ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕ : ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ಬೆಂಗಳೂರು : ಉಡುಪಿಯ ಶಿರೂರು ಮಠಕ್ಕೆ ಅಪ್ರಾಪ್ತ ಪೀಠಾಧಿಪತಿಯ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ ವಜಾಗೊಳಿಸಿದೆ.

ಶಿರೂರು ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಲಕ್ಷ್ಮೀವರ ತೀರ್ಥ ಶ್ರೀಪಾದರ ಸಹೋದರ ಲಾತವ್ಯ ಆಚಾರ್ಯ ಹಾಗೂ ಇತರರು ಶಿರೂರು ಮಠಕ್ಕೆ ಪೀಠಾಧಿಪತಿಯ ನೇಮಕವನ್ನು ಪ್ರಶ್ನಿಸಿ, ಹೈಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಕೆ ಮಾಡಿದ್ದರು. ಈ ಕುರಿತು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರು ತೀರ್ಪನ್ನು ಪ್ರಕಟಿಸಿದ್ದಾರೆ.

ಪೀಠಾಧಿಪತಿಗಳ ನೇಮಕ ವಿಚಾರ 800 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮಠದ ಸಂಪ್ರದಾಯ. ಇಂತಹ ಸಂಪ್ರದಾಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದ್ದು, ಮಠಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಅಪ್ರಾಪ್ತರು ಸನ್ಯಾಸ ಸ್ವೀಕಾರ ಮಾಡಲು, ಮಠಾಧಿಪತಿಯಾಗಲು ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ಪ್ರಕರಣದಲ್ಲಿ ಅಪ್ರಾಪ್ತನ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಯಾಗಿದೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ. ಈ ಮೂಲಕ ಸೋದೆ ಮಠಾಧೀಶರಿಗೆ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಂತಾಗಿದೆ.

ಏನಿದು ವಿವಾದ ?

ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರ ಸಂಶಯಾಸ್ಪದ ಸಾವಿನ ಬೆನ್ನಲ್ಲೇ ಶಿರೂರು ಮಠದ ಕಾರ್ಯಕಲಾಪಗಳನ್ನು ಶಿರೂರು ದ್ವಂದ ಮಠವಾಗಿರುವ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಮಠಕ್ಕೆ ನೂತನ ಪೀಠಾಧಿಪತಿಯೋರ್ವರನ್ನು ನೇಮಕ ಮಾಡಿದ್ದಾರೆ. ಸೋದೆ ಮಠದ ಪ್ರಧಾನ ವೈಧಿಕರಾಗಿರುವ ಉದಯ ಸರಳಾತ್ತಾಯ ಅವರ ಪುತ್ರ ಅನಿರುದ್ದ ಸರಳಾಯ ಅವರನ್ನು ಪೀಠಾಧಿಪತಿಯನ್ನಾಗಿ ನೇಮಿಸುವ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಸೋದೆ ಮೂಲ ಮಠದಲ್ಲಿ ಮೇ 11 ರಂದು ಮೂರು ದಿನಗಳ ಕಾಲ ಶಿಷ್ಯ ಸ್ವೀಕಾರ ಕಾರ್ಯಕ್ರಮವನ್ನೂ ನಡೆಸಿದ್ದರು.

ಇದರ ಬೆನ್ನಲ್ಲೇ ವಿವಾದವೊಂದು ಹುಟ್ಟಿಕೊಂಡಿದ್ದು ಶಿರೂರು ಮಠಕ್ಕೆ ಅಪ್ರಾಪ್ತ ಯತಿಯೋರ್ವರನ್ನು ನೇಮಕ ಮಾಡಲಾಗಿದೆ ಅನ್ನುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿತ್ತು.

ಇದನ್ನೂ ಓದಿ : ಶಿರೂರು ಮಠಕ್ಕೆ ಕೊನೆಗೂ ಅನಿರುದ್ಧ್ ಸರಳತ್ತಾಯ ಪೀಠಾಧಿಪತಿ : ಮೆಚ್ಚಲೇಬೇಕು ಸೋದೆ ಮಠದ ಶ್ರೀಗಳ ತಾಕತ್ತು

ಇದನ್ನೂ ಓದಿ : ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ…! ಅಪ್ರಾಪ್ತರ ಆಯ್ಕೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ…!!

( High Court Dismisses Petition of shirur Mata Minor Pitadipathi PIL )

Comments are closed.