ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದೆ. ಕೊರೊನಾ ಸೋಂಕಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವಲ್ಲೇ ರಾಜ್ಯ ಸರಕಾರ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಸೋಂಕು ಪೊಲೀಸರನ್ನು ಹೈರಾಣಾಗಿಸಿದೆ. ಜೀವದ ಹಂಗನ್ನು ತೊರೆದು ಪೊಲೀಸ್ ಸಿಬ್ಬಂದಿಗಳು ಕೊರೊನಾ ವಿರುದ್ದ ಹೋರಾಟವನ್ನು ನಡೆಸುತ್ತಿದ್ದಾರೆ. ಈಗಾಗಲೇ 6 ಮಂದಿ ಪೊಲೀಸರನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದ್ರೆ, 324 ಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇನ್ನು 400ಕ್ಕೂ ಅಧಿಕ ಪೊಲೀಸರು ಕ್ವಾರಂಟೈನ್ ನಲ್ಲಿದ್ದಾರೆ. ಈ ನಡುವಲ್ಲೇ ರಾಜ್ಯ ಸರಕಾರ ವರ್ಗಾವಣೆಗೆ ಮುಂದಾಗಿರುವುದು ಪೊಲೀಸರ ಅಸಮಾಧಾನಕ್ಕೆ ಕಾರಣವಾಗಿದೆ.
ಆರಂಭದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎಸ್ಐ ಹಾಗೂ ಎಸಿಪಿಗಳ ವರ್ಗಾವಣೆಗೆ ಮುಂದಾಗಿದ್ದು, 80 ಎಸ್ಐ ಹಾಗೂ 45 ಎಸಿಪಿಗಳ ವರ್ಗಾವಣೆಯ ಪಟ್ಟಿ ಸಿದ್ದವಾಗುತ್ತಿದೆ ಎನ್ನಲಾಗುತ್ತಿದೆ. ವರ್ಗಾವಣೆಗೊಂಡು ಒಂದು ವರ್ಷ ಪೂರೈಸಿರುವವರನ್ನೇ ಸರಕಾರ ವರ್ಗಾಯಿಸಲು ಮುಂದಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ವರ್ಗಾವಣೆ ನಡೆಯಲಿದೆ.
ನಂತರ ರಾಜ್ಯದಾದ್ಯಂತ ವರ್ಗಾವಣೆ ಮುಂದಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ವರ್ಗಾವಣೆಗೆ ಸರಕಾರ ಮುಂದಾಗಿರುವುದು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಇಷ್ಟವಿದ್ದಂತಿಲ್ಲ. ಆದರೆ ಕೆಲವು ಅಧಿಕಾರಿಗಳು ವರ್ಗಾವಣೆ ಮಾಡುವುದಕ್ಕೆ ಸರಕಾರದ ಬೆನ್ನುಬಿದ್ದಿದ್ದಾರೆ.
ಕೊರೊನಾ ನಿಯಂತ್ರಣದ ಹೊತ್ತಲ್ಲೇ ರಾಜ್ಯ ಸರಕಾರ ಪೊಲೀಸರ ವರ್ಗಾವಣೆಗೆ ಮುಂದಾಗಿರುವುದು ಸಹಜವಾಗಿಯೇ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ವರ್ಗಾವಣೆಯ ಹೆಸರಲ್ಲಿ ರಾಜ್ಯ ಸರಕಾರ ಹಣ ಮಾಡಲು ಹೊರಟಿದ್ಯಾ ಅನ್ನುವ ಆರೋಪವೂ ಕೇಳಿಬರುತ್ತಿದೆ.