ಕುಕ್ಕೆಯಿಂದ ಕಾಳಿಂಗನಾಗಿ ಬಂದು ಖುದ್ದು ಸುಬ್ರಹ್ಮಣ್ಯ ನೇ ನೆಲೆ ನಿಂತ ಕ್ಷೇತ್ರ – ಇಲ್ಲಿ ಬಂದ್ರೆ ನಾಗದೋಷ ಪರಿಹಾರ
Kalavara Sri Subramanya and Sri Mahaalingeshwara Temple : ಉಡುಪಿ ಜಿಲ್ಲೆಯ ಕುಂದಾಪುರ ತಾಲೋಕಿನ ಕಾಳಾವರದಲ್ಲಿ ಸ್ಥಿತವಾಗಿದೆ ಈ ಕಾಳಾವರ ಮಹಾಲಿಂಗೇಶ್ವರ ಕಾಳಿಂಗ ಸುಬ್ರಹ್ಮಣ್ಯ ದೇವಾಲಯ . ಇದು ಕುಂದಾಪುರದ ಪ್ರಮುಖ ಪಟ್ಟಣ ಅನ್ನಿಸಿಕೊಂಡಿರೋ ಕೋಟೇಶ್ವರದಿಂದ 4 ಕಿಲೋ ಮೀಟರ್ ದೂರದಲ್ಲಿದೆ.
Kalavara Sri Subramanya and Sri Mahaalingeshwara Temple : ನಾಗದೋಷ ಅಂದ್ರೆ ಸಾಕು ಕುಕ್ಕೆ ಸುಬ್ರಹ್ಮಣ್ಯನ ನೆನಪಾಗುತ್ತೆ. ಅಲ್ಲಿ ಪೂಜೆ ಮಾಡಿಸಿದ್ರೆ ಎಂತಹ ನಾಗದೋಷ ಕೂಡಾ ಪರಿಹಾರ ವಾಗುತ್ತೆ ಅನ್ನೋ ನಂಬಿಕೆ ಕೂಡಾ ಇದೆ . ಇಲ್ಲಿ ನಾಗ ಅಧಿಪತಿ ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತು ಭಕ್ತರನ್ನು ಕಾಯುತ್ತಾ ಬಂದಿದ್ದಾನೆ ಅನ್ನೋದ್ರಲ್ಲಿ ಎರಡು ಮಾತಿಲ್ಲ . ಆದ್ರೆ ಈ ದೇವಾಲಯ ಕೂಡಾ ಕುಕ್ಕೆ ಸುಬ್ರಹ್ಮಣ್ಯದಷ್ಟೇ ಸುಲಭವಾಗಿ ನಾಗ ದೋಷಗಳನ್ನು ಪರಿಹಾರ ಮಾಡುತ್ತೆ ಅಂದ್ರೆ ನೀವು ನಂಬಲೇ ಬೇಕು.
ಹೌದು ಇದು ಕುಕ್ಕೆಯಂತೆಯೇ ಮೂಲ ಸ್ಥಾನವನ್ನು ಹೊಂದಿರೋ ದೇವಾಲಯ . ಇಲ್ಲಿ ಸುಬ್ರಹ್ಮಣ್ಯ ಕಾಳಿಂಗ ನಾಗಿ ಬಂದು ನೆಲೆ ನಿಂತಿದ್ದಾನೆ . ಜೊತೆಯಲ್ಲೇ ಸುಬ್ರಹ್ಮಣ್ಯನ ತಂದೆ ಈಶ್ವರ ಕೂಡಾ ನೆಲೆ ಭಕ್ತ ಗಣವನ್ನು ಕಾಯುತ್ತಾನೆ. ಹೌದು ಇದು ಸುಬ್ರಹ್ಮಣ್ಯ ಹಾಗು ಈಶ್ವರ ಇಬ್ಬರೂ ಜೊತೆಯಾಗಿ ನೆಲ ನಿಂತಿರುವ ಕ್ಷೇತ್ರ .
