ಮಂಗಳೂರು ಕಾರ್ ಡೀಲ್ ಪ್ರಕರಣ : ಕಬ್ಬಾಳ್ ರಾಜ್ ಸೇರಿ ನಾಲ್ವರ ವಿರುದ್ದ ಡಿಐಜಿಗೆ ವರದಿ ಸಲ್ಲಿಕೆ

ಮಂಗಳೂರು : ಐಶಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪಿಎಸ್ ಐ ಕಬ್ಬಾಳ್ ರಾಜ್, ನಾರ್ಕೋಟಿಕ್ ಠಾಣೆಯ ಎಸ್ ಐ ರಾಮಕೃಷ್ಣ,ಸಿಸಿಬಿ ಎಚ್ಸಿ ಆಶಿತ್ ಡಿ’ಸೋಜಾ, ರಾಜಾ ಹಾಗೂ ಮಧ್ಯವರ್ತಿ ದಿವ್ಯ ದರ್ಶನ್ ವಿರುದ್ದ ಡಿಐಜಿ ಪ್ರವೀಣ್ ಸೂದ್ ಅವರಿಗೆ ಸಿಐಡಿ ವರದಿ ಸಲ್ಲಿಸಿದೆ.

ರಮ್ಯಾ ಎಂಬವರು ನಾಲ್ಕು ಲಕ್ಷ ರೂಪಾಯಿ ವಂಚನೆಯಾಗಿರುವ ಕುರಿತು ಕೇರಳ ಮೂಲದ ಕನ್ ಸ್ಟ್ರಕ್ಷನ್ ಕಂಪೆನಿ ವಿರುದ್ದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಇಳಿದ ಸಿಸಿಬಿ ಪಿಎಸ್ ಐ ಕಬ್ಬಾಳ್ ರಾಜ್ ನೇತೃತ್ವದ 9 ಮಂದಿ ಅಧಿಕಾರಿಗಳ ತಂಡ ಆರೋಪಿಗಳಿಗೆ ಸೇರಿದ ಬ್ಯಾಂಕ್ ಖಾತೆಯನ್ನು ಸೀಝ್ ಮಾಡಿತ್ತು.

ನಂತರದಲ್ಲಿ ಆರೋಪಿಗಳಿಗೆ ಸೇರಿದ ಪೋರ್ಷ್ ಕಾರನ್ನು ಬೆಳ್ತಂಗಡಿ, ಬಿಎಂಡಬ್ಲ್ಯೂ ಕಾರನ್ನು ಕಂಕನಾಡಿ ಹಾಗೂ ಜಗ್ವಾರ್ ಕಾರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿತ್ತು. ಆದರೆ ಕಾರನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳನ್ನು ಕಾರಿನ ಕೀಯನ್ನು ತನಿಖಾಧಿಕಾರಿ ರಾಮಕೃಷ್ಣ ಅವರ ಮುಂದೆ ಹಾಜರು ಪಡಿಸಿರಲಿಲ್ಲ. ಅಲ್ಲದೇ ಐಶಾರಾಮಿ ಕಾರನ್ನು ಕಳೆದ ಅಕ್ಟೊಬರ್ ವರೆಗೂ ಸ್ವಂತಃಕ್ಕೆ ಬಳಕೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಸುಮಾರು 80 ಲಕ್ಷ ಬೆಲೆ ಬಾಳುವ ಜಾಗ್ವಾರ್ ಕಾರನ್ನು ಬೆಂಗಳೂರು ಮೂಲದ ತೇಜ್ ಬಹದ್ದೂರ್ ಸಿಂಗ್ ಎಂಬವರಿಗೆ ಸುಮಾರು 18 ಲಕ್ಷ ರೂಪಾಯಿಗೆ ಮಧ್ಯವರ್ತಿ ದಿವ್ಯದರ್ಶನ್ ಎಂಬಾತನ ಮೂಲಕ ಮಾರಾಟ ಮಾಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ನಗರ ವ್ಯಾಪ್ತಿಯ ಕೇಸುಗಳ ಕಡತ ಪರಿಶೀಲನೆಯ ವೇಳೆಯಲ್ಲಿ ಈ ವಿಷಯ ಬಯಲಿಗೆ ಬಂದಿದೆ. ಕಾರುಗಳ ಬಗ್ಗೆ ಮಾಹಿತಿ ಕೇಳಿದಾಗ ಪೋರ್ಷ್ ಹಾಗು ಬಿಎಂಡಬ್ಲ್ಯು ಕಾರು ಮಂಗಳೂರಲ್ಲಿ ಪತ್ತೆಯಾಗಿತ್ತು. ಆದರೆ ಜಾಗ್ವಾರ್ ಕಾರು ನಾಪತ್ತೆಯಾಗಿದ್ದು, ಈ ಬಗ್ಗೆ ತನಿಖೆಗೆ ಮುಂದಾಗುತ್ತಿದ್ದಂತೆಯೇ ಕಾರು ಮಾರಾಟ ವಾಗಿರುವುದು ಬೆಳಕಿಗೆ ಬಂದಿದೆ.

ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ರಾಮಕೃಷ್ಣ, ಪಿಎಸ್ಐ ಕಬ್ಬಾಳ್ ರಾಜ್ ಸೇರಿದಂತೆ ನಾಲ್ವರು ಪೊಲೀಸರು ಹಾಗೂ ಮಧ್ಯವರ್ತಿಯ ವಿರುದ್ದ ವರದಿ ಸಲ್ಲಿಕೆಯಾಗಿದ್ದು, ಸಿಐಡಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Comments are closed.