Boycott Thailand: ಬ್ಯಾಂಕಾಕ್: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿ ವಿವಾದ ಈಗ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘರ್ಷದ ರೂಪ ಪಡೆದುಕೊಂಡಿದೆ. ವಿವಾದಿತ ಗಡಿ ಪ್ರದೇಶವಾದ ‘ಆನ್ ಸೆಸ್’ (An Ses) ವಲಯದಲ್ಲಿದ್ದ ಸುಮಾರು 30 ಅಡಿ ಎತ್ತರದ ಭಗವಾನ್ ವಿಷ್ಣುವಿನ ಪ್ರತಿಮೆಯನ್ನು ಥೈಲ್ಯಾಂಡ್ ಸೇನೆಯು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ವಿಶ್ವಾದ್ಯಂತ ಹಿಂದೂ ಸಮುದಾಯ ಮತ್ತು ಭಾರತೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, #BoycottThailand ಅಭಿಯಾನವು ಎಕ್ಸ್ (ಟ್ವಿಟರ್) ಸೇರಿದಂತೆ ಹಲವು ವೇದಿಕೆಗಳಲ್ಲಿ ಟ್ರೆಂಡ್ ಆಗುತ್ತಿದೆ.
ಏನಿದು ಘಟನೆ?
ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವೆ ಕಳೆದ ಹಲವು ದಶಕಗಳಿಂದ 800 ಕಿ.ಮೀ ಉದ್ದದ ಗಡಿಗೆ ಸಂಬಂಧಿಸಿದಂತೆ ವಿವಾದವಿದೆ. ಕಳೆದ ಎರಡು ವಾರಗಳಿಂದ ಈ ಭಾಗದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಣ್ಣ ಮಟ್ಟದ ಘರ್ಷಣೆಗಳು ನಡೆಯುತ್ತಿದ್ದವು. ಈ ನಡುವೆ, ಕಳೆದ ಸೋಮವಾರ (ಡಿಸೆಂಬರ್ 22, 2025) ಥೈಲ್ಯಾಂಡ್ ಸೇನೆಯ ಇಂಜಿನಿಯರ್ಗಳು ಭಾರಿ ಯಂತ್ರೋಪಕರಣಗಳನ್ನು ಬಳಸಿ ವಿಷ್ಣು ಪ್ರತಿಮೆಯನ್ನು ಕೆಡವಿದ್ದಾರೆ.
ವಿವಾದದ ಪ್ರಮುಖ ಅಂಶಗಳು:
ಈ ಪ್ರತಿಮೆಯು ಕಾಂಬೋಡಿಯಾ ಗಡಿಯಿಂದ 100 ಮೀಟರ್ ಒಳಗೆ ಇದೆ ಎಂದು ಕಾಂಬೋಡಿಯಾ ವಾದಿಸುತ್ತಿದೆ. ಆದರೆ, ಇದು ತನ್ನ ಭೂಭಾಗದ ಒತ್ತುವರಿ ಎಂದು ಥೈಲ್ಯಾಂಡ್ ಹೇಳುತ್ತಿದೆ. ಈ ಪ್ರತಿಮೆಯನ್ನು 2014ರಲ್ಲಿ ನಿರ್ಮಿಸಲಾಗಿದ್ದು, ಅಲ್ಲಿನ ಬೌದ್ಧ ಮತ್ತು ಹಿಂದೂ ಭಕ್ತರು ಇದನ್ನು ಪವಿತ್ರವೆಂದು ಆರಾಧಿಸುತ್ತಿದ್ದರು.
ಥೈಲ್ಯಾಂಡ್ ನೀಡಿದ ಸ್ಪಷ್ಟನೆ
ಭಾರತ ಮತ್ತು ಕಾಂಬೋಡಿಯಾ ದೇಶಗಳ ತೀವ್ರ ಆಕ್ಷೇಪದ ನಂತರ ಥೈಲ್ಯಾಂಡ್ ಸರ್ಕಾರ ಸ್ಪಷ್ಟನೆ ನೀಡಿದೆ. “ನಾವು ಯಾವುದೇ ಧರ್ಮಕ್ಕೆ ಅಪಮಾನ ಮಾಡುವ ಉದ್ದೇಶ ಹೊಂದಿಲ್ಲ. ಗಡಿ ಸುರಕ್ಷತೆ ಮತ್ತು ಪ್ರದೇಶದ ಮೇಲಿನ ಹತೋಟಿ ಸಾಧಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದು ಕೇವಲ ಒಂದು ಅಲಂಕಾರಿಕ ಕಲಾಕೃತಿಯಾಗಿದೆಯೇ ಹೊರತು, ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಧಾರ್ಮಿಕ ಸ್ಥಳವಲ್ಲ” ಎಂದು ಥೈಲ್ಯಾಂಡ್ ಸಮರ್ಥಿಸಿಕೊಂಡಿದೆ. ಅಲ್ಲದೆ, “ಸೈನಿಕರ ಪ್ರಾಣಕ್ಕೆ ಹೋಲಿಸಿದರೆ ಒಂದು ಪ್ರತಿಮೆ ದೊಡ್ಡದಲ್ಲ” ಎಂಬ ಥಾಯ್ ಪ್ರಧಾನಿಯವರ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಭಾರತದ ತೀಕ್ಷ್ಣ ಪ್ರತಿಕ್ರಿಯೆ
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಈ ಘಟನೆಯನ್ನು ಬಲವಾಗಿ ಖಂಡಿಸಿದೆ. “ಹಿಂದೂ ಮತ್ತು ಬೌದ್ಧ ದೇವತೆಗಳು ಈ ಭಾಗದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ಭೂಪ್ರದೇಶದ ಮೇಲೆ ಯಾರೇ ಹಕ್ಕು ಸಾಧಿಸಿದರೂ, ಇಂತಹ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯಗಳನ್ನು ಒಪ್ಪಲು ಸಾಧ್ಯವಿಲ್ಲ. ಇದು ವಿಶ್ವದಾದ್ಯಂತ ಇರುವ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ” ಎಂದು ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ರಜೆಗಳ ಪಟ್ಟಿ 2026: ಮುಂದಿನ ವರ್ಷ ಒಟ್ಟು 24 ಸಾರ್ವತ್ರಿಕ ರಜೆಗಳು; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ನೆಟ್ಟಿಗರ ಆಕ್ರೋಶ ಮತ್ತು ‘ಬಾಯ್ಕಾಟ್’ ಕರೆ
ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರು ಥೈಲ್ಯಾಂಡ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. “ಭಾರತೀಯ ಪ್ರವಾಸಿಗರಿಂದಲೇ ಥೈಲ್ಯಾಂಡ್ ಪ್ರವಾಸೋದ್ಯಮ ಬದುಕುತ್ತಿದೆ, ಆದರೆ ಅವರು ನಮ್ಮ ದೇವರನ್ನೇ ಗೌರವಿಸುತ್ತಿಲ್ಲ” ಎಂದು ಕಿಡಿಕಾರುತ್ತಿರುವ ನೆಟ್ಟಿಗರು, ಥೈಲ್ಯಾಂಡ್ಗೆ ಪ್ರವಾಸ ಹೋಗುವುದನ್ನು ನಿಲ್ಲಿಸಿ ಎಂದು ಕರೆ ನೀಡುತ್ತಿದ್ದಾರೆ.