ಇಲ್ಲಿ ಸುಬ್ರಹ್ಮಣ್ಯನ ಜೊತೆಯಲ್ಲಿ ಶಿವನನ್ನು ಜೊತೆಯಾಗಿ ಆರಾಧಿಸಲಾಗುತ್ತೆ. ನಿತ್ಯ ಕಾಳಿಂಗ ರೂಪದ ಸುಬ್ರಹ್ಮಣ್ಯನಿಗೆ ಪೂಜೆ ನಡೆದ್ರೆ . ಮತ್ತೊಂದೆಡೆ ಲಿಂಗ ರೂಪಿ ಶಿವನಿಗೆ ಪೂಜೆ ನಡೆಸಲಾಗುತ್ತೆ. ಮೂಲತಃ ಇದು ಶಿವ ಕ್ಷೇತ್ರವಾದ್ರೂ ಇಲ್ಲಿ ಹೆಚ್ಚು ಆರಾಧಿಸಲ್ಪಡುವುದು ಸುಬ್ರಹ್ಮಣ್ಯ. ಇದು ಕುಕ್ಕೆ ಸುಬ್ರಹ್ಮಣ್ಯದಷ್ಟೇ ಶಕ್ತಿಯುತ ಮೂಲ ಸ್ಥಾನ ವನ್ನು ಹೊಂದಿರುವ ಕ್ಷೇತ್ರ ಅಂತ ನಂಬಿಕ್ಕೊಂಡು ಬರಲಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿನ ಸ್ಥಳ ಪುರಾಣ.
ಈ ದೇವಾಲಯದ ಪೌರಾಣಿಕ ಹಿನ್ನಲೆಯ ಕುರಿತು ಹೇಳೋದಾದ್ರೆ ಇದು ಸುಮಾರು 11 ನೇ ಶತಮಾನದಿಂದ ಪೂಜೆಗೊಳ್ಳುತ್ತಿರುವ ದೇವಾಲಯ . ಇದರಲ್ಲಿ ಮೊದಲು ಶಿವ ಅಂದ್ರೆ ಮಹಾಲಿಂಗೇಶ್ವರನನ್ನು ಮಾತ್ರ ಪೂಜೆ ಮಾಡಿಕೊಂಡು ಬರಲಾಗುತ್ತಿತ್ತು . ಆದ್ರೆ 500 ವರ್ಷಗಳ ಹಿಂದೆ ಇಲ್ಲಿ ಕಾಳಿಂಗ ಸರ್ಪವೊಂದು ಕುಕ್ಕೆ ಸುಬ್ರಹ್ಮಣ್ಯದಿಂದ ಬಂದು ನೆಲೆ ಈ ಸ್ಥಳದಲ್ಲಿ ನಿಂತಿತಂತೆ. . ಅಂದಿನಿಂದ ಈ ಜಾಗವನ್ನು ಕಾಳಾವರ ಎಂದು ಕರೆಯುತ್ತಾ ಬಂದಿದ್ದಾರೆ. ಕಾಳಾವರ ಅಂದ್ರೆ ಕಾಳಿಂಗ ಸರ್ಪ ಅನ್ನೋ ಅರ್ಥವಿದೆ ಅಂತ ಸ್ಥಳೀಯರು ಹೇಳುತ್ತಾರೆ.
