ಮಂದಾರ್ತಿ : (Nagamandala) ಕರಾವಳಿಯಲ್ಲಿ ನಾಗಾರಾಧನೆ ಪವಿತ್ರ ಆಚರಣೆ. ಅದರಲ್ಲೂ ನಾಗಮಂಡಲ ಕರಾವಳಿಗರ ನಂಬಿಕೆಯ ಪ್ರತೀಕ. ಸಾಮಾನ್ಯವಾಗಿ ಕಷ್ಟಗಳು, ಸಮಸ್ಯೆಗಳು ಎದುರಾದಾಗ ಭಕ್ತರು ನಾಗದೇವರಿಗೆ ಮೊರೆಯಿಡುತ್ತಾರೆ. ನಾಗದೇವರನ್ನು ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತಿದ್ದರೂ ಕೂಡ ನಾಗಮಂಡಲ ಸೇವೆ ಭೂಲೋಕದೊಡೆಯ ನಾಗರಾಜನಿಗೆ ನೀಡುವ ಅತ್ಯುನ್ನತ ಸೇವೆಗಳಲ್ಲಿ ಒಂದಾಗಿದೆ. ಇಂತಹ ಅಷ್ಟಪವಿತ್ರ ನಾಗಮಂಡಲ ಸೇವೆ ನಾಳೆ ಮಂದಾರ್ತಿಯ ಸುಬ್ರಹ್ಮಣ್ಯ ಮಯ್ಯ ಅವರ ಮನೆಯ ನಾಗಬನದಲ್ಲಿ ನಡೆಯಲಿದೆ.
ಜನವರಿ 21 ರಂದು ಬೆಳಿಗ್ಗೆಯಿಂದಲೇ ಹೋಮ-ಹವನ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದು, ಜ.22 ರಂದು ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ರಾತ್ರಿ ನಾಗದೇವರ ಹಾಲಿಟ್ಟು ಸೇವೆ, ಮಂಡಲ ಸೇವೆ ಹಾಗೂ ಅಷ್ಟಪವಿತ್ರ ನಾಗಮಂಡಲಸೇವೆಯು ವಿಜೃಂಭಣೆಯಿಂದ ನೆರವೇರಲಿದೆ.
ಇಂದು ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ವಿಘ್ನವಿನಾಶಕನಾದ ಗಣಪತಿಯ ಪೂಜೆಯಿಂದ ಪ್ರಾರಂಭವಾಗಿ ವಿವಿಧ ಹೋಮಗಳು, ವೇದ ಪಾರಾಯಣ, ದಂಪತಿ ಆರಾಧನೆ, ಕನ್ನಿಕಾ ಪೂಜೆ, ಆಚಾರ್ಯ ಪೂಜೆ ಮಹಾಪೂಜೆ ಹಾಗೂ ಇನ್ನಿತರ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಸಂಜೆ ಆಶ್ಲೇಷಾ ಬಲಿ, ಹೋಮ, ವಾಸ್ತು ಪೂಜಾ, ಬ್ರಹ್ಮ ಕಲಸ ಸ್ಥಾಪನೆ ಸೇರಿದಂತೆ ಮಹಾಪೂಜೆ ನೆರವೇರಲಿದೆ. ಇನ್ನು ನಾಳೆ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ ವಾಚನ, ಹೋಮ, ಕಲಶಾಭಿಷೇಕ, ಮಹಾಪೂಜೆ, ಪಲ್ಲ ಪೂಜೆ, ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸೇವೆ ಅದ್ಧೂರಿಯಾಗಿ ನಡೆಯಲಿದ್ದು ಸಂಜೆ ಶ್ರೀ ದೇವರ ಮೂಲಸ್ವರೂಪ ಹಾಲಿಟ್ಟು ಸೇವೆ ಹಾಗೂ ರಾತ್ರಿ ನಾಗದೇವರ ನಾಗಮಂಡಲೋತ್ಸವ ಹಲವು ವಿಧಿವಿಧಾನಗಳೊಂದಿಗೆ ನೆರವೇರಲಿದೆ.
