ಅನಗತ್ಯ ಸಂಚಾರ ತಡೆಗೆ ದಿಟ್ಟಕ್ರಮ : ಜಿಲ್ಲೆ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್ : ರೋಡಿಗಿಳಿದ್ರೆ ಹುಷಾರ್ !

ನವದೆಹಲಿ : ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಜನರು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸುವ ಸಲುವಾಗಿ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳನ್ನು ಬಂದ್ ಮಾಡುವ ಕಠಿಣ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದೆ.

ದೇಶದಾದ್ಯಂತ ಡೆಡ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ. ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬಾರದು ಅಂತಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೂ ಜನ ಅನಗತ್ಯವಾಗಿ ಮನೆಯಿಂದ ಹೊರಬರುತ್ತಿದ್ದಾರೆ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ ಆದೇಶ ಪಾಲನೆಯಾಗುತ್ತಿಲ್ಲ. ಅದ್ರಲ್ಲೂ ಹೆದ್ದಾರಿಗಳಲ್ಲಿ ವಾಹನ ಸಂಚಾರ ನಿರಂತರ ವಾಗುತ್ತಿದೆ. ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಸೂಚನೆಯನ್ನು ನೀಡಿದ್ದಾರೆ.

ಇದೀಗ ಜನರು ಮನೆಯಿಂದ ಹೊರ ಬರದಂತೆ ತಡೆಯೋ ನಿಟ್ಟಿನಲ್ಲಿ ಕೇಂದ್ರ ಸರಕಾರ ಖಡಕ್ ನಿರ್ಧಾರ ಕೈಗೊಂಡಿದೆ. ದೇಶದಲ್ಲಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಹೆದ್ದಾರಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ.

ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ವಾಹನಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಿಗೂ ಪ್ರವೇಶ ನಿಷೇಧಿಸಲಾಗಿದೆ. ಕೇಂದ್ರ ಸರಕಾರ ಈಗಾಗಲೇ ಆದೇಶವನ್ನು ಎಲ್ಲಾ ರಾಜ್ಯಗಳಿಗೂ ರವಾನೆ ಮಾಡಿದೆ. ಒಂದೊಮ್ಮೆ ಅನಗತ್ಯವಾಗಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರವಾದ್ರೆ ಆಯಾಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದೆ.

ಡಿಎಂ ಆ್ಯಕ್ಟ್ ಮೂಲಕ ಆದೇಶವನ್ನು ಹೊರಡಿಸಿರುವುದಾಗಿ ತಿಳಿಸಿರೋ ಕೇಂದ್ರ ಸರಕಾರ ಸಂಚಾರ ಮಾಡುವವರ ವಿರುದ್ದವೂ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೇ ವಲಸಿಗರಿಗೆ ಎಸ್ ಡಿಆರ್ ಎಫ್ ನಿಧಿಯಿಂದ ಪುನರ್ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆದೇಶಿಸಿದೆ.

ಕೇಂದ್ರ ಸರಕಾರದ ಆದೇಶದಿಂದಾಗಿ ಇನ್ಮುಂದೆ ಯಾರೂ ಕೂಡ ಮನೆಯಿಂದ ಹೊರಬರುವಂತಿಲ್ಲ. ಅಲ್ಲದೇ ಹೊಸ ಆದೇಶ ಮಾರ್ಚ್ 30ರಿಂದಲೇ ಜಾರಿಗೆ ಬರಲಿದ್ದು, ರಾಜ್ಯ ಸರಕಾರಗಳು ತಮ್ಮ ರಾಜ್ಯಗಳ ಗಡಿಯನ್ನು ಮುಚ್ಚುವಂತೆಯೂ ಸೂಚಿಸಿದ್ದು, ಜಿಲ್ಲೆ, ರಾಜ್ಯಗಳ ಗಡಿಗಳು ಕೂಡ ಬಂದ್ ಆಗುವ ಸಾಧ್ಯತೆಯಿದೆ. ಯಾರಾದ್ರೂ ಪೊಲೀಸರ ಕಣ್ಣು ತಪ್ಪಿಸಿ ಒಂದು ಕಡೆಯಿಂದ, ಇನ್ನೊಂದು ಕಡೆಗೆ ಹೋಗುತ್ತೇವೆ ಅಂತಾ ಭಾವಿಸುವವರಿಗೆ ತಕ್ಕ ಶಾಸ್ತಿಯಾಗೋದಂತೂ ಗ್ಯಾರಂಟಿ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories

Leave a Reply

Your email address will not be published. Required fields are marked *