ಇದನ್ನೂ ಓದಿ :ಮನುಷ್ಯರಂತೆ ಮೆತ್ತಗಿದೆ ಲಕ್ಷ್ಮೀ ನರಸಿಂಹನ ದೇಹ – ದೇವರ ಹೊಕ್ಕುಳ ತೀರ್ಥ ಸೇವಿಸಿದ್ರೆ ಸಂತಾನ ಭಾಗ್ಯ
ಇನ್ನು ಈ ಜಾಗಕ್ಕೂ ಕುಕ್ಕೇ ಸುಬ್ರಹ್ಮಣ್ಯಕ್ಕೂ ತುಂಬಾ ಸಾಮ್ಯತೆ ಇದೆಯಂತೆ . ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೇಗೆ ಮೂಲ ಸ್ಥಾನ ಅಂದ್ರೆ ಮೂಲ ನೆಲೆಯಲ್ಲಿ ಹುತ್ತಕ್ಕೆ ಪೂಜೆ ಮಾಡುತ್ತಾರೋ, ಹಾಗೆ ಇಲ್ಲಿ ಕೂಡಾ ನಿತ್ಯ ಇಲ್ಲಿನ ಮೂಲವಾಗಿರುವ ಸರ್ಪದ ಹುತ್ತಕ್ಕೆ ಪೂಜೆ ಮಾಡಲಾಗುತ್ತೆ . ಇಲ್ಲಿ ಸುಬ್ರಹ್ಮಣ್ಯದ ಸುತ್ತಮುತ್ತಲೂ ನೀರಿನ ಸೆಲೆ ಇರುವಂತೆ, ಇಲ್ಲಿಯೂ ನೀರಿನ ಸೆಲೆಗಳನ್ನು ನಾವು ಕಾಣಬಹುದು . ಇದನ್ನು ಭಗವಂತನ ಲೀಲೆ ಅಂತ ಭಕ್ತರು ನಂಬುತ್ತಾರೆ. ಇಲ್ಲಿ ಸುಬ್ರಹ್ಮಣ್ಯನೇ ಕಾಳಿಂಗನಾಗಿ ಬಂದು ನೆಲೆನಿಂತಿದ್ದಾನೆ ಅನ್ನೋ ನಂಬಿಕೆ ಇರೋದ್ರಿಂದನೇ , ಇಂದಿಗೂ ಸಾವಿರಾರು ಭಕ್ತರು ಬಂದು ದೇವರಿಗೆ ಸೇವೆ ಸಲ್ಲಿಸಿ ತಂದೆ ಶಿವ ಹಾಗೂ ಮಗ ಸುಬ್ರಹ್ಮಣ್ಯನ ಆಶೀರ್ವಾದ ಪಡೆಯುತ್ತಾರೆ.
ಇದು ದಕ್ಷಿಣ ಕನ್ನಡದ ಎರಡನೇ ಅತಿದೊಡ್ಡ ಸುಬ್ರಹ್ಮಣ್ಯ ಕ್ಷೇತ್ರ ಅಂತ ನಂಬಲಾಗುತ್ತೆ. ಇಲ್ಲಿ ಸೇವೆ ಮಾಡಿದ್ರೆ ಸಂತಾನ, ಕಂಕಣ ಭಾಗ್ಯ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆಯೂ ಇದೆ . ಇನ್ನು ಕುಕ್ಕೆ ಸುಬ್ರಹ್ಮಣ್ಯದಂತೆ ಇಲ್ಲೂ ಕೂಡಾ ನಾಗ ದೋಷಗಳ ಪರಿಹಾರಕ್ಕಾಗಿ ಎಲ್ಲಾ ಪೂಜೆ ಪುನಸ್ಕಾರವನ್ನು ನಡೆಸಲಾಗುತ್ತೆ . ಜೊತೆಗೆ ಚರ್ಮ ರೋಗ, ಕಣ್ಣು, ಕಿವಿ, ಕುತ್ತಿಗೆ ಯ ಹಲವು ಸಮಸ್ಯೆಗಳನ್ನು ಕೂಡಾ ಭಗವಂತ ಪರಿಹಾರ ಮಾಡುತ್ತಾನೆ ಅಂತ ಭಕ್ತರು ನಂಬುತ್ತಾರೆ .
