ಆಸ್ಸಾಂ, ಕೇರಳ ರಾಜ್ಯಕ್ಕೆ ಹಿರಿಯ ಚುನಾವಣೆ ವೀಕ್ಷಕರ ನೇಮಕ : ಡಿ.ಕೆ ಶಿವಕುಮಾರ್, ಕೆ.ಜೆ ಜಾರ್ಜ್ಗೆ ಸ್ಥಾನ

DK Shivakumar : ಬೆಂಗಳೂರು : ದೇಶದಲ್ಲಿ ಒಂದೊಂದಾಗಿಯೇ ರಾಜ್ಯಗಳ ಅಧಿಕಾರವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲು ನಿರ್ಧರಿಸಿದೆ.
ಸಂಪೂರ್ಣ ಭಾರತ ಕೇಸರಿಮಯವಾಗುವುದನ್ನು ತಪ್ಪಿಸಬೇಕು ಎಂಬ ಉದ್ದೇಶ ಹೊಂದಿರುವ ಕಾಂಗ್ರೆಸ್ ಪಕ್ಷವು ಸದ್ಯ ಬರಲಿರುವ ಆಸ್ಸಾಂ, ಕೇರಳ, ತಮಿಳುನಾಡು , ಪಾಂಡಿಚೇರಿ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಶತಾಯಗತಾಯ ಗೆಲ್ಲುವ ಪಣ ತೊಟ್ಟಿದೆ.
ರಾಜ್ಯದಲ್ಲಿ ಯಶಸ್ವಿ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಣೆ ಹಾಕಿರುವ ಎಐಸಿಸಿ ವರಿಷ್ಠರು ಬೇರೆ ರಾಜ್ಯದ ವಿಧಾನಸಭಾ ಚುನಾವಣೆಯ ಚುಕ್ಕಾಣಿಯ ಜವಾಬ್ದಾರಿಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ. ಸದ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ ಜಾರ್ಜ್ಗೆ ಮಣೆ ಹಾಕಿದೆ.
ಇದನ್ನೂ ಓದಿ : ಕಾಂಗ್ರೆಸ್, ಓವೈಸಿ ಪಕ್ಷದ ಜೊತೆ ಬಿಜೆಪಿ ಮೈತ್ರಿ! ದೇವೇಂದ್ರ ಫಡ್ನವೀಸ್ ಖಡಕ್ ಸೂಚನೆ
ಎಐಸಿಸಿಯಿಂದ ಇಂದು ಹಿರಿಯ ಚುನಾವಣಾ ವೀಕ್ಷಕರ ಪಟ್ಟಿ ಬಿಡುಗಡೆಗೊಂಡಿದ್ದು ಈ ಪಟ್ಟಿಯಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಕೆ.ಜೆ ಜಾರ್ಜ್ ಸ್ಥಾನ ಪಡೆದಿದ್ದಾರೆ. ಆಸ್ಸಾಂ ಚುನಾವಣೆಯಲ್ಲಿ ಭೂಪೇಶ್ ಬಾಗೆಲ್, ಬಂಧು ಟಿರ್ಕೆ ಎಂಬವರ ಜೊತೆ ಡಿ.ಕೆ ಶಿವಕುಮಾರ್ ಕೂಡ ಹಿರಿಯ ಚುನಾವಣಾ ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಅಂತೆಯೇ ಕೇರಳ ವಿಧಾನಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಸಚಿನ್ ಪೈಲಟ್, ಇಮ್ರಾನ್ ಪ್ರತಾಪ್ ಗರ್ರ್ಹಿ, ಕನ್ನಯ್ಯ ಕುಮಾರ್ ಅವರೊಂದಿಗೆ ಕೆ.ಜೆ ಜಾರ್ಜ್ ಕೂಡ ಹಿರಿಯ ಚುನಾವಣಾ ವೀಕ್ಷಕ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಸಾಸ್ತಾನ – ಪಾಂಡೇಶ್ವರದಲ್ಲಿ ಸು ಫ್ರಂ ಸೋ ಮಾದರಿಯ ಕೃತ್ಯ: ಸ್ನಾನಗೃಹ ಇಣುಕಿ ಪರಾರಿ, ಗ್ರಾಮಸ್ಥರಲ್ಲಿ ಆತಂಕ
ಕಳೆದ ಬಿಹಾರ ಚುನಾವಣೆಯಲ್ಲಿಯೂ ಡಿ.ಕೆ ಶಿವಕುಮಾರ್ ಬೆಂಗಳೂರಿನಲ್ಲಿ ವಾಸವಿರುವ ಬಿಹಾರಿಗಳ ಮತಸೆಳೆಯುವ ಜವಾಬ್ದಾರಿ ಹೊತ್ತಿದ್ದರು. ನೀವು ಬಿಹಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೆ ಕರ್ನಾಟಕದಲ್ಲಿ ನನ್ನನ್ನು ಗೆಲ್ಲಿಸಿದಂತೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸುವ ಹೇಳಿಕೆ ನೀಡಿದ್ದರು.
ಇದೀಗ ಆಸ್ಸಾಂ ಚುನಾವಣೆ ಗೆಲುವು ಕೂಡ ಡಿ.ಕೆ ಶಿವಕುಮಾರ್ ಹೆಗಲೇರಿದ್ದು ಇದನ್ನು ಸಮರ್ಥವಾಗಿ ನಿಭಾಯಿಸಿ ಹೈಕಮಾಂಡ್ ಮನಗೆಲ್ಲುವಲ್ಲಿ ಯಶಸ್ವಿಯಾಗ್ತಾರಾ ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ.
Senior election observers appointed for Assam, Kerala DK Shivakumar KJ George get positions



