ಕೊರೊನಾ ಲಾಕ್ ಡೌನ್ ನಿಂದ ಹಲವು ಜಿಲ್ಲೆಗಳಿಗೆ ವಿನಾಯಿತಿ : ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್, ಉಡುಪಿಗೆ ಬಿಗ್ ರಿಲೀಫ್ ?
ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿರೋ ರಾಜ್ಯದ ಹಲವು ಜಿಲ್ಲೆಗಳಿಗೆ ರಾಜ್ಯ ಸರಕಾರ ವಿನಾಯಿತಿ ನೀಡಿದೆ. ಅದ್ರಲ್ಲೂ ಗ್ರೀನ್ ಝೋನ್ ನಲ್ಲಿರುವ 14 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ರೆಡ್ ಝೋನ್ ನಲ್ಲಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಮುಂದುವರಿಯಲಿದೆ.
ರೆಡ್ ಝೋನ್ ಜಿಲ್ಲೆಯಲ್ಲಿರುವ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಕಲಬುರಗಿ, ಬಾಗಲಕೋಟೆ ಹಾಗೂ ಆರೆಂಜ್ ಝೋನ್ ನಲ್ಲಿರುವ ದಕ್ಷಿಣ ಕನ್ನಡ ಹಾಗೂ ಬೀದರ್ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಮುಂದುವರಿಯಲಿದೆ.
ಆದರೆ ಗ್ರೀನ್ ಝೋನ್ ನಲ್ಲಿರುವ ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ಹಾಸನ, ರಾಮನಗರ, ದಾವಣಗೆರೆ, ಶಿವಮೊಗ್ಗ, ಯಾದಗಿರಿ, ಕೊಡಗು, ಕೋಲಾರ ಹಾಗೂ ಹಾವೇರಿ ಜಿಲ್ಲೆಗಳಿಗೆ ವಿನಾಯಿತಿ ಸಿಕ್ಕಿದೆ.
ಆದರೆ ರಾಮನಗರ ಜಿಲ್ಲೆಗಳಲ್ಲಿ ಕೈಗಾರಿಕೆ ಹೊರತು ಪಡಿಸಿ ಉಳಿದ ಅಂಗಡಿ ತೆರೆಯೋದಕ್ಕಷ್ಟೇ ಅವಕಾಶ ನೀಡಲಾಗಿದೆ. ಆದರೆ ಈ ಜಿಲ್ಲೆಗಳಲ್ಲಿ ಮಲ್ಟಿ ಬ್ರ್ಯಾಂಡ್ ಶಾಪ್ ಹಾಗೂ ಮಾಲ್ ಗಳನ್ನು ತೆರೆಯಲು ಅವಕಾಶವಿಲ್ಲ. ಮಂಡ್ಯ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಲಾಪುರ, ತುಮಕೂರು, ಗದಗ, ಧಾರವಾಡ, ಬಳ್ಳಾರಿ ಜಿಲ್ಲೆಗಳ ಹಲವು ತಾಲೂಕುಗಳಿಗೆ ರಿಲೀಫ್ ನೀಡಲಾಗಿದ್ದು, ಉಸ್ತುವಾರಿ ಸಚಿವರ ವಿವೇಚನೆಗೆ ಬಿಡಲಾಗಿದೆ.
ಗ್ರೀನ್ ಜೋನ್ ನಲ್ಲಿರುವ ಜಿಲ್ಲೆಗಳಲ್ಲಿನ ಕೈಗಾರಿಕೆ ತೆರೆಯಲು ವಿನಾಯಿತಿ ನೀಡಲಾಗಿದೆ. ಆದರೆ ಶೇ.50 ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ಉದ್ಯೋಗಿಗಳು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಂಡಿರಬೇಕು. ಕಾರ್ಮಿಕರಿಗೆ ಕಂಪೆನಿಗಳೇ ವಾಹನದ ವ್ಯವಸ್ಥೆಯನ್ನು ಕಲ್ಪಿಸಬೇಕು.
ಅಲ್ಲದೇ ಉದ್ಯೋಗಿಗಳು ಕೈಗಾರಿಕಾ ಪ್ರದೇಶದಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕ ಸಾರಿಗೆ, ಕ್ಯಾಬ್, ಆಟೋ ಚಾಲನೆಗೆ ನಿಷೇಧ ಮುಂದುವರಿಯಲಿದೆ. ಅಲ್ಲದೇ ಶೈಕ್ಷಣಿಕ ಸಂಸ್ಥೆಗಳು, ಥೀಯೇಟರ್, ಮಾಲ್, ಪಾರ್ಕ್ ಗಳ ಮೇಲೆ ನಿಷೇಧ ಹೇರಲಾಗಿದೆ. ಮದ್ಯ ಮಾರಾಟ ನಿಷೇಧವನ್ನು ಮೇ 3ರ ವರೆಗೂ ಮುಂದುವರಿಸಲಾಗಿದ್ದು, ರಾಜ್ಯ ಸರಕಾರದ ವಿನಾಯಿತಿ ಕೂಡ ಮೇ 3ರ ವರೆಗೆ ಜಾರಿಯಲ್ಲಿರಲಿದೆ.