ಗುಡ್ ನ್ಯೂಸ್: ನಾಳೆ, ನಾಡಿದ್ದು ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳು ಓಪನ್! ಕಂದಾಯ ಇಲಾಖೆ ಮಹತ್ವದ ಆದೇಶ
ಮಾರ್ಚ್ ತಿಂಗಳ ಅಂತ್ಯವಾಗುತ್ತಿರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಈ ವಾರಾಂತ್ಯದ ರಜಾ ದಿನಗಳಲ್ಲೂ ಉಪ ನೋಂದಣಿ ಕಚೇರಿಗಳನ್ನು ತೆರೆಯಲು ಕಂದಾಯ ಇಲಾಖೆ ನಿರ್ಧಾರ ಕೈಗೊಂಡಿದೆ.
ಬೆಂಗಳೂರು: ಆಸ್ತಿ ನೋಂದಣಿ ಮಾಡುವವರಿಗೆ ಹಾಗೂ ಸಬ್ ರಿಜಿಸ್ಟ್ರಾರ್ (sub registrar office) ಕಚೇರಿಯ ಕೆಲಸ ಬಾಕಿ ಉಳಿಸಿಕೊಂಡವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ಮಾರ್ಚ್ ತಿಂಗಳ ಅಂತ್ಯವಾಗುತ್ತಿರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಈ ವಾರಾಂತ್ಯದ ರಜಾ ದಿನಗಳಲ್ಲೂ ಉಪ ನೋಂದಣಿ ಕಚೇರಿಗಳನ್ನು ತೆರೆಯಲು ಕಂದಾಯ ಇಲಾಖೆ ನಿರ್ಧಾರ ಕೈಗೊಂಡಿದೆ.
ಶನಿವಾರ, ರವಿವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್!
ರಾಜ್ಯ ಸರ್ಕಾರ ಹೊರಡಿಸಿರುವ ನೂತನ ಅಧಿಸೂಚನೆಯ ಅನ್ವಯ ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳು ಇದೇ ಶನಿವಾರ ಹಾಗೂ ಭಾನುವಾರ ಕಾರ್ಯನಿರ್ವಹಿಸಲಿವೆ. ಮಾರ್ಚ್ 28 ಹಾಗೂ 29ರ ದಿನವನ್ನು ರಾಜ್ಯ ಸರ್ಕಾರ ಕರ್ತವ್ಯ ನಿರ್ವಹಿಸುವ ದಿನ ಎಂದು ಘೋಷಿಸಿ ಆದೇಶ ಹೊರಡಿಸಿದೆ.
ಸರ್ಕಾರದಿಂದ ಏಕೆ ಈ ನಿರ್ಧಾರ ?
ಮಾರ್ಚ್ ತಿಂಗಳು ಆರ್ಥಿಕ ವರ್ಷದ ಕೊನೆಯಾಗಿರುವ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಳು ಹೆಚ್ಚಿರುತ್ತವೆ.ಹೀಗಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು ಮತ್ತು ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು ಎಂಬ ಉದ್ದೇಶದಿಂದ ಕರ್ನಾಟಕ ನೋಂದಣಿ ನಿಯಮಗಳು, 1965ರ ಅನ್ವಯ ಈ ತಿದ್ದುಪಡಿ ತಂದಿದೆ.
ರಾಜ್ಯ ಸರ್ಕಾರವು ಇಂದು ಈ ಆದೇಶವನ್ನು ಹೊರಡಿಸಿದ್ದು, ಇದರ ಪ್ರಕಾರ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಉಪನೋಂದಣಾಧಿಕಾರಿಗಳು ವಾರಾಂತ್ಯದಲ್ಲಿ ಸೇವೆಗೆ ಲಭ್ಯ ಇರಲಿದ್ದಾರೆ. ಸಾರ್ವಜನಿಕರು ವಾರಾಂತ್ಯದಲ್ಲಿಯೂ ನೋಂದಣಿ ಕೆಲಸಗಳನ್ನು ಪೂರೈಸಿಕೊಳ್ಳಬಹುದಾಗಿದೆ.



