
ಛತ್ತೀಸ್ಗಢದ ಬಲೋದಬಜಾರ್ ಜಿಲ್ಲೆಯ ಖಾರ್ವೆ ಗ್ರಾಮದಲ್ಲಿ ನಡೆದ ಸರಣಿ ಸಾವುಗಳ ಪ್ರಕರಣಕ್ಕೆ ಬೆಚ್ಚಿಬೀಳಿಸುವ ತಿರುವು ಸಿಕ್ಕಿದೆ. ಒಂದೇ ಗ್ರಾಮದ ಎಂಟು ಮಂದಿಗೆ ವಿಷ ಬೆರೆಸಿದ ಮದ್ಯ ನೀಡಿ ಹತ್ಯೆ ಮಾಡಿರುವ ಆರೋಪದ ಮೇಲೆ ಅದೇ ಗ್ರಾಮದ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಾಮ್ ಸಹಾಯ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಕಳೆದ ಫೆಬ್ರವರಿಯಿಂದ ಗ್ರಾಮದಲ್ಲಿ ನಡೆದ ಅನುಮಾನಾಸ್ಪದ ಸಾವುಗಳ ಕುರಿತು ತನಿಖೆ ನಡೆಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಪ್ರಕಾರ, ಆರೋಪಿ ಮೊದಲು ಸುಹಾಗಾ (ಬೊರಾಕ್ಸ್) ಪುಡಿ ಹಾಗೂ ಇಲಿ ವಿಷವನ್ನು ಮಿಶ್ರಣ ಮಾಡಿ ಅದರ ಪರಿಣಾಮವನ್ನು ನಾಯಿಯ ಮೇಲೆ ಪರೀಕ್ಷಿಸಿದ್ದ ಎನ್ನಲಾಗಿದೆ. ಅದು ಯಶಸ್ವಿಯಾಗಿದೆ ಎಂದು ಖಚಿತವಾದ ಬಳಿಕ ತನ್ನೊಂದಿಗೆ ಮದ್ಯದ ವಿಚಾರವಾಗಿ ಜಗಳವಾಡಿದ್ದವರನ್ನು ಗುರಿಯಾಗಿಸಿಕೊಂಡು ವಿಷ ಬೆರೆಸಿದ ಮದ್ಯ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ವಿಷ ಮಿಶ್ರಿತ ಮದ್ಯ ಸೇವಿಸಿದ ಎಲ್ಲರೂ ಸಾವನ್ನಪ್ಪಿದ್ದು, ಯಾರಿಗೂ ಅನುಮಾನ ಬಾರದಂತೆ ಮೃತರ ಅಂತ್ಯಸಂಸ್ಕಾರದಲ್ಲೂ ಆರೋಪಿ ಭಾಗವಹಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಂಶ ತನಿಖೆ ವೇಳೆ ಬಹಿರಂಗವಾಗಿದ್ದು, ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.
ಸದ್ಯ ಆರೋಪಿ ಪೊಲೀಸ್ ವಶದಲ್ಲಿದ್ದು, ಘಟನೆಯ ಹಿಂದಿನ ಉದ್ದೇಶ ಮತ್ತು ಇನ್ನಿತರ ಮಾಹಿತಿ ಕುರಿತು ತನಿಖೆ ಮುಂದುವರಿದಿದೆ. ಈ ಸರಣಿ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.



