ಮಡಿಕೆಯಲ್ಲಿದ್ದ ಅಕ್ಕಿಗೆ ನೀರಾಕುತ್ತಲೇ ನೆತ್ತರಿನಂತೆ ಉಕ್ಕ ತೊಡಗಿತ್ತು..? ಇದು ಹೇಗೆ ಮಾಡ್ತಾರೆ ಗೊತ್ತಾ..? ಭಾಗ-26

0

ನಾನು ಮಾಟಗಾರನೊಬ್ಬನ ಮನೆ ಹೊಕ್ಕ ತಕ್ಷಣ ಆತ ನನ್ನ ಕೈಗೊಂದು ಲೆಟರ್ ನೀಡಿದ್ದ… ಅದು ಸರ್ಕಾರದಿಂದ ಆತನಿಗೆ ಕೊಡಲಾಗಿದ್ದ ಪರ್ಮಿಷನ್ ಲೆಟರ್… ಕೇವಲ ಮನರಂಜನೆಗಾಗಿ ಮೋಡಿ ಆಟವನ್ನ ನೆಡಸಲಿಕ್ಕೆಂದು ಸರ್ಕಾರ ಪರ್ಮಿಷನ್ ಕೊಟ್ಟಿರುತ್ತದೆ..ಕೆಲವೊಮ್ಮೆ ಮೋಡಿ ಆಟದ ಸ್ಥಳದಲ್ಲಿ ಜನರನ್ನ ನಿಯಂತ್ರಿಸೋಕೆ ಸರ್ಕಾರದಿಂದಲೇ ನೇಮಕಗೊಂಡಿರೋ ಪೊಲೀಸ್ರು ಇರ್ತಾರೆ.. ಆದ್ರೆ ಇದೇ ಪರ್ಮಿಷನ್ ಲೆಟರ್ ಇಟ್ಕೊಂಡು ಈ ಮಾಂತ್ರಿಕರು ಅದನ್ನ ಬಂಡವಾಳ ಮಾಡಿಕೊಳ್ತಾರೆ..ನನ್ನಂತವರು ಯಾರಾದ್ರೂ ಪರಿಶೀಲನೆಗೆ ಅಂತ ಹೋದ್ರೆ ಈ ಲೆಟರ್ ತೋರಿಸುತ್ತಾರೆ.. ನೋಡಿ ನಾವು ಮಾಡೋದು ಮೋಡಿ ಮಾತ್ರ..ಮಾಟ ಮಂತ್ರ ಮಾಡೋದಿಲ್ಲ ಅಂತಾರೆ..ಆದ್ರೆ ಅಸಲಿಯತ್ತು ಏನಪ್ಪ ಅಂದ್ರೆ ಇದೇ ಮೋಡಿ ವಿದ್ಯೆಯನ್ನ ಬಳಸಿಕೊಂಡು ಮೂಢ ಭಕ್ತರನ್ನ ನಂಬಿಸುತ್ತಾರೆ…

