ಸೌದಿ ಅರೇಬಿಯಾದಲ್ಲಿ ಬಸ್ ದುರಂತ : ತೆಲಂಗಾಣದ 42 ಮಂದಿ ಸಾವು ; ಪ್ರಧಾನಿ ಮೋದಿ ಸಂತಾಪ

Saudi Arabia Bus Accident: ಸೌದಿ ಅರೇಬಿಯಾದ ಮಕ್ಕಾ – ಮದೀನಾ ರಸ್ತೆಯಲ್ಲಿ ಖಾಸಗಿ ಬಸ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು 42ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣ ಹೊತ್ತಿ ಉರಿದಿದ್ದು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು ಭಾರತೀಯರು ಎಂದು ತಿಳಿದು ಬಂದಿದೆ. ಮೃತಪಟ್ಟವರ ಪೈಕಿ 20 ಮಂದಿ ಮಹಿಳೆಯರು ಹಾಗೂ 12 ಮಂದಿ ವೃದ್ಧ ಪುರುಷರು ಇದ್ದರು ಎನ್ನಲಾಗಿದೆ.
ಮೃತರೆಲ್ಲರೂ ತೆಲಂಗಾಣ ಮೂಲದವರು ಎಂದು ತಿಳಿದುಬಂದಿದೆ. ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತವಾಗಿದ್ದು ಭಾರತೀಯರ ನೆರವಿಗೆ ಧಾವಿಸಿದೆ. ಇತ್ತ ಭಾರತೀಯ ವಿದೇಶಾಂಗ ಸಚಿವಾಲಯದ ಬಳಿಯೂ ಮೃತದೇಹ ಶೀಘ್ರ ಹಸ್ತಾಂತರಕ್ಕೆ ನೆರವಾಗುವಂತೆ ಮನವಿ ಮಾಡಲಾಗಿದೆ.
ಇನ್ನು ಈ ದುರಂತದ ಸಂಬಂಧ ತೆಲಂಗಾಣ ಸರ್ಕಾರ ಸಂತಾಪ ವ್ಯಕ್ತಪಡಿಸಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಇನ್ನು ಮೃತರ ಕುಟುಂಬಸ್ಥರಿಗೆಂದು ಸಹಾಯವಾಣಿ ತೆರೆಯಲಾಗಿದ್ದು, ಯಾವುದೇ ಮಾಹಿತಿಗಾಗಿ ಕರೆ ಮಾಡುವಂತೆ ಮನವಿ ಮಾಡಲಾಗಿದೆ.
ಮೃತರೆಲ್ಲರೂ ತೆಲಂಗಾಣ ರಾಜ್ಯಕ್ಕೆ ಸೇರಿದವರಾಗಿದ್ದು ಭಾರತದಿಂದ ನವೆಂಬರ್ 9ನೇ ತಾರೀಖಿನಂದು ಮೆಕ್ಕಾ ಮದೀನಾ ಯಾತ್ರೆಗೆ ತೆರಳಿದ್ದರು ಎನ್ನಲಾಗಿದೆ. ಮೆಕ್ಕಾದಲ್ಲಿ ಉಮ್ರಾ ಯಾತ್ರೆ ಪೂರೈಸಿದ್ದ ಈ ತಂಡವು ಭಾನುವಾರದಂದು ಮೇದಿನಾಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಕರಾವಳಿ ಜಿಲ್ಲೆಗಳಿಗೆ ಕಾದಿದೆ ಮಳೆ
ಇನ್ನು ಈ (Saudi Arabia Bus Accident) ಘಟನೆ ಸಂಬಂಧ ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಮದೀನಾದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ತಿಳಿದು ತೀವ್ರ ದುಃಖಿತನಾಗಿದ್ದೇನೆ.
ಈ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ನಿಮ್ಮ ನೋವಿನೊಂದಿಗೆ ನಾವಿದ್ದೇವೆ ಎಂದಿದ್ದಾರೆ.



