ನಶೆ ರಾಣಿಯರಿಗಿಲ್ಲ ಜಾಮೀನು…! ತೀರ್ಪು ಕಾಯ್ದಿರಿಸಿದ ನ್ಯಾಯಾಲಯ..!!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಡಿ ಜೈಲು ಸೇರಿದ ನಟಿಮಣಿಯರಾದ ರಾಗಿಣಿ ಹಾಗೂ ಸಂಜನಾಗೆ ಸಧ್ಯಕ್ಕಂತೂ ಜಾಮೀನು ಸಿಗುವ ಸಾಧ್ಯತೆಗಳು ಇಲ್ಲವಾಗಿದ್ದು, ದಸರಾ ಹಬ್ಬವನ್ನು ಜೈಲಿನಲ್ಲೇ ಆಚರಿಸಬೇಕಾದ ಸ್ಥಿತಿ ಎದುರಾಗಿದೆ.

ಸಂಜನಾ ಹಾಗೂ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸಂಜನಾ,ರಾಗಿಣಿ ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿದ್ದು, ತೀರ್ಪನ್ನು ಮುಂದಿನ ವಾರಕ್ಕೆ ಕಾಯ್ದಿರಿಸಿ ವಿಚಾರಣೆ ಮುಂದೂಡಿದೆ.

ಸಂಜನಾ ಪರ ವಾದ ಮಂಡಿಸಿದ ವಕೀಲರಾದ ಹಜಮತ್ ಪಾಷಾ, ಸಂಜನಾ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಸರ್ಚ್ ವಾರೆಂಟ್ ಹಾಗೂ ಬಂಧನದ ವೇಳೆಯೂ ಯಾವುದೇ ನಿಯಮ ಪಾಲನೆಯಾಗಿಲ್ಲ. ವಿನಾಕಾರಣ ಸಂಜನಾರನ್ನು ಬಂಧಿಸಲಾಗಿದೆ. ನನ್ನ ಕಕ್ಷಿದಾರರು ನಿರ್ದೋಷಿ ಎಂದು ವಾದ ಮಂಡಿಸಿದರು.

ಇನ್ನು ರಾಗಿಣಿ ಪರ ವಾದ ಮಂಡಿಸಿದ ವಕೀಲರು, ರಾಗಿಣಿ ಮನೆಯಲ್ಲಿ ಡ್ರಗ್ಸ್ ಪತ್ತೆಯಾಗಿಲ್ಲ. ಅಲ್ಲದೇ ಆಕೆ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅಲ್ಲದೇ ಆಕೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜಾಮೀನು ನೀಡಬೇಕೆಂದು ವಾದ ಮಂಡಿಸಿದ್ದಾರೆ.

ಆದರೆ ಸರ್ಕಾರದ ಪರ ವಕೀಲರು ಬಂಧಿತರು ಪ್ರಭಾವಿಗಳಾಗಿರೋದರಿಂದ ಹಾಗೂ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ತನಿಖೆ ಇನ್ನು ಪ್ರಗತಿಯಲ್ಲಿರೋದರಿಂದ ಜಾಮೀನು ನೀಡಬಾರದೆಂದು ಮನವಿ ಮಾಡಿದ್ದಾರೆ.

ಮುಂದಿನ ವಾರ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿರೋದರಿಂದ ರಾಗಿಣಿ ಹಾಗೂ ಸಂಜನಾ ಜೈಲುವಾಸ ಇನ್ನು ಒಂದು ವಾರ ಅನಿವಾರ್ಯವಾಗಿದ್ದು, ದಸರಾ ಹಬ್ಬವನ್ನು ಜೈಲಿನಲ್ಲೇ ಆಚರಿಸಬೇಕಾದ ಸ್ಥಿತಿ ಎದುರಾಗಿದೆ. ಮುಂದಿನ ವಾರವಾದ್ರೂ ನಟಿಮಣಿಯರು ಜೈಲಿನಿಂದ ಹೊರಬರ್ತಾರಾ ಅನ್ನೋದನ್ನು ನ್ಯಾಯಾಲಯ ತೀರ್ಮಾನಿಸಲಿದೆ.

Comments are closed.