ಬಿಎಸ್ ವೈ ಬಂಡವಾಳ ನನ್ನ ಕೈಯಲ್ಲಿದೆ : ಯಡಿಯೂರಪ್ಪಗೆ ಕುಮಾರಸ್ವಾಮಿ ವಾರ್ನಿಂಗ್

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾರ್ನಿಂಗ್ ಕೊಟ್ಟಿದ್ದಾರೆ. ಯಡಿಯೂರಪ್ಪನವರೇ ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ. ನನ್ನ ತಂಟೆಗೆ ಬಂದ್ರೆ ಹುಷಾರ್ ಎಂದು ಕುಮಾರಸ್ವಾಮಿ ಎಚ್ಚರಿಕೆ ಯನ್ನು ರವಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನಾನು ಸಿಡಿ ಇಟ್ಟುಕೊಂಡು ರಾಜಕಾರಣ ಮಾಡೋದಿಲ್ಲ. ಬದಲಾಗಿ ರಾಜಕೀಯವಾಗಿ ಬಳಸಿಕೊಳ್ಳುವ ದಾಖಲೆಗಳೇ ಬೇರೆ. ಯಡಿಯೂರಪ್ಪ ದರೋಡೆಕೋರರನ್ನು ಮತ್ತು ಕಳ್ಳರನ್ನು ಸೇರಿಸಿಕೊಂಡಿ ದ್ದಾರೋ ಗೊತ್ತಿಲ್ಲ. ಇದುವರೆಗೂ ನಾನು ಮೌನವಾಗಿದ್ದೆ. ಆದರೆ ಜೆಡಿಎಸ್ ಮುಗಿಸಲು ಯಡಿಯೂರಪ್ಪಗೆ ಇನ್ನೊಂದು ಜನ್ಮ ಹುಟ್ಟಿ ಬಂದರೂ ಆಗೋದಿಲ್ಲ ಎಂದಿದ್ದಾರೆ. ಇದುವರೆಗೂ ಅವರು ನನ್ನ ಹಾಗೂ ನನ್ನ ಪಕ್ಷದ ತಂಟೆಗೆ ಬಂದಿಲ್ಲ ಹಾಗಾಗಿ ಯಡಿಯೂರಪ್ಪ ಸೇಫ್ ಆಗಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ನಾಯಕರೊಬ್ಬರು ಜೆಡಿಎಸ್ ನ್ನು ಬಿಜೆಪಿಯ ಬಿಟೀಂ ಎಂದಿದ್ದರು. ಆದ್ರೀಗ ಆರ್ ಎಸ್ಎಸ್ ಮೂಲಗಳ ಪ್ರಕಾರ ಎಪ್ರೀಲ್ ತಿಂಗಳಲ್ಲಿ ಯಡಿಯೂರಪ್ಪ ಬದಲಾಗಲಿದ್ದಾರೆ. ಹಾಗಾದ್ರೆ ಅವರು ಆರ್ ಎಸ್ಎಸ್ ನ ಬಿ ಟೀಮ್ ಇರಬೇಕು. ಅವರಿಗೆ ಆರ್ ಎಸ್ಎಸ್ ಮೂಲಗಳಿಂದಲೇ ಗೊತ್ತಾಗುತ್ತಾ ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಈ ಹಿಂದೆ ಯಡಿಯೂರಪ್ಪ ತಾನು 10 ವರ್ಷಗಳ ಕಾಲ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದು ಹೇಳಿದ್ದರು. ಆದರೆ ಆ ಮೇಲೆ ಅವರು ಎಲ್ಲಿಗೆ ಹೋದರು ? ಸಿಪಿ ಯೋಗೀಶ್ವರ್ ಅವರು ಒಂಬತ್ತು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಮನೆ ಮಾರಿ ಸಾಲ ಮಾಡಿ ಖರ್ಚು ಮಾಡಿದ್ದಾರೆ ಅಂತಾ ನೀರಾವರಿ ಸಚಿವರು ಆರೋಪ ಮಾಡಿದ್ದಾರೆ. ನನ್ನ ಅವಧಿಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದರು. ಈಗ ಅವರೆಲ್ಲಾ ಎಲ್ಲಿ ಹೋದರು ಎಂದು ಐಟಿ ಅಧಿಕಾರಿಗಳ ವಿರುದ್ದವೂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Comments are closed.