ಬ್ಯಾನರ್​ ಕಟ್ಟು ವಿಚಾರಕ್ಕೆ ಜಟಾಪಟಿ : ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರು ಗುಂಡೇಟಿಗೆ ಕಾಂಗ್ರೆಸ್​ ಕಾರ್ಯಕರ್ತ ಬಲಿ

ಬ್ಯಾನರ್​ ಕಟ್ಟುವ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿದ ಪರಿಣಾಮ ಓರ್ವ ಕಾಂಗ್ರೆಸ್​ ಕಾರ್ಯಕರ್ತ ಸಾವನ್ನಪ್ಪಿದ ಆಘಾತಕಾರಿ ಘಟನೆಯು ಬಳ್ಳಾರಿಯಲ್ಲಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರಲ್ಲೇ ಸಂಭವಿಸಿದೆ.
ನಾಳೆ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಬಳ್ಳಾರಿಯಾದ್ಯಂತ ಬ್ಯಾನರ್​ ಅಂಟಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಅವಂಬಾವಿಯಲ್ಲಿರುವ ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರು ಬ್ಯಾನರ್​ ಅಳವಡಿಕೆಗೆ ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಶಾಸಕ ಭರತ್​ ರೆಡ್ಡಿ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಫೈರಿಂಗ್​ ನಡೆದಿದ್ದು ಕಾಂಗ್ರೆಸ್​ ಕಾರ್ಯಕರ್ತರ ರಾಜಶೇಖರ್​ ಎಂಬವರು ಬಲಿಯಾಗಿದ್ದಾರೆ.

ಶಾಸಕ ಭರತ್​ ರೆಡ್ಡಿ ಬೆಂಬಲಿಗರು ಬ್ಯಾನರ್​ ಕಟ್ಟುವುದನ್ನು ಜನಾರ್ದನ ರೆಡ್ಡಿ ಬೆಂಬಲಿಗರು ವಿರೋಧಿಸಿದ್ದರು. ಬ್ಯಾನರ್​ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಲಾಗುತ್ತಿತ್ತು. ಸ್ಥಳಕ್ಕೆ ಶ್ರೀರಾಮುಲು ಕೂಡ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿದ್ದರು. ಈ ಹೊತ್ತಿಗಾಗಲೇ ಭರತ್​ ರೆಡ್ಡಿ ಆಪ್ತ ಸತೀಶ್​ ರೆಡ್ಡಿ ಖಾಸಗಿ ಗನ್​ಮ್ಯಾನ್​ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ಆರಂಭಿಸಿದ್ದರು. ಭರತ್​ ರೆಡ್ಡಿ ಇನ್ನೇನು ಸ್ಥಳಕ್ಕೆ ಧಾವಿಸುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಜನಾರ್ಧನ ರೆಡ್ಡಿ ಬೆಂಬಲಿಗರು ಕೈಯಲ್ಲಿ ದೊಣ್ಣೆ ಹಿಡಿದು ಕಾಯುತ್ತಿದ್ದರು.

ಇದನ್ನೂ ಓದಿ: ರಾಹುಲ್‌ ಗಾಂಧಿ ಸ್ವತಃ ಶ್ರೀರಾಮನಿದ್ದಂತೆ! ಕಾಂಗ್ರೆಸ್‌ ನಾಯಕನಿಂದ ಹೊಸ ವಿವಾದ

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಆದರೂ ಪರಿಸ್ಥಿತಿ ಹತೋಟಿಗೆ ಬರುವ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಗುಂಡು ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್​ ಎಂಬವರಿಗೆ ತಗುಲಿದ್ದು ಅವರು ಮೃತಪಟ್ಟಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories