ಹನುಮಜಯಂತಿ ದಿನ ನಾಟಿ ಕೋಳಿ ಸವಿದ ಸಿದ್ದರಾಮಯ್ಯ : ಆರ್.ಅಶೋಕ್ ಆಕ್ಷೇಪ
ಬೆಂಗಳೂರು : R. Ashok objects: ಹನುಮ ಜಯಂತಿಯ ದಿನವೇ ನಾಟಿ ಕೋಳಿ ಬ್ರೇಕ್ ಫಾಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ರಾಜ್ಯದ ಜನತೆಗೆ ಹನುಮ ಜಯಂತಿ ಶುಭಾಷಯಗಳನ್ನು ಕೋರಿದ್ದಾರೆ. ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ, ಕಿಷ್ಕಿಂಧೆಯಲ್ಲಿ. ಇವತ್ತು ಹನುಮ ಮಾಲೆ ಹಾಕ್ಕೊಂದು ಉಪವಾಸ ಮಾಡೋ ಪರಿಪಾಠ. ನಾನೂ ಕೂಡಾ ಆಂಜನೇಯ ದೇವಸ್ಥಾನಕ್ಕೆ ಹೋಗಿ ಬಂದೆ ಎಂದಿದ್ದಾರೆ.
ವಿಪರ್ಯಾಸ ಅಂದ್ರೆ ಹನುಮ ಜಯಂತಿ ದಿನವೇ ಡಿಕೆಶಿ ನಿವಾಸದಲ್ಲಿ ಕನಕಪುರದ ನಾಟಿ ಕೋಳಿ ಮರ್ಡರ್ ಆಗಿದೆ. ನಾಟಿ ಕೋಳಿಯ ಪುಲಾವ್, ಬಿರಿಯಾನಿ, ಸಾರು ತಿಂದಿದ್ದಾರೆ. ಸಿದ್ದರಾಮಯ್ಯ ಈ ಮೊದಲೇ ಮಾಂಸ ತಿಂದು ಧರ್ಮಸ್ಥಳ ಕ್ಕೆ ಹೋಗಿದ್ದವರು, ಅದು ಆಗ ದೊಡ್ಡ ಸುದ್ದಿಯಾಗಿತ್ತು ಎಂದರು.
ನನಗೆ ಸಿಎಂ ನಾಟಿ ಕೋಳಿ ತಿಂದ ಬಗ್ಗೆ ಬಹಳ ಫೋನ್ ಬಂದಿವೆ. ಏನ್ ಸಾರ್ ಹನುಮ ಜಯಂತಿ ದಿನ ಸಿಎಂ ನಾಟಿ ಕೋಳಿ ಆರಾಧನೆ ಮಾಡಿದ್ದಾರಲ್ಲ ಅಂತ ಫೋನ್ ಮಾಡಿದ್ದಾರೆ. ಇದೊಂದು ವಿಪರ್ಯಾಸ ಎಂದು ಅಶೋಕ್ ಹೇಳಿದ್ದಾರೆ.
ಬ್ರೇಕ್ಫಾಸ್ಟ್ ಹಿಂದೆ ಸೋನಿಯಾ ಗಾಂಧಿಯವರ ನಿರ್ದೇಶನ, ರಾಹುಲ್ ಗಾಂಧಿಯವರ ಚಿತ್ರಕತೆ, ಕೆ ಸಿ ವೇಣುಗೋಪಾಲ್ ಡೈಲಾಗ್ ಇದರ ಹಿಂದೆ ಇದೆ.ನಿರ್ದೇಶನ, ಚಿತ್ರಕತೆ, ಡೈಲಾಗ್ ಎಲ್ಲ ಹೇಳಿ ಮಾಡಿಸಿದ ಪ್ರಹಸನ ಇದು ಎಂದು ಅಶೋಕ್ ಆರೋಪಿಸಿದ್ದಾರೆ.
