ನಟಿ ರಶ್ಮಿಕಾ, ಶ್ರೀಲೀಲಾ ಹಾದಿ ಹಿಡಿದ ಪ್ರಶಾಂತ್‌ ನೀಲ್‌ : ಬೇಸರ ವ್ಯಕ್ತಪಡಿಸಿದ ನೆಟ್ಟಿಗರು

ಸ್ಯಾಂಡಲ್‌ವುಡ್‌ನ “ಕೆಜಿಎಫ್‌” ಸರಣಿ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ (KGF Director Prashanth Neel) ಹೊಸ ಸೆನ್ಸೇಷನ್‌ನ್ನು ಕ್ರಿಯೇಟ್ ಮಾಡಿದ್ದಾರೆ. ಕೆಜಿಎಫ್‌ ಚಾಪ್ಟರ್‌- 2 ರಿಲೀಸ್‌ಗೂ ಮೊದಲೇ ನಟ ಪ್ರಭಾಸ್ ಕಾಂಬಿನೇಷನ್‌ನಲ್ಲಿ ‘ಸಲಾರ್’ ಸಿನಿಮಾ ಘೋಷಣೆ ಆಗಿತ್ತು. ಅದರ ಬೆನ್ನಲ್ಲೇ ಜ್ಯೂ. ಎನ್‌ಟಿಆರ್ ಜೊತೆ ಮತ್ತೊಂದು ಸಿನಿಮಾ ಕನ್ಫರ್ಮ್ ಆಯಿತು. ಎರಡು ಸಿನಿಮಾಗಳ ನಂತರ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್ ಸ್ಯಾಂಡಲ್‌ವುಡ್‌ಗೆ ವಾಪಸ್ ಬರುತ್ತಾರೆ ಎಂದುಕೊಂಡವರಿಗೆ ಮತ್ತೆ ನಿರಾಸೆ ಎದುರಾಗಿದೆ. ತೆಲುಗು ನಿರ್ಮಾಪಕ ನಿರ್ಮಾಪಕ ದಿಲ್ ರಾಜು ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ ಮತ್ತೊಂದು ಅದ್ಧೂರಿ ಸಿನಿಮಾ ಪ್ಲ್ಯಾನ್ ಮಾಡಿರುವುದಾಗಿ ಹೇಳಿದ್ದಾರೆ. ಈ ಸುದ್ದಿ ಕನ್ನಡ ಸಿನಿರಸಿಕರಿಗೆ ಬೇಸರ ಮೂಡಸುವಂತೆ ಮಾಡಿದೆ.

“ಸಲಾರ್'” ಸಿನಿಮಾ ಘೋಷಣೆ ಆದಾಗಲೇ ಇಂತಾದೊಂದು ಚರ್ಚೆ ನಡೆದಿತ್ತು. ಹೊಂಬಾಳೆಯಂತಹ ಸಂಸ್ಥೆ, ಪ್ರಶಾಂತ್ ನೀಲ್‌ರಂತಹ ನಿರ್ದೇಶಕರು ಕನ್ನಡದಲ್ಲೇ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಬಹುದಿತ್ತು. ನಮ್ಮಲ್ಲಿ ಕಲಾವಿದರು ಇರಲಿಲ್ಲವೇ? ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇರುವಾಗ ನಮ್ಮ ಸಿನಿಮಾಗಳು ಕೂಡ ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತದೆ. ಪರಭಾಷಾ ಸ್ಟಾರ್ ನಟರೇ ಯಾಕೆ ಬೇಕು? ನಿಮಗೆ ಎಂದು ಕೇಳಿದ್ದರು.

ದಿಲ್ ರಾಜು ನಿರ್ಮಾಣದಲ್ಲಿ ಪ್ರಭಾಸ್- ಪ್ರಶಾಂತ್ ನೀಲ್ ಸಿನಿಮಾ ಮಾಡ್ತಾರೆ ಎನ್ನುವ ಪ್ರಶ್ನೆ ಕೆಲವರಿಗೆ ಅಚ್ಚರಿ ಮೂಡಿಸಿದೆ. ಯಾಕಂದ್ರೆ ಸದ್ಯ ಇದೇ ಕಾಂಬಿನೇಷನ್‌ನಲ್ಲಿ ‘ಸಲಾರ್’ ಸಿನಿಮಾ ಸಿದ್ಧವಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಸಿನಿಮಾನಾ? ಎಂದು ಕೇಳುತ್ತಿದ್ದಾರೆ. ಇನ್ನು ದಿಲ್ ರಾಜು ಹೇಳಿರುವ ಪ್ರಕಾರ ಇದೊಂದು ಪೌರಾಣಿಕ ಕಥಾಹಂದರದ ಸಿನಿಮಾ ಆಗಿದ್ದು, ‘ರವಣಂ’ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣ ಆಗಲಿದೆ.

