ಸಿಎಂ ಆರ್ಥಿಕ ಸಲಹೆಗಾರ ಭಾಷಣದ ವೇಳೆ ಕಲ್ಲೆಸೆತ : ಕಲ್ಲೆಸೆದವರು ಯಾರು ಗೊತ್ತೇ?
ಸಿಎಂ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರ ಕಾರ್ಯಕ್ರಮದಲ್ಲಿ ಕಲ್ಲು ಎಸೆದ ಘಟನೆ ನಡೆದಿದೆ. ಬಸವರಾಜ ರಾಯರೆಡ್ಡಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗಲೇ ಅವರಿದ್ದ ವೇದಿಕೆ ಮೇಲೆ ಕಲ್ಲು ಎಸೆಯಲಾಗಿದೆ. ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನ್ನದಾನೇಶ್ವರ ಮಠದ ಆವರಣದಲ್ಲಿ ಜನಸಂಪರ್ಕ ಕಾರ್ಯಕ್ರಮದಲ್ಲಿ ಬಸವರಾಜ ರಾಯರೆಡ್ಡಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಭಾಷಣ ಮಾಡಲು ಆರಂಭಿಸುತ್ತಿದ್ದಂತೆಯೇ ಕಲ್ಲು ಎಸೆಯಲಾಗಿದೆ.
ವೇದಿಕೆಯ ಮೇಲೆ ಈ ರೀತಿ ಕಲ್ಲೆಸೆತ ನಡೆಯುತ್ತಿದ್ದಂತೆಯೇ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಗ್ರಾಮಸ್ಥರೆಲ್ಲ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಲ್ಲೆಸೆತ ಮಾಡಿದವರು ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.
ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿ ಇದು ಯಾವುದೇ ದ್ವೇಷದಿಂದ ನಡೆದ ಕಲ್ಲೆಸೆತ ಅಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಅಲ್ಲದೇ ಈ ಘಟನೆಯಲ್ಲಿ ಬಸವರಾಜರಾಯರೆಡ್ಡಿ ಅವರಿಗೆ ಯಾವುದೇ ಗಾಯಗಳಾಗಿಲ್ಲ.