ಅದೃಷ್ಟಕ್ಕೆ ಡಿಕೆಶಿ ಇವತ್ತು ನಾಟಿ ಕೋಳಿ ತಿನ್ಲಿಲ್ಲ. ರಾಜ್ಯದಲ್ಲಿ ಹಿಂದೂಗಳೇ ಬಹುಸಂಖ್ಯಾತರು. ಹಿಂದೂಗಳ ಭಾವನೆಗೆ ಸಿಎಂ ಧಕ್ಕೆ ತಂದಿದ್ದಾರೆ, ನೋವುಂಟು ಮಾಡಿದ್ದಾರೆ. ಸಿದ್ದರಾಮಯ್ಯ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರಕಾರದಲ್ಲಿ ಗೊಂದಲ
ಡಿಕೆಶಿ ಅಧಿಕಾರ ಒದ್ದು ಕಿತ್ಕೊಳ್ಳೋ ಕೆಟಗರಿಯವನು ಅಂದಿದ್ರು. ಈಗ ಡಿಕೆಶಿಗೆ ಅಧಿಕಾರ ಸಿಕ್ಕಿಲ್ಲ. ಈಗ ಅವರ ಅಧಿಕಾರ ಕಿತ್ಕೊಳ್ಳೋಕ್ಕೆ ಯಾರ ಮನೆ ಬಾಗಿಲಿಗೆ ಒದೀತಾರೆ ? ಖರ್ಗೆ ಮನೆಯೋ ? ಸೋನಿಯಾ ಗಾಂಧಿ ಮನೆ ಬಾಗಿಲಿಗೆ ಒದಿತಾರೋ ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ತಟ್ಟೆ ಇಡ್ಲಿ, ನಾಟಿ ಕೋಳಿ ಸಾರು ತಿಂದಿದ್ದಾರೆ. ಪರಮೇಶ್ವರ್ ಗೆ ಇದು ವ್ಯಥೆ ತಂದಿದೆ. ಅವರಿಗೆ ಇಡ್ಲೀನೂ ಸಿಕ್ಕಿಲ್ಲ, ಸಾಂಬಾರೂ ಸಿಕ್ಕಿಲ್ಲ. ಯಾರಿಗೂ ಬಾರದ ಪಾಡು ಪರಮೇಶ್ವರ್ ಗೆ ಬಂದಿದೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಇವರು ಏನಾದ್ರೂ ಮಾಡಿಕೊಳ್ಳಲಿ. ರಸ್ತೆಗುಂಡಿಗಳಿಂದ ಕಳೆದ ಹತ್ತು ತಿಂಗಳಲ್ಲಿ 580 ಜನ ಸತ್ತಿದ್ದಾರೆ. ಇದಕ್ಕೆ ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿದ್ರಾ ಇವ್ರು ? ಸಿಎಂ ಮನೆ ಬ್ರೇಕ್ಫಾಸ್ಟ್ ಹಾಗೂ ಡಿಸಿಎಂ ಮನೆ ಬ್ರೇಕ್ಫಾಸ್ಟ್ ನಿಂದ ಒಟ್ಟು ಆರು ಗಂಟೆ ವ್ಯರ್ಥ. ಇದೇ ಸಮಯದಲ್ಲಿ ಅಧಿಕಾರಿಗಳ ಸಭೆ ಕರೆದು ರಸ್ತೆಗುಂಡಿ ಮುಚ್ಚಿಡಿದ್ದಿದ್ರೆ ಆಗ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಕ್ಕಜೋಳ ಖರೀದಿ ಕೇಂದ್ರ ತೆರೆಯಲು, ಕಬ್ಬಿಗೆ ಸೂಕ್ತ ದರ ಕೊಡಲು ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿದ್ದಾರಾ? ಇಲ್ಲ ತಮ್ಮಿಬ್ಬರ ಜಗಳಕ್ಕಾಗಿ ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಬ್ರೇಕ್ಫಾಸ್ಟ್ ಬಳಿಕ ಸಿಎಂ ಖುಷಿ ಖುಷಿಯಾಗಿದ್ರು, ಡಿಕೆಶಿ ಡಲ್ ಆಗಿದ್ರು. ನಾನು ಇಬ್ಬರ ಫೇಸ್ ರೀಡಿಂಗ್ ಮಾಡಿದೆ. ಈ ಸರ್ಕಾರ ರೈತರ, ಅಂಗನವಾಡಿ ಕಾರ್ಯಕರ್ತೆಯರ, ತೆರಿಗೆದಾರರು, ದಲಿತರು ಹೀಗೆ ಎಲ್ಲರ ವಿಶ್ವಾಸ ಕಳ್ಕೊಂಡಿದ್ದಾರೆ ಎಂದಿದ್ದಾರೆ.
ಅಧಿಕಾರಕ್ಕೆ ಕಿತ್ತಾಡ್ತಿದ್ದಾರೆ. ನಾನು ಸಿಎಂ ನಾನು ಸಿಎಂ ಅಂತ ಕಚ್ಚಾಡ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕೊಡದೇ ಓಡಿ ಹೋಗೋರು ಇವರು. ಈಗ ಕಾಂಗ್ರೆಸ್ ನಲ್ಲಿ ಅರ್ಧ ಸಿನಿಮಾ ಮುಗಿದಿದೆ. ಬಿಗ್ ಬಾಸ್ ನಲ್ಲಿ ಜಗಳ ಆಡಿದಂತೆ ಆಡ್ತಾರೆ. ಕರ್ನಾಟಕ ಕಾಂಗ್ರೆಸ್ ಸಹ ಒಂದು ರೀತಿಯಲ್ಲಿ ಬಿಗ್ಬಾಸ್ ಥರ. ಈ ಬಿಗ್ ಬಾಸ್ ನಡೆಸ್ತಿರೋರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ. ಕರ್ನಾಟಕದಲ್ಲಿ ಕಾಂಗ್ರೆಸ್ ನ ಬಿಗ್ ಬಾಸ್ ನಡೀತಿದೆ ಎಂದಿದ್ದಾರೆ.
