ನನ್ನ ಕಣ್ಣ ಮುಂದೆಯೇ ಅವನು ಬೇವಿನ ಎಲೆಯಲ್ಲಿ ಚೇಳುಗಳನ್ನ ಮಾಡಿ ತೋರಿಸಿದ್ದ..! ಭಾಗ-25

0

ಹುಕ್ಕೇರಿ ಬಾಬಾನ ಬುರುಡೆ ಆಟ ನೋಡಿದ್ದಾಗಿತ್ತು.. ಆ ದಿನ ಬಂದು ಮಲ್ಲಿಕಾರ್ಜುನ ಪಾಟೀಲ್ ಮನೆಯಲ್ಲಿ ತಂಗಿ ವಾಪಸ್ ಬೆಂಗಳೂರಿಗೆ ಬಂದಿದ್ದೆ.. ಆಗಲೇ ನನ್ನ ಕಾಡೋಕೆ ಶುರು ಮಾಡಿದ್ದು ಈ ಕಣ್ಣು ಕಟ್ಟು ವಿದ್ಯೆ.. ನಾವು ನೀವೆಲ್ಲ ಚಿಕ್ಕಂದಿನಲ್ಲಿ ಮ್ಯಾಜಿಕ್ ನೋಡಿದ್ದೀವಿ ಅಲ್ವಾ, ಅದರ ಮತ್ತೊಂದು ಮುಖವೇ ಈ ಕಣ್ಣು ಕಟ್ಟು ವಿದ್ಯೆ.. ಇದನ್ನ ಮಾಂತ್ರಿಕ ಭಾಷೆಯಲ್ಲಿ ಮೋಡಿ ವಿದ್ಯೆ ಅಂತಾರೆ.. 64 ಕ್ಷುದ್ರ ವಿದ್ಯೆಗಳಲ್ಲಿ ಮೋಡಿಯೂ ಒಂದು.. ಇಂಗ್ಲೀಷ್ ನಲ್ಲಿ ಬ್ಲ್ಯಾಕ್ ಮ್ಯಾಜಿಕ್ ಅಂತ ಕರೆಯೋ ಈ ವಿದ್ಯೆಯ ಬಗ್ಗೆ ಬರೆಯದಿದ್ದರೆ ಇಡೀ ಲೇಖನ ಅಪೂರ್ಣ ಅನ್ನೋದು ಗೊತ್ತಿತ್ತು.. ಹೀಗಾಗಿ ಈ ಮೋಡಿ ವಿದ್ಯೆ ಬಗ್ಗೆ ತಿಳಿದುಕೊಳ್ಳೋಕೆ ಹವಣಿಸಿದ್ದೆ…

ಮತ್ತದೇ ಕೊಳ್ಳೆಗಾಲದ ಗೆಳೆಯ ಬಸಂತ್ ನನ್ನ ನೆರವಿಗೆ ನಿಂತ..ನಿಜಕ್ಕೂ ಆತನಿಗೆ ನಾನು ಚಿರಖುಣಿ..ಇಂತಹದ್ದೊಂದು ಅರ್ಥಪೂರ್ಣ ಲೇಖನ ಬರೆಯೋಕೆ ನೆರವಾದ ಅನೇಕ ಗೆಳೆಯರ ಪೈಕಿ ಬಸಂತ್ ಪಾಲು ಹೆಚ್ಚಾಗಿಯೇ ಇದೆ… ಬಸಂತ್ ಗೆ ಕರೆ ಮಾಡಿ ಮೋಡಿ ವಿದ್ಯೆ ಬಗ್ಗೆ ತಿಳಿದುಕೊಳ್ಳಬೇಕು ಅಂದಿದ್ದೆ.. ಅದಕ್ಕೆ ಅವನು ಹೇಳಿದ್ದು ಏನು ಗೊತ್ತಾ..? ಮೋಡಿ ಗೊತ್ತಿಲ್ಲದೆ ಇದ್ರೆ ಮಾಂತ್ರಿಕನಾಗೋಕೆ ಸಾಧ್ಯವೇ ಇಲ್ಲ.. ಅದೇ ಅವರ ಅಸಲಿ ಬಂಡವಾಳ ಅಂದಿದ್ದ.. ಹೀಗಾಗಿ ನನಗೆ ಮತ್ತಷ್ಟು ಕೂತುಹಲ ಜಾಸ್ತಿಯಾಗಿತ್ತು…

