ಐಫೋನ್ ತಯಾರಕ ಕಂಪನಿ ಫಾಕ್ಸ್ಕಾನ್ನಲ್ಲಿ ಕನ್ನಡಿಗ ಉದ್ಯೋಗಿಗಳಿಗೆ ಕಿರುಕುಳ : ಕರವೇ ಆರೋಪ
Foxconn Karnataka Rakshana Vedike : ಬೆಂಗಳೂರು : ದೊಡ್ಡಬಳ್ಳಾಪುರದಲ್ಲಿರುವ ಐಪೋನ್ ತಯಾರಿಕಾ ಕಂಪೆನಿ ಫಾಕ್ಸ್ಕಾನ್ ಉತ್ಪಾದನಾ ಘಟಕದಲ್ಲಿ ಕನ್ನಡ ಮಾತನಾಡುವ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದ್ದು, ತಾರತಮ್ಯ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆರೋಪಿಸಿದ್ದಾರೆ.
ಫಾಕ್ಸ್ಕಾನ್ ಕಂಪೆನಿಯ ವಿರುದ್ದ ಪ್ರವೀಣ್ ಶೆಟ್ಟಿ ಅವರ ನೇತೃತ್ವದ ಕನ್ನಡ ರಕ್ಷಣಾ ವೇದಿಕೆ ಈಗಾಗಲೇ ಪ್ರತಿಭಟನೆಯನ್ನು ನಡೆಸಿ ಎಚ್ಚರಿಕೆಯನ್ನು ನೀಡಿತ್ತು. ಕಂಪೆನಿಯ ಉನ್ನತ ಆಡಳಿತ ಮಂಡಳಿ ಮತ್ತು ಮಾನವ ಸಂಪನ್ಮೂಲಕ ಇಲಾಖೆಯ ನೇಮಕಾತಿ ಪ್ರಕ್ರಿಯೆ ನಡೆಸುವಾಗ ಕರ್ನಾಟಕದ ಅಭ್ಯರ್ಥಿಗಳಿಗಿಂತ ತಮಿಳುನಾಡಿನ ಅಭ್ಯರ್ಥಿಗಳಿಗೆ ಹೆಚ್ಚಿನ ಒಲವು ತೋರುತ್ತಿದೆ ಎಂದು ಆರೋಪಿಸಿದೆ.
ಕಾರ್ಮಿಕರ ಕುಂದು ಕೊರತೆಗಳನ್ನು ಪರಿಹಾರ ಮಾಡಲು ಮಾನವ ಸಂಪನ್ಮೂಲ ವಿಭಾಗ ಸಂಪೂರ್ಣವಾಗಿ ವಿಫಲವಾಗಿದೆ. ನ್ಯೂಸ್ ನೆಕ್ಸ್ಟ್ ಜೊತೆಗೆ ಮಾತನಾಡಿರುವ ಕರವೇ ರಾಜ್ಯಾಧ್ಯಕ್ಷರಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರು ಫಾಕ್ಸ್ ಕಾನ್ ಕಂಪೆನಿಯ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಫಾಕ್ಸ್ಕಾನ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನರ್ಮದಾ ಮತ್ತು ಸುಬ್ರಮಣಿ ಉದ್ದೇಶಪೂರ್ವಕವಾಗಿ ತಮಿಳುನಾಡಿನ ವ್ಯಕ್ತಿಗಳನ್ನು ನೇಮಿಸಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕದ ಉದ್ಯೋಗಿಗಳಿಗೆ ಅಸಮಾಧಾನ ಉಂಟು ಮಾಡಿದೆ. ಐಪೋನ್ ತಯಾರಿಕಾ ಕಂಪೆನಿಯಾಗಿರುವ ಫಾಕ್ಸ್ಕಾನ್ ಮಹಿಳಾ ನೌಕರರ ಭದ್ರತೆಯ ವಿಚಾರದಲ್ಲಿಯೂ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.

Also Read : ಫಾಕ್ಸ್ಕಾನ್ ಕಂಪೆನಿಯಿಂದ ಕನ್ನಡಿಗರಿಗೆ ವಂಚನೆ : ಕರವೇ ಪ್ರತಿಭಟನೆ
ಫಾಕ್ಸ್ಕಾನ್ ಕಂಪೆನಿ ತನ್ನ ಮಹಿಳಾ ಉದ್ಯೋಗಿಗಳಿಗೆ ಮನೆ ತೆರಳಲು ಡೋರ್ ಟು ಡೋರ್ ಪಿಕಪ್ ಮತ್ತು ಡೋರ್ ಟು ಡೋರ್ ಡ್ರಾಪ್ ಸೌಲಭ್ಯ ನೀಡಲು ವಿಫಲವಾಗಿದೆ. ಇದರಿಂದಾಗಿ ಮಹಿಳಾ ಸಿಬ್ಬಂದಿಗಳನ್ನು ನಡು ರಸ್ತೆಯಲ್ಲಿಯೇ ಇಳಿಸಿ ಹೋಗುತ್ತಿದ್ದಾರೆ. ಇದರಿಂದಾಗಿ ಮಹಿಳಾ ಸಿಬ್ಬಂದಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಕಂಪೆನಿಯ ಆಡಳಿತ ಇಲಾಖೆಯ ಸೀನ್ ಮತ್ತು ಹಾರ್ಪರ್ ಹಾಗೂ ಪ್ರಭಾಕರ್ ಜವಾಬ್ದಾರರು ಎಂದು ಅವರು ಹೇಳಿದ್ದಾರೆ.

ಫಾಕ್ಸ್ಕಾನ್ ಕಂಪೆನಿ ದುಡಿಯುತ್ತಿರುವ ಕರ್ನಾಟಕದ ಅನೇಕ ಉದ್ಯೋಗಿಗಳು ತಾವು ಮನೆಗೆ ತೆರಳಲು ಕ್ಯಾಬ್ ಸೌಕರ್ಯವನ್ನು ಕೇಳಿದ್ದಾರೆ. ಆದರೆ ಕಂಪೆನಿ ಕನ್ನಡಿಗರಿಗೆ ಕ್ಯಾಬ್ ಸೌಲಭ್ಯ ನೀಡಲು ನಿರಾಕರಿಸಿದೆ.

ಭಾರತದ ಅತೀದೊಡ್ಡ ಐಫೋನ್ ಉತ್ಪಾದನಾ ಘಟಕ ಸ್ಥಾಪನೆಗೆ ಇವರಿಗೆ ಕರ್ನಾಟಕದಲ್ಲಿ ಭೂಮಿ ನೀಡಲಾಗಿದೆ. ಐಫೋನ್ ತಯಾರಕ ಕಂಪನಿ ನಮ್ಮ ರಾಜ್ಯದಿಂದ ಬಹುದೊಡ್ಡ ಲಾಭ ಪಡೆದಿದೆ. ಆದರೆ ಕನ್ನಡಿಗ ಸಿಬ್ಬಂದಿ ಕಿರುಕುಳ ನೀಡುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯುವ ಕಾರ್ಯ ಮಾಡಬೇಕಾಗಿದೆ ಎಂದು ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.

ಮಾರ್ಚ್ 2025 ರಲ್ಲಿ, ಫಾಕ್ಸ್ಕಾನ್ ಕಂಪೆನಿಗೆ ಸೇರಿದ ಹೊಸಕೋಟೆಯ ಕಂಬಾಲಿಪುರದಲ್ಲಿರುವ ಬಿಸಿಡಿ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಒಳಚರಂಡಿ ನಿರ್ವಹಣಾ ಕೆಲಸ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಗಂಡು ಭ್ರೂಣ ಪತ್ತೆಯಾಗಿತ್ತು. ಈ ವಸತಿ ಸಂಕೀರ್ಣದಲ್ಲಿ ಫಾಕ್ಸ್ಕಾನ್ ಕಂಪೆನಿಯ ಮಹಿಳಾ ಉದ್ಯೋಗಿಗಳಿಗೆ ವಸತಿ ಸೌಕರ್ಯ ನೀಡಲಾಗಿತ್ತು.

ಈ ಕುರಿತು ಸೂಲಿಬೆಲೆ ಪೊಲೀಸರು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲಾ ಕಂಪೆನಿಯ ಮುಖ್ಯಸ್ಥ ಅರುಣ್ ಅವರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದ್ದು, ಕಂಪೆನಿಯಲ್ಲಿ ಉದ್ಯೋಗದಲ್ಲಿರುವ 2100 ಉದ್ಯೋಗಿಗಳ ವಿವರವನ್ನು ಕೋರಿದ್ದಾರೆ.
Karnataka Rakshana Vedike alleges harassment of Kannadigas at Doddaballapura Foxconn unit



