ರಾಜ್ಯದಲ್ಲಿ ಮಿತಿಮೀರುತ್ತಿದೆ ಬಿಸಿಲ ಬೇಗೆ : ಏಪ್ರಿಲ್ 29ರಿಂದ ಇರಲಿದೆ ಶಾಖದ ಅಲೆ
ಕರ್ನಾಟಕದಲ್ಲಿ ಅತಿಯಾದ ಬಿಸಿಗಾಳಿ ಹಾಗೂ ಉಷ್ಣತಾಪಮಾನದಿಂದ ಜನತೆ ಕಂಗಾಲಾಗಿ ಹೋಗಿದ್ದಾರೆ. ಏಪ್ರಿಲ್ 29ರಿಂದ ರಾಜ್ಯದಲ್ಲಿ ಶಾಖ ಅಲೆ ಶುರುವಾಗುವ ಭೀತಿ ಕೂಡ ಎದುರಾಗಿದೆ.
ರಾಜ್ಯಾದ್ಯಂತ ಬಿಸಿಲ ತಾಪಮಾನ ದಿನದಿಂದ ದಿನಕ್ಕೆ ಮಿತಿಮೀರಿ ಹೋಗುತ್ತಿದೆ. ಕರಾವಳಿ ಕರ್ನಾಟಕ ಭಾಗದಲ್ಲಿಯೂ ಬಿಸಿಲ ಧಗೆಗೆ ಜನತೆ ಕಂಗಾಲಾಗಿ ಹೋಗಿದ್ದಾರೆ. ಅತಿಯಾದ ಬಿಸಿಗಾಳಿ ಹಾಗೂ ಉಷ್ಣತಾಪಮಾನದಿಂದ ಜನತೆ ಕಂಗಾಲಾಗಿ ಹೋಗಿದ್ದಾರೆ. ಅದರಲ್ಲೂ ಏಪ್ರಿಲ್ 29ರಿಂದ ರಾಜ್ಯದಲ್ಲಿ ಶಾಖ ಅಲೆ ಶುರುವಾಗುವ ಭೀತಿ ಕೂಡ ಎದುರಾಗಿದ್ದು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಆರೋಗ್ಯ ಇಲಾಖೆ ಹೊರಡಿಸಿದೆ.
ಬೆಳಗ್ಗೆ 10ರಿಂದ ಮಧ್ಯಾಹ್ನ 3ಗಂಟೆಯವರೆಗೆ ಬಿಸಿಲಿನ ಧಗೆ ಮಿತಿಮೀರಿ ಇರುವುದರಿಂದ ಅಗತ್ಯ ಇದ್ದಲ್ಲಿ ಮಾತ್ರ ಮನೆಯಿಂದ ಹೊರಬರುವಂತೆ ಹೇಳಲಾಗಿದೆ. ಮಕ್ಕಳು , ಗರ್ಭಿಣಿಯರು ಹಾಗೂ ವೃದ್ಧರು ಈ ಸಮಯದಲ್ಲಿ ಮನೆಯಿಂದ ಹೊರಬಾರದೇ ಇರುವುದೇ ಉತ್ತಮ. ಮೊಸರು, ಮಜ್ಜಿಗೆ, ವೀಳದ್ಯಲೆ ರಸ ಹಾಗೂ ತಾಜಾ ಹಣ್ಣಿನಿಂದ ತಯಾರಿಸಿದ ಜ್ಯೂಸುಗಳನ್ನು ಸೇವಿಸಿ. ತಂಪು ಪಾನೀಯಗಳ ಸೇವನೆ ಒಳ್ಳೆಯದಲ್ಲ. ಹತ್ತಿಯ ಬಟ್ಟೆಯನ್ನೇ ಧರಿಸಿ. ಇನ್ನು ಕಾರು ಚಾಲಕರು ಫುಲ್ ಟ್ಯಾಂಕ್ ಮಾಡಿಸುವುದು ಬೇಡ. ಸಂಜೆಯ ನಂತರವೇ ಕಾರುಗಳಿಗೆ ಇಂಧನ ಹಾಕಿಸಿ. ಟೈರ್ಗಳಿಗೆ ಅತಿಯಾಗಿ ಗಾಳಿ ತುಂಬಬೇಡಿ ಸೇರಿದಂತೆ ಹಲವು ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಬಿಸಿಲಿನ ಬೇಗೆಗೆ ತತ್ತರಿಸಿದ ಕರಾವಳಿ ಕರ್ನಾಟಕ : ಹವಾಮಾನ ಇಲಾಖೆಯಿಂದ ಉಷ್ಣ ಅಲೆ ಎಚ್ಚರಿಕೆ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ. ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ಕೂಡ ತಲೆದೂರುವ ಭೀತಿ ಎದುರಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಲು ಸೂಚನೆ ನೀಡಿದೆ.



