ಮತ್ತೆ ಮನ್ವಂತರದ ಮೂಲಕ ಕಿರುತೆರೆಗೆ ಮರಳಿದ ಧಾರಾವಾಹಿ ಬ್ರಹ್ಮ ಟಿ.ಎನ್.ಸೀತಾರಾಮ್….!!

ಕನ್ನಡ ಕಿರುತೆರೆಯಲ್ಲಿ ಪ್ರತಿನಿತ್ಯ  ನೂರಾರು ಧಾರಾವಾಹಿಗಳು ಪ್ರಸಾರವಾದರೂ 1990 ದಶಕದಿಂದ ಇಂದಿನವರೆಗೂ ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಗಳಿಗೇ ಅದರದ್ದೇ ತೂಕ,ವಿಶೇಷತೆ,ಆಪ್ತತೆ ಇದೆ. ಈ ಕಾರಣಕ್ಕೆ ಒಂದು ವಿಶೇಷವಾದ ವೀಕ್ಷಕವರ್ಗವೂ ಇದೆ. ಹೀಗೆ ಕಥಾಭಿನ್ನತೆ,ಮನೋರಂಜನೆಯ ಗುಣಮಟ್ಟ,ಭಾಷೆಯ, ಸಂಭಾಷಣೆಯ ಕ್ವಾಲಿಟಿ ಕಾರಣಕ್ಕೆ ವಿಶೇಷವಾದ ಸ್ಥಾನ, ಪ್ರಸಿದ್ಧಿ ಪಡೆದಿರುವ  ಟಿ.ಎನ್.ಸೀತಾರಾಮ ಮತ್ತೆ ಮನ್ವಂತರದ ಮೂಲಕ ಕನ್ನಡಕಿರುತೆರೆಗೆ ಮರಳುತ್ತಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಕನ್ನಡದಲ್ಲಿ ಮತ್ತೊಂದು ಸೀರಿಯಲ್ ನಿರ್ಮಿಸುವುದಾಗಿ ಟಿ.ಎನ್.ಸೀತಾರಾಮ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ ಮ ಅಕ್ಷರದಿಂದ ಹೆಸರೊಂದನ್ನು ಸೂಚಿಸುವಂತೆಯೂ ಪ್ರೇಕ್ಷಕರನ್ನು ಕೋರಿದ್ದರು. ಇದೀಗ ಸೀತಾರಾಮ್ ಮುಂದಿನ ಧಾರಾವಾಹಿಗೆ ಮತ್ತೆ ಮನ್ವಂತರ ಎಂಬ ಹೆಸರಿಡಲಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಟಿ.ಎನ್.ಎಸ್ ಯುಗಾದಿ ನಂತರ ಶೂಟಿಂಗ್ ಆರಂಭಿಸಲಿದ್ದು, ಇನ್ನೇನು ತಿಂಗಳೊಳಗೆ  ಮತ್ತೆಮನ್ವಂತರ ಪ್ರೇಕ್ಷಕರನ್ನು ತಲುಪಲಿದೆ ಎನ್ನಲಾಗುತ್ತಿದೆ.

ಟಿಎನ್ಎಸ್ ಧಾರಾವಾಹಿಗಳ ಇನ್ನೊಂದು ವಿಶೇಷತೆ ಪಾತ್ರವರ್ಗ. ಮಾಯಾಮೃಗದಿಂದ ಆರಂಭಿಸಿ ಮಗಳು ಜಾನಕಿಯವರೆಗೆ ಕಥಾಹಂದರಕ್ಕೆ ಹೊಂದುವಂತ ಪ್ರತಿಭೆಯೊಂದನ್ನು ಜಾಲಾಡಿ ತೆಗೆಯುವ ಟಿ.ಎನ್.ಸೀತಾರಾಮ ಕನ್ನಡ ಕಿರುತೆರೆಗೆ ಹಲವು ಪ್ರತಿಭೆಗಳನ್ನು ಪರಿಚಯಿಸಿದ್ದಾರೆ.

ಮತ್ತೆ ಮನ್ವಂತರದ ಮೂಲಕ ಕೂಡ ಟಿ.ಎನ್.ಸೀತಾರಾಮ್  ನಾಡಿನ ಹೆಸರಾಂತ ಗಾಯಕ ವಿದ್ಯಾಭೂಷಣರ ಪುತ್ರಿ ಹಾಗೂ ಗಾಯಕಿ ಮೇಧಾ ವಿದ್ಯಾಭೂಷಣರನ್ನು ಕಿರುತೆರೆಗೆ ತರಲಿದ್ದಾರೆ.

ಈಗಾಗಲೇ ಮೇಧಾವಿದ್ಯಾಭೂಷಣ ಧಾರಾವಾಹಿ ತಂಡ ಸೇರಿದ್ದಾರೆ. ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜನೀಯರಿಂಗ್ ಓದುತ್ತಿರುವ ಮೇಧಾ ವಿದ್ಯಾಭೂಷಣೆ, ಗಾಯನ,ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ.

https://m.facebook.com/story.php?story_fbid=2839336413008732&id=100007972024941&sfnsn=wiwspwa

ಇದರೊಂದಿಗೆ ಟಿ.ಎನ್.ಸೀತಾರಾಮ ಧಾರಾವಾಹಿಗಳಲ್ಲಿ ಆರಂಭದಿಂದಲೂ ಸ್ಥಾನ ಪಡೆಯುತ್ತ ಬಂದಿರುವ ಮಾಳವಿಕ ಅವಿನಾಶ್ ಸೇರಿದಂತೆ ಹಲವು ಕಲಾವಿದರು ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಎಂದಿನಂತೆ ಟಿಎನ್ಎಸ್ ಮತ್ತೊಮ್ಮೆ ಕರಿಕೋಟಿನಲ್ಲಿ ಮಿಂಚಲಿದ್ದು, ಸೀತಾರಾಮ್ ಪುತ್ರಿ ಧಾರಾವಾಹಿಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರಂತೆ.

ಒಟ್ಟಿನಲ್ಲಿ ಧಾರಾವಾಹಿಯ ಸಂಭಾಷಣೆ,ಕತೆಯ ತಿರುವುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುವಷ್ಟರ ಮಟ್ಟಿಗೆ ಆಪ್ತವಾಗುವ ಟಿ.ಎನ್.ಸೀತಾರಾಮ ಧಾರಾವಾಹಿಗೆ ದಿನಗಣನೆ ನಡೆದಿದೆ. ಮತ್ತೆ ಮನ್ವಂತರಕ್ಕೆ ವೀಕ್ಷಕರು ಕಾದಿದ್ದಾರೆ.

Comments are closed.