ಕರ್ನಾಟಕದ ಪಾಲಿಗೆ ಕರಾಳ ಶನಿವಾರ : ಒಂದೇ ದಿನ 36 ಮಂದಿಗೆ ಕೊರೊನಾ, ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ
ಬೆಂಗಳೂರು : ನಿಜಕ್ಕೂ ಕರ್ನಾಟಕದ ಪಾಲಿಗೆ ಇಂದು ಕರಾಳ ಶನಿವಾರ. ಒಂದು ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 36 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆ ಬಾರೀ ಏರಿಕೆಯಾಗಿದೆ. ಇಂದು 11 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಂತೆಯೇ ಇಂದೂ ಕೂಡ ಭಟ್ಕಳದಲ್ಲಿ 7 ಮಂದಿಗೆ ಕೊರೊನಾ ಸೋಂಕು ವ್ಯಾಪಿಸಿದೆ.
ಬೆಣ್ಣೆ ನಗರಿ ದಾವಣಗೆರೆ ಕೂಡ ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಇಂದೂ ಕೂಡ ಹೊಸದಾಗಿ 06 ಪ್ರಕರಣಗಳು ಪತ್ತೆಯಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಸಬಾದಲ್ಲಿ ಇಂದೂ ಮತ್ತೆ ಮೂವರಿಗೆ ಕೊರೊನಾ ಸೋಂಕು ವ್ಯಾಪಿಸಿದೆ. ಮಾತ್ರವಲ್ಲ ಬೀದರ್ ಹಾಗೂ ಚಿತ್ರದುರ್ಗದಲ್ಲಿಯೂ ಮತ್ತೆ ಮೂವರಿಗೆ ಸೋಂಕು ವ್ಯಾಪಿಸಿದ್ರೆ, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿವೆ.
ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಬರೋಬ್ಬರಿ 789ಕ್ಕೆ ಏರಿಕೆಯಾಗಿದೆ. ಈಗಾಗಲೇ ಕೊರೊನಾ ಮಹಾಮಾರಿ 30 ಮಂದಿಯನ್ನು ಬಲಿಪಡೆದಿದೆ. ಸಂಜೆಯ ವೇಳೆಗೆ ಇನ್ನಷ್ಟು ವರದಿಗಳು ಬರಬೇಕಿದ್ದು, ರಾಜ್ಯದ ಜನರ ನಿದ್ದೆಗೆಡಿಸಿದೆ. ನಿನ್ನೆ 48 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇಂದು ಮತ್ತೆ 36 ಮಂದಿಗೆ ಕೊರೊನಾ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.