ಬೆಂಗಳೂರು: ಕೊರೋನಾ ಎರಡನೇ ಅಲೆಗೆ ರಾಜ್ಯದ ಜನರು ಸಂಕಷ್ಟಕ್ಕಿಡಾಗಿರುವ ಬೆನ್ನಲ್ಲೇ ಮುಂಗಾರು ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಸಮಯವೂ ಸಮೀಪಿಸಿದೆ. ಹೀಗಾಗಿ ರೈತರಿಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಸೂಕ್ತ ಕಾಲದಲ್ಲಿ ರಸಗೊಬ್ಬರ,ಬಿತ್ತನೆ ಬೀಜ ಹಾಗೂ ಅಗತ್ಯ ಸಾಲ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಬಿಎಸ್ವೈರೈತರಿಗೆ ಅಗತ್ಯ ಇರುವ ಡಿಎಪಿ ಗೊಬ್ಬರ ಹಾಗೂ ಯೂರಿಯಾ ಗೊಬ್ಬರ ಸಕಾಲದಲ್ಲಿ ಪೊರೈಸುವಂತೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಪ್ರಸಕ್ತ ವರ್ಷ ಹೆಚ್ಚಿನ ಕೃಷಿ ಸಾಲ ನೀಡಲು ಚಿಂತನೆ ನಡೆಸಲಾಗಿದ್ದು, ಈಗಾಗಲೇ ಶೇಕಡಾ 16 ರಷ್ಟು ಹೆಚ್ಚಿನ ಸಾಲ ವಿತರಣೆಗೆ ನಿರ್ಧರಿಸಲಾಗಿದೆ. 3 ಸಾವಿರ ಕೋಟಿ ಹೆಚ್ಚುವರಿ ಗುರಿ ನಿಗದಿ ಮಾಡಲಾಗಿದ್ದು, 21 ಸಾವಿರ ಕೋಟಿ ಕೃಷಿ ಕಾಲದ ಗುರಿ ಹೊಂದಲಾಗಿದೆ. ಹೀಗಾಗಿ ಇದರ ಸದುಪಯೋಗ ಪಡೆದುಕೊಂಡ ರೈತರು ಕೃಷಿ ಚಟುವಟಿಕೆ ಮುಂದುವರೆಸುವಂತೆ ಸಿಎಂ ಹೇಳಿದ್ದಾರೆ.
ಇದಲ್ಲದೇ ರಾಜ್ಯದಲ್ಲಿ 690 ಕೃಷಿ ಯಂತ್ರ ಧಾರೆ ಕೇಂದ್ರಗಳು ಹಾಗೂ 210 ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಆಧಾರದಲ್ಲಿ ಕೃಷಿಕರಿಗೆ ಯಂತ್ರೋಪಕರಣ ಒದಗಿಸಲು ಸೂಚಿಸಲಾಗಿದೆ ಎಂದು ಬಿಎಸ್ವೈ ಮಾಹಿತಿ ನೀಡಿದ್ದಾರೆ.
ಇದಲ್ಲದೇ ಲಾಕ್ ಡೌನ್ ಸೇರಿದಂತೆ ಯಾವುದೇ ನಿರ್ಬಂಧಗಳು ಕೃಷಿಚಟುವಟಿಕೆಗೆ ಅಡ್ಡಿ ಪಡಿಸದಂತೆ, ಬಿತ್ತನೆ ಬೀಜ ಸೇರಿದಂತೆ ಅಗತ್ಯ ವಸ್ತುಗಳ ಪೊರೈಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿದೆ. ಹೀಗಾಗಿ ಸಿಎಂ ಅಧಿಕಾರಿಗಳ ಸಭೆ ನಡೆಸಿದ್ದು ಸೌಲಭ್ಯ ಒದಗಿಸಲು ಸೂಚನೆ ರವಾನಿಸಿದ್ದಾರೆ.
Comments are closed.