ಸಚಿವ ಪ್ರಿಯಾಂಕ್ ಖರ್ಗೆ ತವರಿನಲ್ಲೇ ಆರ್ಎಸ್ಎಸ್ ಯಶಸ್ವಿ ಪಥಸಂಚಲನ..!
ಆರ್ಎಸ್ಎಸ್ನ ಚಟುವಟಿಕೆಗಳಿಗೆ ರಾಜ್ಯದಲ್ಲಿ ಕಡಿವಾಣ ಹಾಕುವ ರಾಜ್ಯ ಸರ್ಕಾರದ ನಿಲುವಿನ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯ ಸೂತ್ರಧಾರಿಯಂತೆ ಕಾರ್ಯನಿರ್ವಹಿಸಿದ್ದರು. ಇದರಿಂದ ಕೋಪಗೊಂಡಿರುವ ಆರ್ಎಸ್ಎಸ್ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ತವರಾದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿಯೇ ತನ್ನ ಶಕ್ತಿ ಪ್ರದರ್ಶಿಸುವ ಮೂಲಕ ತಿರುಗೇಟು ನೀಡಿದೆ.
ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಕಲಬುರಗಿ ಜಿಲ್ಲಾಡಳಿತ ಮೊದಲು ಅನುಮತಿ ನೀಡಿರಲಿಲ್ಲ. ಆದರೆ ಇದಕ್ಕೆ ಸುಮ್ಮತರಾಗದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ನಿಂದ ಅನುಮತಿ ಪಡೆದ ಆರ್ಎಸ್ಎಸ್ ಎಲ್ಲಾ ವಿರೋಧಗಳ ನಡುವೆಯೂ ಚಿತ್ತಾಪುರದಲ್ಲಿ ಪಥಸಂಚಲನ ನಡೆಸುವಲ್ಲಿ ಯಶಸ್ವಿಯಾಗಿದೆ.
300 ಜನ ಗಣವೇಶಧಾರಿಗಳು ಮತ್ತು 50 ಜನ ಬ್ಯಾಂಡ್ ವಾದಕರು ಸೇರಿದಂತೆ 350 ಜನ ಆರ್ಎಸ್ಎಸ್ ಕಾರ್ಯಕರ್ತರು ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಚಿತ್ತಾಪುರ ಪಟ್ಟಣದಲ್ಲಿರುವ ಬಜಾಜ್ ಕಲ್ಯಾಣ ಮಂಟಪದಲ್ಲಿ ಆರಂಭಗೊಂಡ ಫಥಸಂಚಲನವು ಸುಮಾರು 1.5 ಕಿಲೋಮೀಟರ್ವರೆಗೂ ಸಾಗಿದ್ದು ಅಭೂತಪೂರ್ವ ಜನಬೆಂಬಲ ಗಳಿಸಿತು.
ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ಪಥಸಂಚಲನದಲ್ಲಿ ಯಾವುದೇ ತೊಂದರೆಗಳು ಎದುರಾಗದಂತೆ ಟೈಟ್ ಪೊಲೀಸ್ ಸೆಕ್ಯೂರಿಟಿ ಒದಗಿಸಲಾಗಿತ್ತು. ಎಲ್ಲಾ ಭದ್ರತೆಗಳ ನಡುವೆ ಅತ್ಯಂತ ಶಾಂತಿಯುತವಾಗಿ ಆರ್ಎಸ್ಎಸ್ ಚಿತ್ತಾಪುರದಲ್ಲಿ ತನ್ನ ಪಥಸಂಚಲನ ನಡೆಸಿದೆ. ಈ ವಿಚಾರವಾಗಿ ಮಾತನಾಡಿದ ಆರ್ಎಸ್ಎಸ್ ಜಿಲ್ಲಾ ಪ್ರಮುಖ, ಅಶೋಕ್ ಪಾಟೀಲ್ ಶಾಂತಿಯುತ ಪಥಸಂಚಲನ ನಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿಲ್ಲ ಸಿಎಂ ಸ್ಥಾನ ಬದಲಾವಣೆ – ಅಹಿಂದ ಅಸ್ತ್ರಕ್ಕೆ ಶರಣಾಯ್ತು ಕಾಂಗ್ರೆಸ್ ಹೈಕಮಾಂಡ್
ಇನ್ನು ರಾಜ್ಯದಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ಆರ್ಎಸ್ಎಸ್ ಕಾರ್ಯಚಟುವಟಿಕೆ ನಡೆಸುವುದನ್ನು ತಪ್ಪಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಾದ ಬಳಿಕ ಜಾಣ ನಡೆ ಅನುಸರಿಸಿದ ರಾಜ್ಯ ಸರ್ಕಾರ ಆರ್ಎಸ್ಎಸ್ ಹೆಸರು ಪ್ರಸ್ತಾಪಿಸದೇ ಈ ನಿಯಮ ಜಾರಿಗೆ ತಂದಿತ್ತು.