“ಸಲಾರ್‌” ಹಾಗೂ ‘NTR31’ ಸಿನಿಮಾಗಳ ನಂತರ ಪ್ರಶಾಂತ್ ನೀಲ್ ಮತ್ತೆ ಕನ್ನಡಕ್ಕೆ ವಾಪಸು ಆಗುತ್ತಾರೆ, ‘ಕೆಜಿಎಫ್ – 3’ ಸಿನಿಮಾ ಮಾಡ್ತಾರೆ ಎನ್ನುವ ಲೆಕ್ಕಾಚಾರದಲ್ಲಿ ಕೆಲವರು ಇದ್ದರು. ಆದರೆ ಪ್ರಶಾಂತ್ ನೀಲ್ ಹೀಗೆ ಪದೇ ಪದೇ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿರುವುದು ಬೇಸರ ಮೂಡಿಸಿದೆ. ಅಸಲಿಗೆ ‘ಕೆಜಿಎಫ್’ ಸರಣಿಯ ಮತ್ತೊಂದು ಸಿನಿಮಾ ಬರುತ್ತಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಯಾಕೆಂದರೆ ರಾಕಿ ಭಾಯ್ ಕಥೆಯನ್ನು ನೀಲ್ ಭಾಯ್ ಮುಂದುವರೆಸಬೇಕಿದೆ. ‘ಕೆಜಿಎಫ್‌’ ಸರಣಿ ಮುಂದುವರೆಯುತ್ತದೆ ಎಂದು ಈಗಾಗಲೇ ವಿಜಯ್ ಕಿರಗಂದೂರ್ ಹೇಳಿದ್ದಾರೆ. ಆದರೆ ಯಾವಾಗ? ಎನ್ನುವ ಪ್ರಶ್ನೆ ಈಗ ಶುರುವಾಗಿದೆ.

ಪ್ರಶಾಂತ್ ನೀಲ್ ಮತ್ತೆ ಪ್ರಭಾಸ್ ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕೆಲವರನ್ನು ಕೆರಳಿಸಿದೆ. ‘ರಶ್ಮಿಕಾ ಹಾಗೂ ಶ್ರೀಲೀಲಾ ಸಾಲಿಗೆ ಪ್ರಶಾಂತ್ ನೀಲ್ ಸೇರುತ್ತಾರೆ. ಕನ್ನಡ ಸಿನಿಮಾ ಮಾಡಿ ನೇಮು, ಫೇಮು ಸಿಕ್ಕಿದ ಮೇಲೆ ನಡೆದುಬಂದ ಹಾದಿಯನ್ನೇ ಮರೆತು ಬಿಡುತ್ತಾರೆ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ‘ರಾಜಮೌಳಿ ಅವರನ್ನು ನೋಡಿ ಕಲಿಯಿರಿ. ರಾಜಮೌಳಿ ಮನಸ್ಸು ಮಾಡಿದ್ದರೆ ಬಾಲಿವುಡ್‌ಗೆ ಹೋಗಬಹುದಿತ್ತು. ಆದರೆ ಅವರು ಆ ರೀತಿ ಮಾಡಲಿಲ್ಲ. ತೆಲುಗು ಸಿನಿಮಾಗಳನ್ನೇ ಗೋಲ್ಡನ್ ಗ್ಲೋಬ್ ವೇದಿಕೆವರೆಗೂ ಕೊಂಡೊಯ್ದಿದ್ದಾರೆ. ‘ಆರ್‌ಆರ್‌ಅರ್’ ಬಾಲಿವುಡ್ ಸಿನಿಮಾ ಅಲ್ಲ, ಸೌತ್ ಸಿನಿಮಾ, ತೆಲುಗು ಎಂದು ಸಾರಿ ಹೇಳಿದ್ದಾರೆ’ ಎನ್ನುತ್ತಿದ್ದಾರೆ. ‌

ಇದನ್ನೂ ಓದಿ : ಶಿವಮೊಗ್ಗ ಶಿಲ್ಪಿ ಕೈಯಲ್ಲಿ ಅರಳಿದ ಅಪ್ಪು ಪ್ರತಿಮೆ : ಗಣಿನಾಡಿನಲ್ಲಿ ಲೋಕಾರ್ಪಣೆ

ಇದನ್ನೂ ಓದಿ : “ಐ ವಾಂಟ್‌ ಟು ಗೋ ಬ್ಯಾಕ್‌” ಅಂದಿದ್ಯಾಕೆ ನಟಿ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : ತಮಿಳು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ

ಮುರಳಿ ಜೊತೆ ಸಿನಿಮಾ ಮಾಡ್ತೀನಿ ಕೆಲವರು ಪ್ರಶಾಂತ್ ನೀಲ್ ಬೆಂಬಲಕ್ಕೆ ನಿಂತಿದ್ದಾರೆ. ಕಲಾವಿದರಿಗೆ ತಂತ್ರಜ್ಞರಿಗೆ ಭಾಷೆಯ ಗಡಿ ಇಲ್ಲ. ಪರಭಾಷಾ ಫಿಲ್ಮ್ ಮೇಕರ್ಸ್ ಕೂಡ ಕನ್ನಡಕ್ಕೆ ಬಂದು ಸಿನಿಮಾ ಮಾಡಿದ್ದಾರೆ. ನೀಲ್ ಹೋಗುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಇದೇ ಪ್ರಶ್ನೆಗೆ ನೀಲ್ ಉತ್ತರಿಸಿದ್ದರು. ‘ನಾನು ಕನ್ನಡಿಗ. ಎಲ್ಲೇ ಹೋದರು ನಾನು ಕನ್ನಡಿಗ. ನಾನು ಮತ್ತೆ ಬಂದು ಕನ್ನಡ ಸಿನಿಮಾಗಳನ್ನು ಮಾಡ್ತೀನಿ. ನಾನು ನನ್ನ ಜೀವನ ಕಟ್ಟಿಕೊಳ್ಳಬೇಕು, ಇದು ಮುಂದುವರೆಯಬೇಕು. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲು ಸಾಧ್ಯ ಆದರೆ ಕನ್ನಡಕ್ಕೆ ಬರ್ತೀನಿ. ಶ್ರೀಮುರಳಿ ಜೊತೆ ಸಿನಿಮಾ ಮಾಡಬೇಕು’ ಎಂದು ಹೇಳಿದ್ದರು.

KGF Director Prashanth Neel : Actress Rashmika, Prashant Neel who went the Srileela route: netizens expressed their sadness

Comments are closed.