ಕಡಲ್ಕೊರೆತ ವೀಕ್ಷಣೆ ವೇಳೆ ಅಬ್ಬರಿಸಿದ ಅಲೆ : ಪ್ರಾಣಾಪಾಯದಿಂದ ಪಾರಾದ ಗೃಹ ಸಚಿವರು !

0

ಉಡುಪಿ : ಕಡಲ್ಕೊರೆತ ವೀಕ್ಷಿಸಲು ತೆರಳಿದ್ದ ವೇಳೆಯಲ್ಲಿ ಗೃಹ ಸಚಿವ ಹಾಗೂ ಜಲ್ಲಾ ಉಸ್ತುವಾರಿ ಸಚಿವರಾಗಿರುವ ಬಸವರಾಜ್ ಬೊಮ್ಮಾಯಿ ಅವರು ಅಪಾಯದಿಂದ ಪಾರಾದ ಘಟನೆ ನಡೆದಿದೆ.

ಕಳೆದೊಂದು ವಾರದಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಕಡಲ್ಕೊರೆತ ಪ್ರಮಾಣ ಹೆಚ್ಚಳವಾಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರವಾಸಕೈಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವರಾಗಿರು ಗೃಹ ಸಚಿವರ ಬಸವರಾಜ್ ಬೊಮ್ಮಾಯಿ ಅವರು ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಕಡಲತೀರದಲ್ಲಿ ಕಡಲ್ಕೊರೆತ ವೀಕ್ಷಣೆಗೆ ತೆರಳಿದ್ದಾರೆ.

ಕಡಲ್ಕೊರೆತ ವೀಕ್ಷಣೆ ಮಾಡುತ್ತಲೇ ಸಮುದ್ರದ ನೀರಿನ ಬಳಿಗೆ ಸಾಗಿದ್ದಾರೆ. ಈ ವೇಳೆಯಲ್ಲಿ ದೈತ್ಯ ಅಲೆಯೊಂದು ಸಚಿವರೆಡೆಗೆ ನಿಗ್ಗಿ ಬಂದಿದೆ. ಈ ವೇಳೆಯಲ್ಲಿ ಸಚಿವರು ಅಲೆಯ ಅಬ್ಬರಕ್ಕೆ ಅರೆ ಕ್ಷಣ ದಂಗಾಗಿ ಹೋಗಿದ್ದಾರೆ. ಇದ್ಯಾವುದರ ಅರಿವೇ ಇಲ್ಲದಂತಿದ್ದ ಸಚಿವರಿಗೆ ಅರೆಕ್ಷಣ ಅಲ್ಲಿ ಏನಾಗುತ್ತಿದೆ ಅನ್ನೋದು ಗೊತ್ತೆ ಆಗಲಿಲ್ಲ. ಸಚಿವರು ಅಲೆಗಳ ಅಬ್ಬರ ಕಂಡು ಒಂದು ಕ್ಷಣ ಹೆದರಿ ಹಿಂದಕ್ಕೆ ಸರಿದಾಗ ದೇಹದ ಮೇಲೆ ನಿಯಂತ್ರಣ ಕಳೆದುಕೊಂಡರು.

ಸಮುದ್ರದ ಅಲೆ ಸಚಿವರ ಕಡೆಗೆ ನುಗ್ಗಿ ಬರುತ್ತಿರುವುದನ್ನು ಗಮನಿಸಿದ ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ ಅವರು ಗೃಹ ಸಚಿವರಕೈ ಹಿಡಿದು ಎಳೆದಿದ್ದಾರೆ. ಇದರಿಂದಾಗಿ ಸಚಿವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಸಚಿವರ ಚಪ್ಪಲಿ ಮಾತ್ರ ಸಮುದ್ರದ ಪಾಲಾಗಿದೆ.

Leave A Reply

Your email address will not be published.