ಮಾಧ್ಯಮಗಳ ವಿರುದ್ಧ ಸಮರ‌ಸಾರಿದ ಶಿಲ್ಪಾ ಶೆಟ್ಟಿ….! 25 ಕೋಟಿ ಪರಿಹಾರಕ್ಕೆ ಡಿಮ್ಯಾಂಡ್…!!

ಪತಿ ರಾಜ್ ಕುಂದ್ರಾ ಜೈಲು ಸೇರುತ್ತಿದ್ದಂತೆ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿರುವ ನಟಿ ಶಿಲ್ಪಾ ಶೆಟ್ಟಿ, ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸಿದಂತೆ ತಡೆಕೋರಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತನ್ನ ಹಾಗೂ ಕುಟುಂಬದ ವಿರುದ್ಧ ಮಾನಹಾನಿ ಸುದ್ದಿಗಳನ್ನು ಪ್ರಕಟಿಸಿರುವ ಮಾಧ್ಯಮಗಳು ಎಲ್ಲ ಸುದ್ದಿಗಳನ್ನು ತೆಗೆದುಹಾಕಬೇಕು. ಇನ್ನು ಮುಂದೇ ಯಾವುದೇ ಮಾನಹಾನಿ ವರದಿ ಪ್ರಕಟಿಸಬಾರದು. ಅಲ್ಲದೇ ೨೫ ಕೋಟಿ ಪರಿಹಾರ ನೀಡಬೇಕೆಂದು ಶಿಲ್ಪಾ ಶೆಟ್ಟಿ ಅರ್ಜಿಯಲ್ಲಿ ಕೋರಿದ್ದಾರೆ.

ಟಿವಿ ಮಾಧ್ಯಮಗಳು, ದಿನಪತ್ರಿಕೆ, ಸೋಷಿಯಲ್ ಮೀಡಿಯಾ, ಯೂಟ್ಯೂಬ್, ವೆಬ್ ಸೈಟ್ ಸೇರಿದಂತೆ ಎಲ್ಲ ರೀತಿಯ ಮಾಧ್ಯಮಗಳ ವಿರುದ್ಧವೂ ಶಿಲ್ಪಾ ಶೆಟ್ಟಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ನನ್ನ ಹಾಗೂ ಪತಿ ರಾಜ್ ಕುಂದ್ರಾ ವಿಚಾರದಲ್ಲಿ ಮಾಧ್ಯಮಗಳು ತಪ್ಪಾದ ಸುದ್ದಿ ಪ್ರಕಟಿಸುತ್ತಿವೆ. ಕೇವಲ ಊಹಾಪೋಹ, ಗಾಸಿಪ್ ಹಾಗೂ ಕಪೋಲಕಲ್ಪಿತ ಸುದ್ದಿಗಳನ್ನು ಪ್ರಕಟಿಸ ಲಾಗುತ್ತಿದೆ. ಮಾಧ್ಯಮಗಳು ನಮ್ಮ ವೈಯಕ್ತಿಕ ಬದುಕಿನ ಮೇಲೆ ದಾಳಿ ಮಾಡುತ್ತಿದ್ದು ಗೌಪ್ಯತೆಯನ್ನು ಟಾರ್ಗೆಟ್ ಮಾಡುತ್ತಿದೆ. ಹೀಗಾಗಿ ಕುಟುಂಬದ ಸದಸ್ಯರ ಮಾನಸಿಕ ಕಿರುಕುಳ ಎದುರಿಸುತ್ತಿದ್ದೇವೆ ಎಂದು ಶಿಲ್ಪಾ ಆರೋಪಿಸಿದ್ದಾರೆ.

ಶಿಲ್ಪಾ ಶೆಟ್ಟಿ ಅರ್ಜಿ ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲು ಸೇರಿದ್ದು, ನ್ಯಾಯಾಲಯ ಅವರ ಜಾಮೀನು ಅರ್ಜಿ ಕೂಡಾ ವಜಾಗೊಳಿಸಿದೆ. ಹೀಗಾಗಿ ರಾಜ್ ಕುಂದ್ರಾ ಕೂಡ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಲಿದ್ದಾರೆ.

Comments are closed.