ಅಬ್ಬರಿಸಿದ ಸ್ಯಾಮ್ಸನ್​- ಸ್ಮಿತ್​, ಡು ಪ್ಲೆಸಿಸ್ ಹೋರಾಟ ವ್ಯರ್ಥ : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗೆದ್ದು ಬೀಗಿದ ರಾಜಸ್ತಾನ್ ರಾಯಲ್ಸ್

0

ಶಾರ್ಜ: ಉದಯೋನ್ಮುಖ ಆಟಗಾರ ಸಜು ಸ್ಯಾಮ್ಸನ್ ಹಾಗೂ ಸ್ಮಿತ್ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಐಪಿಎಲ್ 2020 ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 16 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್​ (6) ರನ್ ಗಳಿಸಿ ನಿರ್ಗಮಿಸುತ್ತಲೇ ನಾಯಕ ಸ್ಟೀವ್​ ಸ್ಮಿತ್​ ಜೊತೆಗೂಡಿದ ಯುವ ಆಟಗಾರ ಸಂಜು ಸ್ಯಾಮ್ಸನ್​ ಶತಕದ ಜತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ಕೇವಲ 34 ಎಸೆತಗಳಲ್ಲಿ 9 ಸಿಕ್ಸರ್,​ 1 ಬೌಂಡರಿ ನೆರವಿನೊಂದಿಗೆ ಸ್ಫೋಟಕ 74 ರನ್​ ಕಲೆಹಾಕಿದ್ದ ಸ್ಯಾಮ್ಸನ್​ ಬಿರುಸಿನ ಹೊಡೆತಕ್ಕೆ ಕೈಹಾಕಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ಬಾಲಂಗೋಚಿಯಂತೆ ಡೇವಿಡ್​ ಮಿಲ್ಲರ್ (0), ರಾಬಿನ್​ ಉತ್ತಪ್ಪ (5), ರಾಹುಲ್​ ತೆವಾಟಿಯಾ (10), ರಿಯಾನ್​ ಪರಾಗ್​ (6) ಟಾಮ್​ ಕರನ್​ (0) ವಿಕೆಟ್​ ಒಪ್ಪಿಸಿ ಪೆವಲಿಯನ್​ ಸೇರಿದರು. ಜವಾಬ್ದಾರಿಯುತ ಆಟವಾಡಿದ ಸ್ಮಿತ್​ 47 ಎಸೆತಗಳಲ್ಲಿ 4 ಸಿಕ್ಸರ್​, 4 ಬೌಂಡರಿ ನೆರವಿನೊಂದಿಗೆ 69 ರನ್​ ಗಳಿಸಿ ತಂಡಕ್ಕೆ ಆಸರೆಯಾದರು.

ಕೊನೆಯಲ್ಲಿ ಅಬ್ಬರಿಸಿದ ಜೋಫ್ರಾ ಆರ್ಚರ್​ ಕೇವಲ 8 ಎಸೆತಗಳಲ್ಲಿ 4 ಸಿಕ್ಸರ್​ ನೆರವಿನೊಂದಿಗೆ 27* ರನ್​ ಗಳಿಸಿದರೆ, ಟಾಮ್​ ಕರನ್ (10*) ರನ್​ ಕಲೆಹಾಕಿ ಅಜೇಯರಾಗಿ ಉಳಿದರು. ಸಿಎಸ್​ಕೆ ಪರ ಸ್ಯಾಮ್​ ಕರನ್ 3 ವಿಕೆಟ್​ ಕಬಳಿಸಿದರೆ, ದೀಪಕ್​ ಚಹಾರ್​, ಲುಂಗಿ ಎನ್‌ಗಿಡಿ ಹಾಗೂ ಪಿಯೂಷ್​ ಚಾವ್ಲ ತಲಾ 1 ವಿಕೆಟ್​ ಪಡೆದರು.

ರಾಜಸ್ತಾನ್ ರಾಯಲ್ಸ್ ತಂಡ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಚೆನ್ಮೈ ತಂಡಕ್ಕೆ ಮುರಳಿ ವಿಜಯ್​ ಮತ್ತು ಶೇನ್​ ವ್ಯಾಟ್ಸನ್​ 56 ರನ್​ಗಳ ಜತೆಯಾಟದೊಂದಿಗೆ ಉತ್ತಮ ಆರಂಭ ಒದಗಿಸಿದರು. ಆದರೆ, 33 ರನ್​ ಗಳಿಸಿದ್ದ ವ್ಯಾಟ್ಸನ್​ ಹಾಗೂ 21 ರನ್​ ಗಳಿಸಿದ್ದ ವಿಜಯ್ ಬ್ಯಾಕ್​ ಟು ಬ್ಯಾಕ್​ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನೆಡೆಯಾಯಿತು.

ಇತ್ತ ಫ್ಲಾಫ್​ ಡುಪ್ಲೆಸಿಸ್​ಗೆ ಸಾಥ್​ ನೀಡುತ್ತಿದ್ದ ಸ್ಯಾಮ್​ ಕರನ್​ (17) ರನ್​ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನಲ್ಲೇ ರುತುರಾಜ್​ ಗಾಯಕ್​ವಾಡ್​ ರನ್​ ಖಾತೆ ತೆರೆಯದೇ ಹಿಂದಿರುಗಿದರು. ಬಳಿಕ ಬಂದ ಕೇದರ್​ ಜಾಧವ್​ (22) ಉತ್ತಮವಾಗಿ ಆಡಿದರೂ ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಮೂರನೇ ಕ್ರಮಾಂಕದಲ್ಲಿ ಇಳಿದು ಕೊನೆಯವರೆಗೂ ಸ್ಫೋಟಕ ಆಟವಾಡಿದ ಡು ಪ್ಲೆಸಿಸ್​ ಕೇವಲ 37 ಎಸೆತಗಳಲ್ಲಿ 7 ಸಿಕ್ಸರ್​, 1 ಬೌಂಡರಿ ನೆರವಿನಿಂದ 72 ರನ್​ ಗಳಿಸಿ ಏಕಾಂಗಿಯಾಗಿ ಹೋರಾಡಿದರೂ. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್​ಗಳು ಸಾಥ್​ ನೀಡದೇ ಇದ್ದಿದ್ದು ತಂಡಕ್ಕೆ ಹಿನ್ನೆಡೆಯಾಯಿತು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಧೋನಿ ಕೇವಲ 16 ಎಸೆತಗಳಲ್ಲಿ 3 ಸಿಕ್ಸರ್​ ನೆರವಿನಿಂದ ಅಜೇಯ 28 ರನ್​ ಗಳಿಸಿದರೂ ಗೆಲವು ಮಾತ್ರ ದಕ್ಕಲಿಲ್ಲ.

ರವೀಂದ್ರ ಜಡೇಜಾ 1 ರನ್​ ಗಳಿಸಿ ಅಜೇಯರಾಗಿ ಉಳಿದರು. ರಾಜಸ್ಥಾನ ಪರ ರಾಹುಲ್​ ತೆವಾಟಿಯಾ ಪ್ರಮುಖ ಮೂರು ವಿಕೆಟ್​ ಕಬಳಿಸಿ ಮಿಂಚಿದರು. ಉಳಿದಂತೆ ಜೋಫ್ರಾ ಆರ್ಚರ್​, ಶ್ರೇಯಸ್ ಗೋಪಾಲ್​ ಮತ್ತು ಟಾಮ್​ ಕುರನ್​ ತಲಾ 1 ವಿಕೆಟ್​ಗೆ ತೃಪ್ತಿಪಟ್ಟರು.

Leave A Reply

Your email address will not be published.