ಜ್ಯೂನಿಯರ್ ಚಿರು ಆಗಮನಕ್ಕೆ ಕ್ಷಣಗಣನೆ…! ಆಸ್ಪತ್ರೆಗೆ ದಾಖಲಾದ ಮೇಘನಾ ರಾಜ್…!!

ಬೆಂಗಳೂರು: ಕಳೆದ ನಾಲ್ಕು ತಿಂಗಳಿನಿಂದ ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ ಚಿರಂಜೀವಿ ಸರ್ಜಾ ಕುಟುಂಬಕ್ಕೆ ಕೊನೆಗೂ ಖುಷಿಯ ಕ್ಷಣವೊಂದು ಹತ್ತಿರವಾಗುತ್ತಿದೆ. ಜ್ಯೂನಿಯರ್ ಚಿರು ಇಂದೋ ನಾಳೆಯೋ ಧರೆಗೆ ಬರಲಿದ್ದು, ಮೇಘನಾ ಸರ್ಜಾ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆ ಆರೋಗ್ಯ ತಪಾಸಣೆಗೆ ತೆರಳಿದ್ದ ಮೇಘನಾ ರಾಜ್, ವೈದ್ಯರ ಸೂಚನೆ ಮೇರೆಗೆ ಇಂದು ಕೆ..ಆರ್. ರಸ್ತೆಯಲ್ಲಿರುವ ಅಕ್ಷ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಅಥವಾ ನಾಳೆ ಹೆರಿಗೆ ಆಗಲಿದ್ದು ಮೇಘನಾ ರಾಜ್ ಜೊತೆ ಅತ್ತೆ ಅಮ್ಮಾ ಜಿ ಹಾಗೂ ಅಜ್ಜಿ ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ.

ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಕೂಡ ಆಸ್ಪತ್ರೆಗೆ ತೆರಳಿದ್ದು ಮಗಳೊಂದಿಗೆ ಇದ್ದಾರೆ. ಇನ್ನೇನು ಚಿರು ಉತ್ತರಾಧಿಕಾರಿ ಭೂಮಿಗೆ ಬರಲು ಕ್ಷಣಗಣನೆ ನಡೆದ ಬೆನ್ನಲ್ಲೇ ಧ್ರುವ ಸರ್ಜಾ ಕೂಡ ಈ ಖುಷಿಯ ಕ್ಷಣ ಎದುರುಗೊಳ್ಳಲು ಎಲ್ಲ ಸಿದ್ಧತೆ ನಡೆಸಿದ್ದು ಈಗಾಗಲೇ ಬೆಳ್ಳಿಯ ತೊಟ್ಟಿಲು ಹಾಗೂ ಚಿನ್ನದ ತಟ್ಟೆ ಖರೀದಿಸಿದ್ದಾರೆ.

ಚಿರು ದೈಹಿಕವಾಗಿ ತಮ್ಮನ್ನು ಅಗಲಿದರೂ ಮಾನಸಿಕವಾಗಿ ತಮ್ಮೊಂದಿಗೆ ಇದ್ದಾರೆ ಎಂದುಕೊಂಡಿರುವ ಮೇಘನಾ ರಾಜ್ ಹಾಗೂ ಚಿರು ಕುಟುಂಬ, ಚಿರು ಎಲ್ಲ ಆಸೆಗಳನ್ನು ಈಡೇರಿಸುತ್ತಿದೆ.ಚಿರು ಆಸೆಯಂತೆ ಧ್ರುವ ಬೆಳ್ಳಿಯ ತೊಟ್ಟಿಲು ಹಾಗೂ ಚಿನ್ನದ ತಟ್ಟೆ ತಂದಿದ್ದಾರೆ.

ಇನ್ನು ಮೇಘನಾ ಕೂಡ ತಮಗೆ ಇಷ್ಟ ಇಲ್ಲದಿದ್ದರೂ ಚಿರು ಆಸೆ ಈಡೇರಿಸಿಕೊಳ್ಳಲು ಅದ್ದೂರಿ ಸೀಮಂತ ಹಾಗೂ ಬೇಬಿ ಶವರ್ ಶಾಸ್ತ್ರ ಮಾಡಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ ಚಿರು ತನ್ನ ಮಗು ತನ್ನ ಆತ್ಮೀಯ ಸ್ನೇಹಿತನ ಮಾಲೀಕತ್ವದ ಹಾಸ್ಪಿಟಲ್ ನಲ್ಲೇ ಹುಟ್ಟಬೇಕೆಂದು ಹೇಳಿಕೊಂಡಿದ್ದರಂತೆ. ಇದೇ ಕಾರಣಕ್ಕೆ ಚಿರು ಆಸೆಯಂತೆ ಮೇಘನಾ ಕೆ.ಆರ್. ರಸ್ತೆಯ ಅಕ್ಷ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರ ಮಾಹಿತಿ ಪ್ರಕಾರ ಮೇಘನಾ ಆರೋಗ್ಯ ಸ್ಥಿರವಾಗಿದ್ದು ಇಂದು ಸಂಜೆ ಅಥವಾ ನಾಳೆ ಹೆರಿಗೆಯಾಗೋ ಸಾಧ್ಯತೆ ಇದೆ.

ಹೀಗಾಗಿ ನವರಾತ್ರಿ ಶುಭ ಸಂದರ್ಭದಲ್ಲಿ ಚಿರಂಜೀವಿ ರೂಪದಲ್ಲಿ ಸರ್ಜಾ ಕುಟುಂಬಕ್ಕೆ ಲಕ್ಷ್ಮೀಯೋ, ಕೃಷ್ಣನೋ, ಅಥವಾ ಅವಳಿ ಜವಳಿಯೋ ಬರೋದು ಫಿಕ್ಸ್ ಆಗಿದ್ದು, ಹೆರಿಗೆ ಸುರಕ್ಷಿತವಾಗಿ ತಾಯಿ-ಮಗು ಆರೋಗ್ಯಕರವಾಗಿರಲಿ ಅನ್ನೋದು ಅಭಿಮಾನಿಗಳ ಹಾರೈಕೆಯಾಗಿದೆ.

Comments are closed.