ಸಿಎಂ ಸ್ಥಾನ ಬದಲಾವಣೆ ಕುರಿತಂತೆ ಕೋಡಿಮಠದ ಶ್ರೀ ಸ್ಫೋಟಕ ಭವಿಷ್ಯ
ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಹಾಗೆಯೇ ಇದೆ. ಸಂಕ್ರಾಂತಿಯಲ್ಲಿ ರಾಜ್ಯದಲ್ಲಿ ಹೊಸ ಕ್ರಾಂತಿಯಾಗಬಹುದು ಎಂದು ಊಹಿಸಲಾಗಿತ್ತು . ಆದರೆ ಈ ವಿಚಾರವಾಗಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದು ಈ ಬಾರಿಯ ರಾಜ್ಯ ಬಜೆಟ್ ಮಂಡಿಸುವವರು ಕೂಡ ಸಿಎಂ ಸಿದ್ದರಾಮಯ್ಯರೇ ಎಂದು ಹೇಳಿದ್ದಾರೆ.
ಸಂಕ್ರಾಂತಿಯೂ ಇಲ್ಲ, ಯುಗಾದಿಯೂ ಇಲ್ಲ.. ಬಜೆಟ್ ಮುಗಿಯುವವರೆಗೂ ರಾಜ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಜ್ಯೋತಿಷ್ಯ ನಂಬುವ ಜನರು ಈ ರೀತಿ ಮಾತನಾಡುತ್ತಾರೆ. ಆದರೆ ಯುಗಾದಿ ಹಬ್ಬದವರೆಗೂ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಲ್ಲಿ ಬದಲಾವಣೆ ಆಗೋದಿಲ್ಲ. ಯುಗಾದಿ ಮುಗಿದ ಬಳಿಕ ಮುಂದಿನದು ನೋಡಬೇಕು ಎಂದು ಕಾಗಿನೆಲೆ ಮಠದಲ್ಲಿ ಕೋಡಿಮಠದ ಶ್ರೀ ಹೇಳಿದ್ದಾರೆ.
ಇನ್ನು ಡಿ.ಕೆ ಶಿವಕುಮಾರ್ ವಿಚಾರವಾಗಿಯೂ ಮಾತನಾಡಿದ ಅವರು, ಅವರೊಬ್ಬ ಒಳ್ಳೆಯ ಕಾರ್ಯಕರ್ತ, ಸಂಘಟನಾ ಮನುಷ್ಯ ಅಂತೆಯೇ ಹೋರಾಟಗಾರ. ಆದರೆ ಇಲ್ಲಿ ಇದ್ಯಾವುದೂ ಬರುವುದಿಲ್ಲ. ಸಿದ್ದರಾಮಯ್ಯ ತಮ್ಮ ಸ್ಥಾನ ಬಿಟ್ಟುಕೊಡದ ಹೊರತು ಯಾವುದೇ ಬದಲಾವಣೆ ಸಾಧ್ಯ ಇಲ್ಲ ಎಂದಿದ್ದಾರೆ.