ಉದನೂರಿನ ಮಾಂತ್ರಿಕನೊಬ್ಬನ ಮನೆಗೆ ಹೋದಾಗ ನನಗೆ ಆಗಿದ್ದು ವಿಚಿತ್ರ ಅನುಭವ…ನಾನು ಲೇಖಕನಲ್ಲ, ಪತ್ರಕರ್ತನೂ ಅಲ್ಲ, ಅಂತ ಹೇಳಿದ್ರು ನಂಬದ ಮಾಂತ್ರಿಕ ಭಯಕ್ಕೆ ಬಿದ್ದವನಂತೆ, ಸಾರ್ ನಾನು ಮಾಟಗೀಟ ಮಾಡೋದಿಲ್ಲ…ನಾನೇನಿದ್ರೂ ಮಾಟ ಮಾಡಿದ್ರೆ ತೆಗೆಯೋದಷ್ಟೆ…ನಮ್ಮ ವಂಶಕ್ಕೂ ಮಾಟಕ್ಕೂ ಆಗಿಬರೋದಿಲ್ಲ ಸಾರ್, ನಾವು ಮಾಡುವಂತಿಲ್ಲ..ಒಂದು ವೇಳೆ ಆ ರೀತಿ ಮಾಡಿದ್ರೆ ನಮ್ಮ ವಂಶ ನಿರ್ವಂಶವಾಗಿಬಿಡುತ್ತೆ ಅಂದಿದ್ದ… ನನಗೂ ಹೆಂಡ್ತಿ ಮಕ್ಕಳು ಇದ್ದಾರೆ ಸಾರ್… ಕಾಳಿಕಾದೇವಿ ಮಾಟ ಮಂತ್ರ ಮಾಡಿದ್ರೆ ಕ್ಷಮಿಸ್ತಾಳಾ..? ಅಂತ ಡವ್ ಮಾಡಿದ್ದ…

ಸಾಕಷ್ಟು ಜಮೀನಿದೆ ಹೆಂಗೂ ಜೀವನ ನಡೀತಾ ಇದೆ… ನನಗೆ ಗೊತ್ತಿಲ್ಲದೆ ಈ ಮಾಂತ್ರಿಕ ವಿದ್ಯೆಯಾ ಶಕ್ತಿ ಒಲಿದು ಬಿಟ್ಟಿದೆ ಸಾರ್ ಅಂಧಿದ್ದ… ಕಷ್ಟ ಅಂತ ಹೇಳಿಕೊಂಡು ಹಾವೇರಿ, ದಾವಣಗೆರೆ, ತುಮಕೂರು, ಬೆಂಗಳೂರು ಸೇರಿದಂತೆ ಅನೇಕ ಕಡೆಯಿಂದೆಲ್ಲ ಜನ ಬರ್ತಾರೆ ಸಾರ್… ದೇವಿಯ ಅರಾಧಕನಾಗಿ ಅವರಿಗೆ ಸಹಾಯ ಮಾಡ್ತೀನಿ ಅಷ್ಟೆ..ನೊಂದವರ ಕಷ್ಟ ಪರಿಹರಿಸ್ತೀನಿ… ನನಗೆ ಮೋಡಿ ವಿದ್ಯೆ ತುಂಬಾ ಚೆನ್ನಾಗಿ ಗೊತ್ತು…ಅದರಿಂದಲೂ ಹೊಟ್ಟೆ ಪಾಡು ನಡೆಯುತ್ತೆ ಸಾರ್ ಅಂದಿದ್ದ…

