ರಾಜ್ಯದಲ್ಲಿ ಈ ಬಾರಿ ಮಾವಿನ ಮರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೂವು ಬಂದಿರುವುದರಿಂದ ಭಾರೀ ಪ್ರಮಾಣದಲ್ಲಿ ಮಾವಿನ ಇಳುವರಿ ಬರಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ ಇದೀಗ ಚಳಿ ಸಮಸ್ಯೆ ಎದುರಾಗಿದ್ದು ರಾಶಿ ರಾಶಿ ಹೂವುಗಳು ಉದುರಿ ಹೋಗುತ್ತಿದೆ. ಇದರಿಂದ ದೊಡ್ಡ ಮಟ್ಟದ ಸಂಕಷ್ಟದಲ್ಲಿ ಮಾವು ಬೆಳೆಗಾರರು ಸಿಲುಕಿದ್ದಾರೆ.
ರಾಜ್ಯದಲ್ಲಿ ಅತೀ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳಾದ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರದಲ್ಲಿ ಈ ಸಂಕಷ್ಟ ಹೆಚ್ಚಾಗಿ ಎದುರಾಗಿದೆ.
ಶೀತಗಾಳಿಯಿಂದಾಗಿ ಮಾವಿನ ಹೂವು ಉದುರುತ್ತಿದ್ದು, ಫಸಲಿನ ಮೇಲೆ ಪರಿಣಾಮ ಉಂಟಾಗುವ ಅಪಾಯ ಹೆಚ್ಚಾಗಿದೆ. ಹೂವು ಮಿಡಿಗಟ್ಟಲು ಹದವಾದ ವಾತಾವರಣ ಬೇಕು, ಅನೇಕ ಜಿಲ್ಲೆಗಳಲ್ಲಿರಾತ್ರಿ ವೇಳೆ ಕನಿಷ್ಠ ತಾಪಮಾನ 10 ರಿಂದ 15 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಹಗಲಿನಲ್ಲಿ ಬಿಸಿಲಿದ್ದರೂ ಶೀತಗಾಳಿ ಬೀಸುತ್ತಿದ್ದು ಫಸಲು ನಷ್ಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಅಕ್ಕಿ ಉತ್ಪಾದನೆಯಲ್ಲಿ ಪ್ರಪ್ರಥಮ ಬಾರಿಗೆ ಚೀನಾ ಹಿಂದಿಕ್ಕಿದ ಭಾರತ : ವಿಶ್ವಕ್ಕೆ ನಾವೇ ನಂ.1
ಮಾವಿನ ಹೂವಿನ ರಕ್ಷಣೆಗೆ ಯಾವುದೇ ಕೀಟನಾಶಕ ಪ್ರಯೋಗಿಸುವಂತಿಲ್ಲ. ಇದರಿಂದ ಪರಾಗಸ್ಪರ್ಶ ಮಾಡಲು ಸಹಕರಿಸುವ ಜೇನು ಸೇರಿದಂತೆ ಇತರೆ ಉಪಯುಕ್ತ ಕೀಟಗಳಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಈ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬುದಕ್ಕೆ ತೋಟಗಾರಿಕಾ ಇಲಾಖೆಯ ಬಳಿಯೂ ಉತ್ತರವಿಲ್ಲ ಎಂದು ಮಾವು ಬೆಳೆಗಾರರು ಅಸಮಾಧಾನ ಹೊರ ಹಾಕಿದ್ದಾರೆ.