Also Read: Karnataka new CM: ಡಿಕೆ ಶಿವಕುಮಾರ್ ಯಾವಾಗ ಸಿಎಂ ? ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ರಿಯಲ್ ಬಿಗ್ ಬಾಸ್ ಶೋ ನಡೀತಿದೆ.
ಪ್ರತೀ ದಿನ ಜಗಳ ಜಗಳ. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಅಂತ ಡಿಕೆಶಿ ಹೇಳ್ತಾರೆ. ವರ್ಡ್ ಇಸ್ ವರ್ಲ್ಡ್ ಅಂತಾರೆ. ಆದ್ರೆ ಸಿಎಂ ಜನ ಅಧಿಕಾರ ಕೊಟ್ಟಿದ್ದಾರೆ ನಾನೇ ಸಿಎಂ ಅಂತಿದ್ದಾರೆ. ಬಿಗ್ಬಾಸ್ ನಲ್ಲಿ ವೈಲ್ಡ್ ಕಾರ್ಡ್ ಬರುತ್ತೆ. ಇಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಗಾಗಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಕಾಯ್ತಿದ್ದಾರೆ. ರಾಜ್ಯದಲ್ಲಿ ರಿಯಲ್ ಬಿಗ್ ಬಾಸ್ ಶೋ ನಡೀತಿದೆ. ಈ ಸರ್ಕಾರ ಜನರ ನಂಬಿಕೆ, ವಿಶ್ವಾಸ ಕಳ್ಕೊಂಡಿದೆ. ಸರ್ಕಾರದ ವಿರುದ್ಧ ನಾವು ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾಟಿ ಕೋಳಿ ತಿನ್ನೋದಿಕ್ಕೆ ಮೂರು ಗಂಟೆ ವ್ಯರ್ಥ ಮಾಡೋ ಬದಲು ತುಂಗಭದ್ರ ಕ್ರಸ್ಟ್ ಗೇಟ್ ಮೀಟಿಂಗ್ ಮಾಡಬಹುದಿತ್ತು. ಸಾವಿರಾರು ರೈತರು ನೀರಿಗಾಗಿ ಕಾಯ್ತಿದ್ದಾರೆ. ಈಗ ಸಿಎಂ ಡಿಸಿಎಂ ಪರಸ್ಪರ ಬ್ರೇಕ್ಫಾಸ್ಟ್ ಆಯ್ತು. ಮುಂದೆ ಪರಮೇಶ್ವರ್, ಸತೀಶ್, ಜಮೀರ್ ಮನೆಗೆ ಬ್ರೇಕ್ಫಾಸ್ಟ್ ಗೆ ಹೋಗ್ತಾರೆ. ಈ ಸರ್ಕಾರ ಬ್ರೇಕ್ಫಾಸ್ಟ್ ನಲ್ಲೇ ಕಳದು ಹೋಗ್ತಿದೆ ಎಂದರು.
ಜನವಿರೋಧಿ, ರೈತ ವಿರೋಧಿ ಸರ್ಕಾರ ಇದು. ಸರ್ಕಾರದ ವಿರುದ್ಧ ಸದನದ ಹೊರಗೆ, ಒಳಗೆ ಹೋರಾಟ ಮಾಡ್ತೇವೆ. ಇವರ ಬ್ರೇಕ್ಫಾಸ್ಟ್ ಗಾಗಿ ರಾಜ್ಯದ ಜನರ ಅನ್ನ ಕಿತ್ಕೊತಿದ್ದಾರೆ. ಸಿಎಂ ಅವರು ದೆಹಲಿಗೆ ಬರುವಂತೆ ಆಹ್ವಾನ ಕೊಟ್ರು. ಸರ್ವಪಕ್ಷ ನಿಯೋಗ ಹೋಗೋಣ ಅಂದ್ರು. ನಾವು ಜೋಷಿಯವರ ಜತೆ ಚರ್ಚೆ ಮಾಡ್ತೇವೆ. ಚರ್ಚೆ ಮಾಡಿ ನಾವು ತಿಳಿಸ್ತೇವೆ ಎಂದಿದ್ದಾರೆ.