ನಾಗಮಂಡಲಸೇವೆಯು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅದ್ರಲ್ಲೂ ಹಾಲಿಟ್ಟು ಸೇವೆ ನಾಗಮಂಡಲದಲ್ಲಿಯೇ ಶ್ರೇಷ್ಟ ಆಚರಣೆ. ನಾಗಮಂಡಲದಲ್ಲಿ ನಾಗಕನ್ನಿಕೆ ಹಾಗೂ ನಾಗಪಾತ್ರಿ ನರ್ತನವೇ ವಿಶೇಷ ಆಕರ್ಷಣೆ. ವೇದಮೂರ್ತಿ ಜಯರಾಮ ಪುರಾಣಿಕ್, ವೇದಮೂರ್ತಿ ಶ್ರೀನಿವಾಸ ಅಡಿಗರ ಪೌರೋಹಿತ್ಯದಲ್ಲಿ, ಸುಬ್ರಹ್ಮಣ್ಯ ಅಡಿಗರು, ಸುದರ್ಶನ ಉಡುಪರು, ನಾಗರಾಜ ಐತಾಳ್ ಅವರು ನಾಗಪಾತ್ರಿ ಹಾಗೂ ನಾಗಕನ್ನಿಕೆಯಾಗಿ ಸರ್ವೋತ್ತಮ ವೈದ್ಯರು, ಗಣಪತಿ ವೈದ್ಯರು ಹಾಗೂ ಅನಂತರಾಮ ವೈದ್ಯರು ನಾಗಮಂಡಲದಲ್ಲಿ ಭಾಗಿಯಾಗಲಿದ್ದಾರೆ.
ನಾಗಮಂಡಲದಲ್ಲಿ ನಾಗದೇವರಿಗೆ ಮೂಲಸ್ವರೂಪವಾಗಿ ಹಾಲಿಟ್ಟು ಸೇವೆಯನ್ನು ನೆರವೇರಿಸಲಾಗುತ್ತದೆ. ಹಾಲಿಟ್ಟು ಸೇವೆ ಅಪರೂಪದ ಮತ್ತು ಸಾಂಪ್ರದಾಯಿಕ ಆಚರಣೆಯಾಗಿದೆ.ಪ್ರಾಕೃತಿಕವಾಗಿ ಅಲಂಕಾರ ಹಾಗೂ ಪ್ರಾಕೃತಿಕವಾದ ಬಣ್ಣದ ಮಂಡಲದ ನಡುವೆ ಮಧ್ಯರಾತ್ರಿಯಲ್ಲಿ ನಡೆಯುವ ದೇವರ ಸೇವೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಕಾತುರರಾಗಿರುತ್ತಾರೆ. ಬಣ್ಣಗಳಿಂದ ರಚಿಸುವ ಮಂಡಲಕ್ಕೆ ಅನುಗುಣವಾಗಿಯೇ ದೇವರು ನರ್ತಿಸುತ್ತಾರೆ. ಕಂಚಿನ ಡಮರುಗ ಹಿಡಿದು ನಾಗದೇವರನ್ನು ಕುಣಿಸುವ ನಾಗಕನ್ನಿಕೆ ಮತ್ತು ಹಿಂಗಾರದ ಹೂವಿನ ರಾಶಿಯಲ್ಲಿ ಮಿಂದೇಳುವ ನಾಗಪಾತ್ರಿಯ ಆವೇಶ ಎಲ್ಲರ ಮೈ ನವಿರೇಳಿಸುವಂತಿರುತ್ತದೆ. ಇಂತಹ ಅಪರೂಪದ ಧಾರ್ಮಿಕ ಕಾರ್ಯ ಇದೀಗ ಮಂದಾರ್ತಿಯಲ್ಲಿ ನೆರವೇರುತ್ತಿದೆ. ಇಂತಹ ಧಾರ್ಮಿಕ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಶ್ರೀನಿವಾಸ ಮಯ್ಯ ಮತ್ತು ವೆಂಕಟೇಶ ಮಯ್ಯ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಮಕರ ಸಂಕ್ರಮಣ ಉತ್ಸವ: ದೇವಳದತ್ತ ಹರಿದು ಬಂದ ಭಕ್ತಸಾಗರ
Nagamandala: Ashtapavitra Nagamandalotsava tomorrow at Mandarthi Kottur
Comments are closed.