ಕೊನೆಗೂ ಸುಖಾಂತ್ಯವಾಯ್ತು ಸಂಪುಟ ಸರ್ಕಸ್….! ಸಂಕ್ರಾಂತಿಗೂ ಮುನ್ನವೇ ಸಚಿವಸ್ಥಾನಾಕಾಂಕ್ಷಿಗಳ ಬಾಯಿ ಸಿಹಿ…!!

ಗಣೇಶನ ಮದುವೆಯ ಹಾಗೇ ಇಂದಲ್ಲ ನಾಳೆ ಅಂತ ಮುಂದೂಡಿಕೆಯಾಗುತ್ತಲೇ ಇದ್ದ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು ಸಂಕ್ರಾಂತಿ ಗೂ ಮುನ್ನವೇ ಸಚಿವ ಸ್ಥಾನಾಕಾಂಕ್ಷಿಗಳ ಬಾಯಿಗೆ ಬೆಲ್ಲ ಬಿದ್ದಿದೆ.

ದೆಹಲಿಯಿಂದ ಹಿಂತಿರುಗಿದ ಸಿಎಂ ಬಿಎಸ್ವೈ ನೀಡಿದ ಮಾಹಿತಿ ಅನ್ವಯ ಜನವರಿ 13 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಅಂದು ಮಧ್ಯಾಹ್ನ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎನ್ನಲಾಗಿದೆ.

ಸದ್ಯ 7 ಶಾಸಕರಿಗೆ ಸಚಿವ ಸ್ಥಾನ ನೀಡೋದಿಕ್ಕೆ ಬಿಜೆಪಿ ಹೈಕಮಾಂಡ್ ಅಸ್ತು ಎಂದಿದ್ದು ಸಚಿವ ಸ್ಥಾನದ ನೀರಿಕ್ಷೆಯಲ್ಲಿದ್ದ ಶಾಸಕರಿಗೆ ಸಂಕ್ರಾಂತಿ ಸಿಹಿ ದುಪ್ಪಟ್ಟಾಗಿದೆ.


ಹೈಕಮಾಂಡ್ ಒಪ್ಪಿಗೆ ಮೇರೆಗೆ 7 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಬಿಎಸ್ವೈ ಮಾಹಿತಿ ನೀಡಿದ್ದು, ಯಾವೆಲ್ಲ ಶಾಸಕರಿಗೆ ಸಚಿವ ಸ್ಥಾನದ ಅದೃಷ್ಟ ಖುಲಾಯಿಸಿದೆ ಎಂಬ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಹೀಗಾಗಿ ಈ ಸಿಎಂ ಬಿಎಸ್ವೈ ನಿವಾಸ ಸಚಿವ ಸ್ಥಾನ ಆಕಾಂಕ್ಷಿಗಳಿಂದ ತುಂಬಿಕೊಳ್ಳಲಾರಂಭಿಸಿದ್ದು ಮೂಲಗಳ ಪ್ರಕಾರ, ಎಂಟಿಬಿ,ರೇಣುಕಾಚಾರ್ಯ,ಉಮೇಶ್ ಕತ್ತಿ ಸೇರಿದಂತೆ 12 ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನಕ್ಕಾಗಿ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸಂಪುಟ ವಿಸ್ತರಣೆ ಪ್ರಹಸನ ಸುಖಾಂತ್ಯಗೊಳ್ಳುತ್ತಾ?? ಅಥವಾ ಕಾದು ಕಾದು ಮಾಡಿದ ಸಂಪುಟ ವಿಸ್ತರಣೆಯೇ ಅಸಮಧಾನದ ಬೆಂಕಿ‌ಹೊತ್ತಿಸಿ ಸರ್ಕಾರಕ್ಕೆ ಬಿಸಿತುಪ್ಪವಾಗುತ್ತಾ ಕಾದು ನೋಡಬೇಕಿದೆ.

Comments are closed.