆಯಲ್ಲಿ ಬಂದು ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೋವಿಡ್ ತಪಾಸಣಾ ವರದಿಯನ್ನು ರೋಗಿಗಳ ಕೈಗೆ ನೀಡದಂತೆ ಆದೇಶ ಹೊರಡಿಸಿತ್ತು. ಆದ್ರೆ ಸರಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ರಾಜ್ಯ ಸರಕಾರ ತನ್ನ ಆದೇಶವನ್ನು ವಾಪಾಸ್ ಪಡೆದಿದೆ. ಅಲ್ಲದೇ ಖಾಸಗಿ ಲ್ಯಾಬ್ ಗಳಲ್ಲಿಯೂ ಕೊರೊನಾ ಟೆಸ್ಟಿಂಗ್ ವರದಿಯನ್ನು ರೋಗಿಗಳ ಕೈಗೆ ನೀಡುವಂತೆ ಆದೇಶಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ್ರೆ 1912 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕರೆ ಮಾಡಿ ಆರೋಗ್ಯ ಸಮಸ್ಯೆಯನ್ನು ತಿಳಿಸಿದ್ರೆ, ಕೂಡಲೇ ಬೆಡ್ ವ್ಯವಸ್ಥೆಯನ್ನು ಮಾಡಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ರೋಗಿಗಳನನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಕೂಡಲೇ ಐಸೋಲೇಶನ್ ವಾರ್ಡ್ ಗೆ ಶಿಫ್ಟ್ ಮಾಡಿ ಕೊರೊನಾ ಟೆಸ್ಟ್ ನಡೆಸಲಾಗುತ್ತದೆ. ಒಂದೊಮ್ಮೆ ನೆಗೆಟಿವ್ ರಿಪೋರ್ಟ್ ಬಂದ್ರೆ ಸಾಮಾನ್ಯ ಸೆಂಟರ್ ಗೆ ಶಿಫ್ಟ್ ಮಾಡಲಾಗುತ್ತದೆ. ಅದ್ರಲ್ಲೂ SARI, COPD, ILI ಹಾಗೂ ಅಸ್ತಮಾ ರೋಗಿಗಳಿಗೆ ಕೂಡಲೇ ಚಿಕಿತ್ಸೆಯನ್ನು ನೀಡಲಾಗುತ್ತದೆ.