ಮನೆ ನಿರ್ಮಾಣದ ಸಂದರ್ಭದಲ್ಲಿ ದೊರೆತ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ರಿತ್ತಿ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಇನಾಮು ಹಸ್ತಾಂತರಿಸಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ರಿತ್ತಿ ಕುಟುಂಬಸ್ಥರನ್ನು ಸನ್ಮಾನಿಸಿ ಬಹುಮಾನ ನೀಡಿದ್ದಾರೆ. ಗದಗದ ಕೆ.ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ರಿತ್ತಿ ಕುಟುಂಬಸ್ಥರನ್ನು ಸಚಿವ ಎಚ್. ಕೆ ಪಾಟೀಲ್ ಸನ್ಮಾನಿಸಿದ್ದಾರೆ.
ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 30*40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ನಗದು ಸಹಾಯ ಹಾಗೂ ಪ್ರಜ್ವಲ್ ತಾಯಿ ಕಸ್ತೂರೆವ್ವ ರಿತ್ತಿಗೆ ಹೊರಗುತ್ತಿಗೆ ಆಧಾರದ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ಹೆಚ್.ಕೆ ಪಾಟೀಲ್ ಘೋಷಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಶುಭ ಸುದ್ದಿ; ಅಟಲ್ ಪಿಂಚಣಿ ಯೋಜನೆ 2030-31ರವರೆಗೆ ವಿಸ್ತರಣೆ
ಅಲ್ಲದೇ ಇದೇ ಸಂದರ್ಭದಲ್ಲಿ ಎಚ್.ಕೆ ಪಾಟೀಲ ರಿತ್ತಿ ಕುಟುಂಬಕ್ಕೆ ನಿವೇಶನ ಪ್ರಮಾಣ ಪತ್ರ ಹಾಗೂ ಕಸ್ತೂರೆವ್ವ ರಿತ್ತಿ ಅವರಿಗೆ ಉದ್ಯೋಗ ಭರವಸೆ ಪ್ರಮಾಣ ಪತ್ರ ವಿತರಣೆ ಮಾಡಿದ್ದಾರೆ. ಜನವರಿ 10ರಂದು ಈ ಕುಟುಂಬಕ್ಕೆ 466 ಗ್ರಾಂ ಬಂಗಾರದ ನಿಧಿ ದೊರಕಿತ್ತು. ಪ್ರಾಮಾಣಿಕತೆಯಿಂದ ರಿತ್ತಿ ಕುಟುಂಬಸ್ಥರು ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಇದಾದ ಬಳಿಕ ಸಂಪೂರ್ಣ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದ್ದು ಅನೇಕ ಐತಿಹಾಸಿಕ ಅವಶೇಷಗಳು ದೊರಕುತ್ತಲೇ ಇವೆ.