ಬುರುಡೆ ಗ್ಯಾಂಗ್ : ಕಾಂಗ್ರೆಸ್ ಕಾಪಿ
ಇನ್ನು ಬಿಜೆಪಿ ಬುರುಡೆ ಗ್ಯಾಂಗ್ ಎಂಬ ಸಿಎಂ ಹೇಳಿಕೆಗೆ ಅಶೋಕ್(R. Ashok) ಟಕ್ಕರ್ ಕೊಟ್ಟಿದ್ದಾರೆ. ನಾನು ಕಳೆದ ಅಧಿವೇಶನದಲ್ಲಿ ಕಾಂಗ್ರೆಸ್ ಬುರುಡೆ ಸರ್ಕಾರ ಅಂದಿದ್ದೆ. ಕಾಂಗ್ರೆಸ್ ನವ್ರು ಆಗ ದೊಡ್ಡ ಗಲಾಟೆ ಮಾಡಿದ್ರು. ಬಹುಶ; ಅದನ್ನೇ ಸಿಎಂ ಕಾಪಿ ಹೊಡೆದು ಹೇಳಿರಬೇಕು. ಧರ್ಮಸ್ಥಳದಲ್ಲಿ ಬುರುಡೆ ಗ್ಯಾಂಗ್ ತಂದವರು ಇವರೇ ತಾನೇ. ಬುರುಡೆ ಎಸ್ಐಟಿ ಮಾಡಿಸಿದ್ದೂ ಇವರೇ. 40% ಅಂತ ಸುಳ್ಳು ಹೇಳಿದ್ರು, ಕೋರ್ಟ್ ನಲ್ಲಿ ಅದು ಬಿದ್ದು ಹೋಯ್ತು. ಬುರುಡೆ ಬಿಟ್ಕೊಂಡು ಅಧಿಕಾರ ಹಿಡಿದವ್ರು ಇವರು. ನಮಗೆ ಆ ಮಾತು ಹೇಳೋಕ್ಕೆ ಇವರಿಗೆ ನೈತಿಕತೆ ಇಲ್ಲ ಎಂದಿದ್ದಾರೆ.
ಸಿಎಂ ಡಿಸಿಎಂ ನಾಟಿ ಕೋಳಿ ತಿಂತಿದ್ದಾರೆ. ಪರಮೇಶ್ವರ್ ಗೆ ನಾಟಿ ಕೋಳಿ ವಾಸನೆ ಸಹ ಸಿಕ್ತಿಲ್ಲ. ವೈಲ್ಡ್ ಕಾರ್ಡ್ ಎಂಟ್ರಿಗೆ ಕೆಲವರು ಕಾಯ್ತಿದ್ದಾರೆ. ಕಾಂಗ್ರೆಸ್ ಯಾವಾಗಲೂ ವೈಲ್ಡ್ ಎಂದರು.
ಬೆಂಗಳೂರು ಟ್ರಾಫಿಕ್ ಬಗ್ಗೆ ಎಸ್ಪಿ ಎಂಪಿ ರಾಜೀವ್ ರೈ ಅಸಮಧಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಯುಪಿಯ ಇಂಡಿ ಕೂಟಕ್ಕೆ ಹೇಳ್ತೀನಿ, ದಯವಿಟ್ಟು ನೀವು ರಾಜೀವ್ ರೈಗೆ ಸೆಕ್ಯೂರಿಟಿ ಕೊಡಲಿ. ಡಿಕೆಶಿ ಎಲ್ಲರಿಗೂ ಧಮಕಿ ಹಾಕ್ತಾರೆ. ಮೋಹನ್ ದಾಸ್ ಪೈ, ಕಿರಣ್ ಮುಂಜುಂದಾರ್ ಷಾ ಗೆ ಡಿಕೆಶಿ ಧಮಕಿ ಹಾಕಿದ್ದಾರೆ. ಈಗ ಎಸ್ಪಿ ಎಂಪಿ ರಾಜೀವ್ ರೈಗೂ ಡಿಕೆಶಿ ಧಮಕಿ ಹಾಕಬಹುದು ಎಂದಿದ್ದಾರೆ.
ಹಾಗಾಗಿ ಯಾವುದಕ್ಕೂ ರಾಜೀವ್ ರೈ ಸೆಕ್ಯುರಿಟಿ ತಗೊಳ್ಳೋದು ಒಳ್ಳೇದು. ಈ ಸರ್ಕಾರ ಬಿಗ್ ಬಾಸ್, ಇಡ್ಲಿ, ನಾಟಿಕೋಳಿ ಸಾಂಬಾರ್ ಇಷ್ಟು ಬಿಟ್ಟು ಮುಂದಕ್ಕೆ ಹೋಗ್ತಿಲ್ಲ. ಈ ಸರ್ಕಾರದಲ್ಲಿ ಗೋವು ಯಾರು, ಹುಲಿ ಯಾರು ಅಂತ ಅಧಿವೇಶನದಲ್ಲಿ ಕೇಳ್ತೀನಿ ಎಂದಿದ್ದಾರೆ.



