ಕುಂದಾಪುರ : ಮರದ ಸೊಪ್ಪು ತರಲು ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆರ್ಡಿ ಸಮೀಪದ ಚಕ್ಕರ್ಮಕ್ಕಿ ಎಂಬಲ್ಲಿ ನಡೆದಿದೆ.
ಆರ್ಡಿ ಸಮೀಪದ 9ನೇ ಮೈಲ್ಕಲ್ಲು ನಿವಾಸಿ ಮೋಹನ ನಾಯ್ಕ (21 ವರ್ಷ) ಹಾಗೂ ಸುರೇಶ (19 ವರ್ಷ) ಎಂಬವರೇ ಮೃತ ದುರ್ದೈವಿಗಳು. ಮೃತಪಟ್ಟಿರುವ ಸುರೇಶ್ ಹಾಗೂ ಮೋಹನ್ ಇಬ್ಬರೂ ಕೂಡ ಸಹೋದರ ಸಂಬಂಧಿಗಳಾಗಿದ್ದು, ಕೊಂಜಾಡಿ ಗಂಟುಬೀಳು ಪರಿಸರಕ್ಕೆ ಕಂಟುಹೊಳೆ ( ನದಿ) ದಾಟಿಕೊಂಡು ತೆರಳಿದ್ದಾರೆ. ಈ ವೇಳೆಯಲ್ಲಿ ತುಂಬಿ ಹರಿಯುತ್ತಿರುವ ನೀರಿನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ತಡರಾತ್ರಿಯಾದರೂ ಇಬ್ಬರು ಮನೆಗೆ ವಾಪಾಸಾಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮನೆಯವರು ಹುಡುಕಾಟವನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ಕುಂಟುಹೊಳೆಯ ಕುಪ್ಪರಿಗೆಗುಂಡಿ ಸಮೀಪದಲ್ಲಿ ಚಪ್ಪಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶೋಧಕಾರ್ಯ ನಡೆಸಿದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿದೆ.
ನದಿಯಲ್ಲಿ ಕಾಲು ಜಾರಿ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಶಂಕರನಾರಾಯಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಪಾಗಲ್ ಪ್ರೇಮಿಯ ಅವಾಂತರಕ್ಕೆ ಬಲಿಯಾಯ್ತು ಜೀವ: ಪ್ರೀತಿ ವಿರೋಧಿಸಿದ್ದಕ್ಕೆ ಬಿತ್ತು ಹುಡುಗಿ ತಂದೆ ಹೆಣ
Comments are closed.