ನಾನು ಅವನನ್ನೇ ದಿಟ್ಟಿಸಿ ನೋಡುತ್ತಾ..ಏನಪ್ಪ ನೀನು ಮಾಡೋ ಮೋಡಿ ವಿದ್ಯೆಯನ್ನ ನಾನು ನೋಡಬಹುದಾ ಅಂತ ಕೇಳಿದ್ದೆ… ಸಾರ್ ದೊಡ್ಡವನ್ನೆಲ್ಲಾ ಮಾಡೋಕೆ ಆಗಲ್ಲ ಬೇಕಾದ್ರೆ ಯಾವುದಾದ್ರೂ ಒಂದು ಚಿಕ್ಕದ್ದು ಮಾಡಿ ತೋರುಸ್ತೀನಿ ಅಂದಿದ್ದ.. ತನ್ನ ಮಗನಿಗೆ ಒಂದು ತಟ್ಟೆಯನ್ನ ತರೋಕೆ ಹೇಳಿದ್ದ… ಅದರೊಳಗೆ ಒಂದು ಸಣ್ಣ ಮಡಿಕೆ ಇಟ್ಟು, ನನಗೆ ತೋರಿಸಿ ಒಂದು ಕಪ್ ಅಕ್ಕಿಯನ್ನ ಮುಂದಿಟ್ಟುಕೊಂಡ… ನಂತ್ರ ಕಾಳಿಕಾದೇವಿಗೊಂದು ಪೂಜೆ ಮಾಡಿ ಸಾರ್ ನಿಮ್ಮ ಮನಸಲ್ಲಿ ಏನಾದ್ರೂ ಬೇಡಿಕೊಳ್ಳಿ ಅಂದಿದ್ದ.. ನಿಮಗೆ ಯಾರಾದ್ರೂ ಏನಾದ್ರೂ ಮಾಡಿಸಿದ್ರೆ ನಾನು ಇದರೊಳಗೆ ಹಾಕೋ ನೀರು ರಕ್ತವಾಗುತ್ತೆ ಅಂದಿದ್ದ.. ಎಲಾ ಇವನಾ ಅನ್ಕೊಂಡು ನಾನು ದೇವರಿಗೆ ನಮಿಸಿ ಊಂ ಬೇಡಿಕೊಂಡಿದ್ದೀನಿ ಮುಂದುವರಿಸಪ್ಪ ಅಂದಿದ್ದೆ…ನನ್ನ ಕೈಗೆ ಅಕ್ಕಿ ಇದ್ದ ಕಪ್ ಕೊಟ್ಟು ಆ ಮಡಿಕೆಯೊಳಗೆ ಹಾಕಿ ಅಂದಿದ್ದ…

ಆ ಅಕ್ಕಿಯನ್ನ ಸೂಕ್ಷ್ಮವಾಗಿ ಗಮನಿಸಿಯೇ ಮಡಿಕೆಯೊಳಗೆ ಹಾಕಿದ್ದೆ.. ದೇವಿಗೆ ಪೂಜೆ ಮಾಡುತ್ತ ಅಕಟಕಟ ಎನ್ನುತ್ತಾ ಕೂತ..ನಂತ್ರ ನಮ್ಮ ಕೈಗೆ ಒಂದು ಕಪ್ ನೀರು ಕೊಟ್ಟು ಮಡಿಕೆಯೊಳಗೆ ಹಾಕುವಂತೆ ತಿಳಿಸಿದ್ದ.. ನಾನು ನೀರು ಹಾಕ್ತಿನಿ…ಬುಗು ಬುಗು ಅಂತ ಕುದಿಯಲಾರಂಭಿಸಿತು.. ನಂತ್ರ ಆ ನೀರು ಕೆಂಪು ರಕ್ತದಂತೆ ಹೊರ ಬರೋಕೆ ಪ್ರಾರಂಭಿಸಿತ್ತು… ಅದನ್ನ ತೋರಿಸಿ ನೋಡಿ ನಿಮಗೆ ಯಾರೋ ಕೆಟ್ಟದ್ದು ಮಾಡಿಸಿದ್ದಾರೆ ಅಂದಿದ್ದ…ಅದರ ಬೆನ್ನಲ್ಲೆ ನಾನು ಹೇಳಿದ್ದ ಒಂದು ಮಾತಿಗೆ ಆ ಮಾಂತ್ರಿಕನ ಬಾಯಿಂದ ಮಾತೇ ಹೊರಡಲಿಲ್ಲ.. ಇಷ್ಟಕ್ಕು ಆ ಅಕ್ಕಿ ನೀರಾಕುತ್ತಲೇ ಹೇಗೆ ರಕ್ತದಂತೆ ಕೆಂಪಾಯ್ತು ಗೊತ್ತಾ ವೀಕ್ಷಕರೇ…ಅದನ್ನ ವಿವರಿಸ್ತೀನಿ ಮುಂದಿನ ಸಂಚಿಕೆಯಲ್ಲಿ…


(ಮುಂದುವರೆಯುತ್ತದೆ….)

  • ಕೆ.ಆರ್.ಬಾಬು

Leave A Reply

Your email address will not be published.