ಅದೊಂದು ಭಾನುವಾರ ಬೆಳ್ಳೆಗ್ಗೆ ಐದು ಗಂಟೆಗೆಲ್ಲ ಬೆಂಗಳೂರು ಬಿಟ್ಟವನು ಹತ್ತರ ಹೊತ್ತಿಗೆ ಕೊಳ್ಳೇಗಾಲ ತಲುಪಿದ್ದೆ… ನನಗಾಗಿ ಬಸಂತ್ ಮಾಮೂಲಿಯಂತೆ ಬಸ್ ನಿಲ್ದಾಣದಲ್ಲಿ ರೆಡಿಯಾಗಿ ನಿಂತಿದ್ದ.. ಅವನ ಬೈಕು ಏರಿ ಹೊರಟಿದ್ದು ಸೇಮ್ ಓಲ್ಡ್ ಮಾಂತ್ರಿಕ ಮೋಡಿ ಕೃಷ್ಣಪ್ಪನ ಮನೆಗೆ… ಹೌದು ಮೋಡಿ ಕೃಷ್ಣಪ್ಪನ ಮನೆ ಬಾಗಿಲಿಗೆ ತಲುಪಿದ್ವು… ಬಾಗಿಲಲ್ಲೇ ನನಗೆ ಆಶ್ಚರ್ಯ ಕಾದಿತ್ತು.. ಅದೇನಪ್ಪ ಅಂದ್ರೆ ತಿನ್ನೋ ರೊಟ್ಟಿ ಇರುತ್ತಲ್ಲ, ಅಂತ ರೊಟ್ಟಿಯೊಂದಕ್ಕೆ ಹಗ್ಗ ಬಳಸಿ ಬೀಸೋ ಕಲ್ಲು ನೇತಾಕಿ ಬಿಟ್ಟಿದ್ದಾನೆ.. ಅಲೇ ಇವನಾ.. ಸೈನ್ಸ್ ನಲ್ಲಿ ಫೋರ್ಸ್ ಚಾಪ್ಟರ್ ಇದೆಯಲ್ಲ, ಆ ಬಲವನ್ನೇ ಅಲ್ಲಿ ಪ್ರಯೋಗಿಸಿದ್ದ.. ಎರಡು ಕಡೆ ತೂತು ಮಾಡಿ ಸಮಬಲದಲ್ಲಿ ಎಳೆದಾಗ ಕಾಗದ ಹೇಗೆ ಹರಿಯೋದಿಲ್ಲವೋ ಅದೇ ಟೆಕ್ನಿಕ್ ಯೂಸ್ ಮಾಡಿದ್ದ… ನೋಡಿಕೊಂಡು ಒಳಗೆ ಹೋಗಿದ್ದೆ.. ಅಲ್ಲಿ ಸೌತೆ ಕಾಯಿಗೆ ರುಬ್ಬು ಗುಂಡು ನೇತು ಬಿಟ್ಟಿದ್ದ.. ಇದೆಲ್ಲವೂ ತಾನು ಪವರ್ ಫುಲ್ ಅಂತ ಮೂಢ ಜನರನ್ನ ನಂಬಿಸೋದಿಕ್ಕಾಗಿ ಅಷ್ಟೆ…

ದೆವ್ವ ಭೂತದ ಹೆಸ್ರಲ್ಲಿ ಹೊಟ್ಟೆ ಪಾಡು ನಡೆಸೋ ಪ್ರತಿಯೊಬ್ಬರಿಗೂ ಈ ಮೋಡಿ ವಿದ್ಯೆ ಗೊತ್ತಿರುತ್ತೆ… ನಾಲಿಗೆ ಬೇರ್ಪಡಿಸೋದು, ಕಣ್ಣು ಗುಡ್ಡೆಯನ್ನ ಕೀಳೋದು, ಕಿಡ್ನಿಯಲ್ಲಿ ಕಲ್ಲು ತೆಗೆಯೋದು, ನಿಂಬೆ ಹಣ್ಣನ್ನ ಉರುಳಿಸೋದು, ಮಾಯ ಮಾಡೋದು, ರಕ್ತ ಬರಿಸೋದು, ಇಂತಹ ನೂರಾರು ವಿದ್ಯೆಗಳಲ್ಲಿ ವಿಜ್ಞಾನದ ಬಳಕೆಯಾಗಿರುತ್ತೆ.. ಅವರು ಬಳಸೋ ಪರಿಕರಗಳು ನಿಮಗೆ ಸಿಕ್ರೂ ನೀವು ಕೂಡ ಬ್ಲ್ಯಾಕ್ ಮ್ಯಾಜಿಶಿಯನ್ ಆಗಬಹುದು… ಇಲ್ಲಿ ಯಾವ ದೆವ್ವವೂ ಇಲ್ಲ ಭೂತವೂ ಇಲ್ಲ.. ಭಗವಂತನ ಶಕ್ತಿಯೂ ಅಲ್ಲ, ಜಸ್ಟ್ ಇದು ಮೋಡಿ ವಿದ್ಯೆ..ಅರ್ಥಾತ್ ಕಣ್ಣು ಕಟ್ಟು ವಿದ್ಯೆಯಷ್ಟೆ… ಇವತ್ತಿಗೂ ಅನೇಕ ಕಡೆ ಬೀದಿ ಬೀದಿಯಲ್ಲಿ ಈ ಪ್ರದರ್ಶನಗಳನ್ನ ಮಾಡಿ ಹೊಟ್ಟೆ ಹೊರೆಯುವವರಿದ್ದಾರೆ…ಅದೇ ಮ್ಯಾಜಿಕನ್ನ ಈ ಮಾಂತ್ರಿಕರು ಕೂಡ ಬಳಸ್ತಾರೆ ಅನ್ನೋದು ಮಾಂತ್ರಿಕ ಕೃಷ್ಣಪ್ಪನ ಮನೆಯಲ್ಲೇ ನನಗೆ ಗೊತ್ತಾಗಿ ಹೋಗಿತ್ತು… ನನ್ನ ಕಣ್ಣ ಮುಂದೆಯೇ ಅವನು ಬೇವಿನ ಎಲೆಯಲ್ಲಿ ಚೇಳುಗಳನ್ನ ಮಾಡಿ ತೋರಿಸಿದ್ದ… ನಿಂಬೆ ಹಣ್ಣು ಉರುಳಿಸಿದ್ದ.. ರಕ್ತ ಬರಿಸಿದ್ದ..ಎಲ್ಲವೂ ಮೋಡಿಯೇ.. ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ.

(ಮುಂದುವರಿಯುತ್ತದೆ…)

  • ಕೆ.ಆರ್.ಬಾಬು
Leave A Reply

Your email address will not be published.