ಇದನ್ನೂ ಓದಿ :ಆಲದ ನೆರಳಲ್ಲಿ ನೆಲೆ ನಿಂತಿದ್ದಾನೆ ಬಸ್ರೂರು ತುಳುವೇಶ್ವರ – ಪ್ರಕೃತಿಯೇ ಇಲ್ಲಿ ಶಿವನಿಗೆ ದೇವಾಲಯ
ಇಲ್ಲಿ ಸಾಮಾನ್ಯವಾಗಿ ಚಂಪಾ ಷಷ್ಠಿಯನ್ನು ಜಾತ್ರೆಯ ರೂಪದಲ್ಲಿ ಆಚರಿಸಲಾಗುತ್ತೆ . ಆಗ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಭಾಗ್ಯ ಪಡೆದು ಕೃತಾರ್ಥರಾಗುತ್ತಾರೆ .ಇಲ್ಲಿ ಬರೋ ಭಕ್ತರು ದೇವರಿಗೆ ಹಿಂಗಾರ ಅಂದ್ರೆ ಅಡಿಕೆಯ ಹೂವನ್ನು ಕಾಣಿಕೆ ಯಾಗಿ ನೀಡುತ್ತಾರೆ . ಹೀಗೆ ನೀಡೋದ್ರಿಂದ ಭಗವಂತ ಬೇಗ ತಮ್ಮ ಕಷ್ಟಗಳನ್ನು ಪರಿಹರಿಸುತ್ತಾನೆ ಅನ್ನೋ ನಂಬಿಕೆ ಇದೆ .
ಇನ್ನು ಈ ದೇವಾಲಯ ಇರೋದಾದ್ರು ಎಲ್ಲಿ ಅಂದ್ರೆ ಕರಾವಳಿಯ ದೇವಾಲಯಗಳ ಬೀಡು ಅನ್ನಿಸಿಕೊಂಡಿರೋ ನಮ್ಮ ಉಡುಪಿ ಜಿಲ್ಲೆಯಲ್ಲಿ . ಉಡುಪಿ ಜಿಲ್ಲೆಯ ಕುಂದಾಪುರ ತಾಲೋಕಿನ ಕಾಳಾವರದಲ್ಲಿ ಸ್ಥಿತವಾಗಿದೆ ಈ ಕಾಳಾವರ ಮಹಾಲಿಂಗೇಶ್ವರ ಕಾಳಿಂಗ ಸುಬ್ರಹ್ಮಣ್ಯ ದೇವಾಲಯ . ಇದು ಕುಂದಾಪುರದ ಪ್ರಮುಖ ಪಟ್ಟಣ ಅನ್ನಿಸಿಕೊಂಡಿರೋ ಕೋಟೇಶ್ವರದಿಂದ 4 ಕಿಲೋ ಮೀಟರ್ ದೂರದಲ್ಲಿದೆ. ಕುಂದಾಪುರಕ್ಕೆ ಆಗಮಿಸಿದ್ರೆ ಸುಲಭವಾಗಿ ಸಾರಿಗೆ ಬಸ್ ಗಳ ಮೂಲಕ ಇಲ್ಲಿಗೆ ತೆರಳಬಹುದು . ಪ್ರಕೃತಿ ಸೌಂದರ್ಯದ ನಡುವೆ ನೆಲೆ ನಿಂತಿರೋ ಈ ದೇವಾಲಯವನ್ನು ನೋಡೋದೆ ಒಂದು ಅಂದ ಅಂದ್ರೆ ತಪ್ಪಾಗಲ್ಲ.
ಇದನ್ನೂ ಓದಿ: ಎಷ್ಟೇ ದುಡಿದರೂ ಪರ್ಸ್ ನಲ್ಲಿ ಹಣ ಉಳಿತಿಲ್ವಾ ? ಇಲ್ಲಿದೆ ಹಣ ಉಳಿಸುವ ಸರಳ ಟಿಪ್ಸ್
Kalavara Sri Subramanya and Sri Mahaalingeshwara Temple
Comments are closed.