ಹೆರಾಡಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನೀರು ಪಾಲು

0

ಬ್ರಹ್ಮಾವರ : ಮೀನು ಹಿಡಿಯಲು ನದಿಗೆ ಇಳಿದಿದ್ದ ಯುವಕರಿಬ್ಬರು ನೀರು ಪಾಲಾದ ಘಟನೆ ಉಡುಪಿ ಜಿಲ್ಲೆಯ ಬಾರಕೂರಿನ ಹೊಸಾಳದಲ್ಲಿ ನಡೆದಿದೆ.

ಬಾರಕೂಡಿನ ಹೆರಾಡಿಯ ಕವಲೇಶ್ವರಿಯ ನಿವಾಸಿಗಳಾದ ಹರ್ಷ (24 ವರ್ಷ) , ಕಾರ್ತಿಕ್ (21 ವರ್ಷ) ಎಂಬವರೇ ನೀರುಪಾಲಾದವರು. ಭಾರಿ ಮಳೆಯ ಹಿನ್ನೆಲೆಯಲ್ಲಿ ಸೀತಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ನಿನ್ನೆ ನದಿಗೆ ಮೀನಿನ ಬಲೆಯನ್ನು ಕಟ್ಟಿಬಂದಿದ್ದರು. ಇಂದು ಬೆಳಗ್ಗೆ ಬಲೆಯಲ್ಲಿದ್ದ ಮೀನನ್ನು ತೆಗೆಯಲು ಹರ್ಷ ಮೊದಲು ನೀರಿಗೆ ಇಳಿದಿದ್ದ. ನಂತರ ಹರ್ಷ ನದಿಯಲ್ಲಿದ್ದ ಕೆಸರಿನಲ್ಲಿ ಸಿಲುಕಿ ಮುಳುಗುವುದನ್ನು ಗಮನಿಸಿದ ಕಾರ್ತಿಕ್ ಕೂಡ ನದಿಗೆ ಇಳಿದಿದ್ದಾನೆ. ಈ ವೇಳೆಯಲ್ಲಿ ಇಬ್ಬರೂ ಕೂಡ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮನೆಯ ಸಮೀಪದಲ್ಲಿಯೇ ಈ ಘಟನೆ ನಡೆದಿದ್ದು, ಸ್ಥಳೀಯರು ಇಬ್ಬರ ರಕ್ಷಣೆಗೆ ಮುಂದಾದ್ರೂ ರಕ್ಷಿಸುವುದಕ್ಕೆ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಬ್ರಹ್ಮಾವರ ಠಾಣೆಯ ಪೊಲೀಸರು ಆಗಮಿಸಿದ್ದರು. ಸ್ಥಳೀಯರು ಇಬ್ಬರ ಶವಗಳನ್ನು ನದಿಯಿಂದ ಮೇಲಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿಯ ಶ್ರೀರಾಂ ಫೈನಾನ್ಸ್ ನಲ್ಲಿ ಲೋನ್ ರಿಕವರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ರೆ, ಕಾರ್ತಿಕ್ ಬಾರಕೂರು ಸರಕಾರಿ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ.

Leave A Reply

Your email address will not be published.