ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿ ದೇಶ ನಡುಗಿಸಿದ ಸಂಚುಕೋರನಿಗೆ ಈಗ ಜೈಲೇ ಗತಿ!
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಶಾರೀಕ್ಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 94 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.

ಇಡೀ ಮಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಶಾರೀಕ್ಗೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಪ್ರಕರಣದ ತನಿಖೆ ನಡೆಸಿದ ವಿಶೇಷ ನ್ಯಾಯಾಲಯವು, ಆರೋಪಿ ಶಾರೀಕ್ಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 94 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
2022 ನವೆಂಬರ್ 19ರ ಸಂಜೆ 4:30ರ ಸುಮಾರಿಗೆ ಶಾರೀಕ್ ತೆರಳುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಕೂಡ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ 2024ರಲ್ಲಿ ಎನ್ಐಎ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಇದಾದ ಬಳಿಕ ಶಾರೀಕ್ ಸಲ್ಲಿಕೆ ಮಾಡಿದ್ದ ತಪ್ಪೊಪ್ಪಿಗೆ ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಮಾನ್ಯ ಮಾಡಿತ್ತು.
ಇದನ್ನೂ ಓದಿ : ಗಂಡನ ಅಕ್ಕನನ್ನೇ ‘ಸವತಿ’ ಎಂದು ಬಿಂಬಿಸಿ ಡಿವೋರ್ಸ್ ಪಡೆದ ಕಿರಾತಕಿ ಪತ್ನಿ!
ಈ ಪ್ರಕರಣದ ಆರೋಪಿ ಶಾರೂಕ್ ಧರ್ಮಸ್ಥಳ, ಕದ್ರಿ ಮಂಜುನಾಥ ದೇಗುಲಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ. ಬಾಂಬ್ನಲ್ಲಿ ಟೈಮರ್ 90 ನಿಮಿಷ ನಮೂದಿಸುವ ಬದಲು 9 ನಿಮಿಷ ಎಂದು ತಪ್ಪಾಗಿ ನಮೂದಿಸಿದ ಪರಿಣಾಮ ಆಟೋದಲ್ಲಿಯೇ ಬಾಂಬ್ ಸ್ಫೋಟಗೊಂಡಿತ್ತು. ಇದಾದ ಬಳಿಕ ಎನ್ಐಎ ತನಿಖೆಯಲ್ಲಿ ಇದೇ ಉಗ್ರ ಶಾರೀಕ್ ಶಿವಮೊಗ್ಗ ತುಂಗಾ ನದಿ ತೀರದ ಪ್ರಾಯೋಗಿಕ ಸ್ಫೋಟ ಹಾಗೂ ಮಂಗಳೂರಿನ ಗೋಡೆ ಬರಹಗಳ ಪ್ರಕರಣಗಳ ಆರೋಪಿ ಎಂಬುದೂ ತಿಳಿದುಬಂದಿತ್ತು.
ಇದನ್ನೂ ಓದಿ : ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಹುಷಾರ್.! ಯಾಮಾರಿದ್ರೆ ಖಾಲಿ ಆಗುತ್ತೆ ನಿಮ್ಮ ಬ್ಯಾಂಕ್ ಖಾತೆ
ಇನ್ನು ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಪ್ರಕಟಗೊಂಡ ಶಿಕ್ಷೆಯ ಪ್ರಮಾಣದ ಬಗ್ಗೆ ಆಟೋ ಚಾಲಕ ಹಾಗೂ ಸಂತ್ರಸ್ತ ಪುರುಷೋತ್ತಮ ಪೂಜಾರಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಉಗ್ರ ಶಾರೀಖ್ಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು. ಈಗಾಗಲೇ ಮೂರುವರೆ ವರ್ಷ ಜೈಲಿನಲ್ಲಿ ಕಳೆದಿರುವ ಶಾರೀಕ್ಗೆ ಇನ್ನೊಂದು ಆರೂವರೆ ವರ್ಷ ಜೈಲಿನಲ್ಲಿ ಕಳೆಯುವುದು ದೊಡ್ಡ ಸವಾಲೇನಲ್ಲ. ಆತ ಜೈಲಿನಿಂದ ಹೊರಬಂದ ಬಳಿಕ ಮತ್ತೆ ಇಂತಹದೇ ಕೃತ್ಯಗಳಲ್ಲಿ ಭಾಗಿಯಾಗಲ್ಲ ಎಂದು ಏನು ಗ್ಯಾರಂಟಿ ಅಂತಾ ಪ್ರಶ್ನಿಸಿದ್ದಾರೆ.



