ಕರೆಂಟ್ ಕಟ್‌ಗೆ ರೈತನ ಆಕ್ರೋಶ: ವಿದ್ಯುತ್ ಇಲಾಖೆ ಕಚೇರಿಗೆ ಬೆಂಕಿ, ಸಿಬ್ಬಂದಿ ಮೇಲೆ ಹಲ್ಲೆ

ದೀರ್ಘಕಾಲದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಸಂಪರ್ಕ ಕಡಿತಗೊಳಿಸಿದ ಇಲಾಖೆಯ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ ಕಚೇರಿಗೇ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆಯೊಂದು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ಸಂಭವಿಸಿದೆ.

ದೀರ್ಘಕಾಲದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಸಂಪರ್ಕ ಕಡಿತಗೊಳಿಸಿದ ಇಲಾಖೆಯ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ ಕಚೇರಿಗೇ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆಯೊಂದು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ಸಂಭವಿಸಿದೆ. ಈ ಅನಿರೀಕ್ಷಿತ ದಾಳಿಯಿಂದಾಗಿ ಇಲಾಖೆಯ ಪ್ರಮುಖ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ಹಳ್ಳಿಹೊಸೂರು ಗ್ರಾಮದ ನಿವಾಸಿಯಾದ ಶಿವಪ್ಪ ಬಸನಗೌಡ ಗಡಿಗಿ ಎಂಬ ರೈತ ಕಳೆದ ಹಲವು ತಿಂಗಳುಗಳಿಂದ ಸುಮಾರು ಹನ್ನೊಂದು ಸಾವಿರ ರೂಪಾಯಿಗಳ ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ. ಈ ಸಂಬಂಧ ನಿಯಮಾನುಸಾರ ಹಣ ಪಾವತಿಸುವಂತೆ ಜೆಸ್ಕಾಂ ಅಧಿಕಾರಿಗಳು ರೈತನಿಗೆ ಹಲವು ಬಾರಿ ಲಿಖಿತ ನೋಟಿಸ್‌ಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬುಧವಾರ ಮೇಲಧಿಕಾರಿಗಳ ಅಧಿಕೃತ ಆದೇಶದ ಮೇರೆಗೆ ಜೆಸ್ಕಾಂ ಸಿಬ್ಬಂದಿಯಾದ ರಿಚರ್ಡ್ ಅವರು ಶಿವಪ್ಪನ ಜಮೀನಿನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು.

ಇದರಿಂದ ತೀವ್ರವಾಗಿ ಕೆರಳಿದ ರೈತ ಶಿವಪ್ಪ, ಬುಧವಾರ ಮಧ್ಯಾಹ್ನ ಮಲ್ಲಟ ಗ್ರಾಮದಲ್ಲಿರುವ ಜೆಸ್ಕಾಂ ಉಪ ಕಚೇರಿಗೆ ನೇರವಾಗಿ ನುಗ್ಗಿದ್ದಾನೆ. ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಂದಿಗೆ ತಗಾದೆ ತೆಗೆದು, ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಪ್ರಾಣಭಯದಿಂದ ಸಿಬ್ಬಂದಿ ಕಚೇರಿಯಿಂದ ಹೊರಗೆ ಓಡಿ ಬರುತ್ತಿದ್ದಂತೆ, ಶಿವಪ್ಪ ತಾನು ತಂದಿದ್ದ ಪೆಟ್ರೋಲನ್ನು ಇಡೀ ಕಚೇರಿಯಾದ್ಯಂತ ಸುರಿದು ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾನೆ.

Also Read: ಕರ್ನಾಟಕದಲ್ಲಿ ಮತ್ತೆ ಬೈಕ್ ಆ್ಯಂಬುಲೆನ್ಸ್ ಸೇವೆ: ಆರೋಗ್ಯ ಇಲಾಖೆಯ ಮಹತ್ವದ ಆದೇಶ

ಬೆಂಕಿಯ ತೀವ್ರತೆಗೆ ಕಚೇರಿಯಲ್ಲಿದ್ದ ಸರ್ಕಾರಿ ಕಡತಗಳು, ಹೊಸ ಲ್ಯಾಪ್‌ಟಾಪ್, ಬ್ಯಾಟರಿ ವ್ಯವಸ್ಥೆ ಹಾಗೂ ನಗದು ಸೇರಿದಂತೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಸಿಬ್ಬಂದಿ ಸಕಾಲದಲ್ಲಿ ಹೊರಬಂದಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮಾಹಿತಿ ಪಡೆದ ಸಿರವಾರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿ ರೈತನನ್ನು ವಶಕ್ಕೆ ಪಡೆದಿದ್ದು, ಸಾರ್ವಜನಿಕ ಆಸ್ತಿ ಧ್ವಂಸ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

Farmers anger over power cut Electricity Department office set on fire staff attacked

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories