ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ನಿತ್ಯವೂ 10 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ಆದರೆ ಈ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ಬೇಗನೆ ಆರಂಭಿಸುವಂತೆ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಆಯೋಗದ ವರದಿ ಇದೀಗ ಪೋಷಕರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಅಂಥೋನಿ ಸೆಬಾಸ್ಟಿಯನ್ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಪ್ರಮುಖವಾಗಿ ಆದಷ್ಟು ಬೇಗ ಶಾಲೆಗಳನ್ನು ಆರಂಭಿಸಬೇಕು. ಆದರೆ ಪರೀಕ್ಷೆಗಳನ್ನು ನಡೆಸುವುದು ಬೇಡಾ ಎಂದಿದೆ. ಹೆಚ್ಚಿನ ಮಕ್ಕಳಿರುವ ಶಾಲೆಯಲ್ಲಿ ಪಾಳಿಯ ಆಧಾರದಲ್ಲಿ ಶಾಲೆಯನ್ನು ನಡೆಸಬೇಕು. ಆದರೆ ಈ ವರ್ಷ ಪರೀಕ್ಷಾ ರಹಿತ ವರ್ಷ ಎಂದು ಘೋಷಣೆ ಮಾಡಬೇಕು. ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬಹುದು ಎಂದು ಆಯೋಗ ಶಿಫಾರಸ್ಸು ಮಾಡಿದೆ.
2020-21ನೇ ಸಾಲಿನ ಶೈಕ್ಷಣಕ ವರ್ಷವನ್ನು ಸಂಪೂರ್ಣ ಪರೀಕ್ಷಾ ರಹಿತ ವರ್ಷವೆಂದು ಘೋಷಣೆ ಮಾಡಬೇಕು. 30 ಮಕ್ಕಳಿಗಿಂತ ಕಡಿಮೆಯಿರೋ ಮಕ್ಕಳಿರೋ ಸರಕಾರಿ ಕಿರಿಯ ಹಾಗೂ ಹಿರಿಯ ಶಾಲೆಗಳನ್ನು ಆರಂಭಿಸಬೇಕು. ಶಾಲೆಗಳು ಮೊದಲ 15 ದಿನ ಅರ್ಧ ದಿನ ಕಾರ್ಯನಿರ್ವಹಿಸಬೇಕು. ಕಿರಿಯ ಪ್ರಾಥಮಿಕ ಶಾಲೆಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿರೋ ಶಾಲೆಗಳನ್ನು ಪಾಳಿ ಪದ್ದತಿಯಲ್ಲಿ ಪ್ರಾರಂಭಿಸಬೇಕು. ವಿವರವಾದ ಮಾರ್ಗಸೂಚಿಗಳನ್ನು ಶಾಲೆ ತೆರೆ ನಂತರ ಕಾಲ ಕಾಲಕ್ಕೆ ತಕ್ಕಂತೆ ರೂಪಿಸಬಹುದು ಎಂದು ಆಯೋಗ ಹೇಳಿದೆ.
ಶಾಲೆಗೆ ಬರುವ ಎಲ್ಲಾ ಮಕ್ಕಳಿಗೂ ಮಾಸ್ಕ್ ನೀಡುವುದು. ಅದ್ರಲ್ಲೂ 10 ವರ್ಷಕ್ಕಿಂತ ಕೆಳಗಿರೋ ಮಕ್ಕಳಿಗೆ ಅಗತ್ಯ ಮಾಸ್ಕ್ ವಿತರಿಸುವುದು. ಶಾಲಾ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುವುದು. ಕಟ್ಟುನಿಟ್ಟಾಗಿ ದೈಹಿಕ ಅಂತರ ಕಾಪಾಡುವಂತೆ ಅರಿವು ಮೂಡಿಸಬೇಕು. ಮಕ್ಕಳಿಗೆ ಶಾಲೆಯಲ್ಲಿ ದಿನ ನಿತ್ಯ, ಪೌಷ್ಠಿಕ ಆಹಾರ ಹಾಗೂ ಬೆಳಗಿನ ಬಿಸಿ ಹಾಲು ವಿತರಿಸಬೇಕು. ಉಚಿತ ಕೋವಿಡ್ ಎಚ್ಚರಿಕಾ ಸಾಧನ ಪೂರೈಸಬೇಕು. ಶಾಲಾ ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಎಲ್ಲಾ ಮಕ್ಕಳಿಗೆ ನಿರಂತರವಾಗಿ ಆರೋಗ್ಯ ತಪಾಸಣೆಯನ್ನು ಮಾಡಬೇಕು. ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸೋಂಕು ಕಂಡುಬಂದಲ್ಲಿ ತಕ್ಞಣವೇ ವೈದ್ಯಕೀಯ ಸೇವೆ ಲಭ್ಯವಿರಬೇಕು. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಶಾಲಾರಂಭಿವೃದ್ದಿ ಸಮಿತಿ ಹಾಗೂ ತಾಲೂಕು ಶಿಕ್ಷಣಾಧಿಕಾರಿಗಳು ನೋಡಿಕೊಳ್ಳಬೇಕು ಎಂದಿದೆ.
ಲಭ್ಯವಿರುವ ಸಂಶೋಧನೆಯ ಪ್ರಕಾರ, ಶಾಲೆಯನ್ನು ತೆರೆಯುವುದರಿಂದ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗೋದಿಲ್ಲ ಎಂದಿದೆ. ಇತರ ಕಾಯಿಲೆಯಿರುವವರಿಗೆ ಹೋಲಿಸಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಒಂದೊಮ್ಮೆ ಶಾಲೆಗಳನ್ನು ಆರಂಭಿಸದೇ ಇದ್ರೆ ಬಾಲ್ಯ ವಿವಾಹ, ಬಾಲ ಕಾರ್ಮಿಕ ಸಮಸ್ಯೆ ಹೆಚ್ಚಾಗುತ್ತದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ಆರಂಭ ಮಾಡಬಹುದು ಎಂದು ಆಯೋಗ ಹೇಳಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೇ 10 ವರ್ಷದೊಳಗಿನ ಮಕ್ಕಳನ್ನು ಮನೆಯಿಂದ ಹೊರಬರಬಾರದು ಅಂತಾ ಹೇಳಿದೆ.
ಆದರೆ ಮಕ್ಕಳ ಹಕ್ಕುಗಳ ಆಯೋಗ ಮಾತ್ರ ಮಕ್ಕಳನ್ನು ಶಾಲೆಗೆ ಕರೆಯುತ್ತಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಹೆಚ್ಚಾಗಿದೆ ಎಂದಿರುವ ಆಯೋಗಕ್ಕೆ ಮಕ್ಕಳೇ ಅತೀ ಹೆಚ್ಚು ವೈರಸ್ ಸೋಂಕನ್ನು ಹರಡುವ ಸಾಮರ್ಥ್ಯವಿದೆ ಅನ್ನೋ ತಜ್ಞರ ವರದಿಯನ್ನು ಉಲ್ಲೇಖಿಸಿಲ್ಲ. ರಾಜ್ಯದಲ್ಲಿರುವ ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯದ ಸಮಸ್ಯೆಯಿದೆ. ಇಂತಹ ಸ್ಥಿತಿಯಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವುದಕ್ಕೆ ಸಾಧ್ಯವಿದೆಯೇ ? ಅನ್ನೋ ಕನಿಷ್ಠ ಜ್ಞಾನವೂ ಆಯೋಗಕ್ಕೆ ಇಲ್ಲವಾಯಿತೇ ಎಂದು ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯಾಗಮ ಯೋಜನೆ, ವಠಾರ ಶಾಲೆ ಯೋಜನೆಯಲ್ಲಿ ಪಾಲ್ಗೊಂಡಿರುವ ನೂರಾರು ಶಿಕ್ಷಕರು ಈಗಾಗಲೇ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ವಿದ್ಯಾಗಮ ಯೋಜನೆಯಲ್ಲಿಯೇ ಸಾಮಾಜಿಕ ಅಂತರ ಪಾಲನೆಯಾಗದ ಕುರಿತು ಈಗಾಗಲೇ ದೂರು ಕೇಳಿಬಂದಿದೆ. ಹೀಗಿರುವಾಗ ಆಯೋಗದ ವರದಿ ಆತಂಕವನ್ನು ಮೂಡಿಸಿದ್ದು, ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಈ ವರದಿಯನ್ನು ಜಾರಿಗೆ ತರಬಾರದು ಎಂದು ಪೋಷಕರು ಆಗ್ರಹಿಸುತ್ತಿದ್ದಾರೆ.