ಉಡುಪಿ: ಕಟಪಾಡಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರಕ್ಕೆ ಪರ್ಯಾಯ ಮಾರ್ಗ
ಮಂಗಳೂರು - ಉಡುಪಿ : ಮಂಗಳೂರಿನಿಂದ ಉಡುಪಿಯ ಕಡೆಗೆ ಪ್ರಯಾಣಿಸುವ ವಾಹನಗಳು ಕಾಪುವಿನಿಂದ ಶಿರ್ವಾ, ಮೂಡುಬೆಳ್ಳೆ, ಮಣಿಪುರ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ಪ್ರಯಾಣಿಸುವಂತೆ ತಿಳಿಸಲಾಗಿದೆ

ಉಡುಪಿ: ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿರುವ ಘಟನೆ ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಅಡುಗೆ ಅನಿಲ (LPG) ಹೊತ್ತು ಸಾಗುತ್ತಿದ್ದ ಈ ಬುಲೆಟ್ ಟ್ಯಾಂಕರ್, ಕಟಪಾಡಿ ಜಂಕ್ಷನ್ ಬಳಿಯಲ್ಲಿ ಅಪಘಾತಕ್ಕೆ ಈಡಾಗಿದೆ. ಕಟಪಾಡಿ ಜಂಕ್ಷನ್ನಲ್ಲಿ ಅಂಡರ್ಪಾಸ್ ಕಾಮಗಾರಿ ನಡೆಯುತ್ತಿದ್ದು, ವಾಹನ ಸಂಚಾರಕ್ಕಾಗಿ ರಸ್ತೆಯನ್ನು ಡೈವರ್ಷನ್ (ಬದಲಿ ಮಾರ್ಗ) ಮಾಡಲಾಗಿತ್ತು. ತಿರುವಿನಲ್ಲಿ ವೇಗವಾಗಿ ಬಂದ ಟ್ಯಾಂಕರ್ ಅನ್ನು ಚಾಲಕ ಒಮ್ಮೆಲೆ ತಿರುಗಿಸಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಗ್ಯಾಸ್ ಟ್ಯಾಂಕರ್ ಪಲ್ಟಿ : ತಪ್ಪಿದ ಭೀಕರ ಅನಾಹುತ
ಟ್ಯಾಂಕರ್ ಪಲ್ಟಿಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದರು. ಟ್ಯಾಂಕರ್ನಿಂದ ಅನಿಲ ಸೋರಿಕೆ (Gas Leakage) ಆಗದಂತೆ ತಡೆಯಲು ಅಗ್ನಿಶಾಮಕ ದಳದ ಮೂರು ವಾಹನಗಳು ನಿರಂತರವಾಗಿ ನೀರು ಹಾಯಿಸುವ ಮೂಲಕ ಟ್ಯಾಂಕರ್ ಅನ್ನು ತಂಪಾಗಿರಿಸುವ ಕಾರ್ಯಾಚರಣೆ ನಡೆಸಿದವು. ಅದೃಷ್ಟವಶಾತ್, ಯಾವುದೇ ದೊಡ್ಡ ಮಟ್ಟದ ಸೋರಿಕೆ ಅಥವಾ ಸ್ಫೋಟ ಸಂಭವಿಸದ ಕಾರಣ ಭೀಕರ ದುರಂತವೊಂದು ತಪ್ಪಿದಂತಾಗಿದೆ.
ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರ ಅಸ್ತವ್ಯಸ್ತ
ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಬದಿಯ ರಸ್ತೆಯನ್ನು ಬಂದ್ ಮಾಡಲಾಗಿದ್ದು, ಕಟಪಾಡಿಯ ಒಳಗಿನ ರಸ್ತೆಗಳ ಮೂಲಕ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರಕ್ಕೆ ಪರ್ಯಾಯ ಮಾರ್ಗ
ಮಂಗಳೂರು – ಉಡುಪಿ : ಮಂಗಳೂರಿನಿಂದ ಉಡುಪಿಯ ಕಡೆಗೆ ಪ್ರಯಾಣಿಸುವ ವಾಹನಗಳು ಕಾಪುವಿನಿಂದ ಶಿರ್ವಾ, ಮೂಡುಬೆಳ್ಳೆ, ಮಣಿಪುರ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ಪ್ರಯಾಣಿಸುವಂತೆ ತಿಳಿಸಲಾಗಿದೆ. ಅಥವಾ ಪಡುಬಿದ್ರಿ, ಬೆಳ್ಮಣ್, ಶಿರ್ವ ಮಾರ್ಗವಾಗಿ ಮಣಿಪಾಲದ ಮೂಲಕ ಉಡುಪಿಗೆ ತೆರಳಬಹುದಾಗಿದೆ.
Also Read : ಸಿಲಿಂಡರ್ನಲ್ಲಿ ಎಷ್ಟು ಗ್ಯಾಸ್ ಇದೆ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಸರಳ ವಿಧಾನ
ಉಡುಪಿ – ಮಂಗಳೂರು : ಉಡುಪಿಯಿಂದ ಮಂಗಳೂರಿಗೆ ತೆರಳುವ ವಾಹನಗಳು ಉಡುಪಿ- ಮಣಿಪಾಲ, ಮಣಿಪುರ, ಮೂಡುಬೆಳ್ಳೆ- ಶಿರ್ವ ಮಾರ್ಗವಾಗಿ ಕಾಪುವಿಗೆ ತೆರಳಿ ಅಲ್ಲಿಯ ಮಂಗಳೂರಿಗೆ ಪ್ರಯಾಣಿಸಬಹುದಾಗಿದೆ. ಅಲ್ಲದೇ ಮಣಿಪಾಲ – ಶಿರ್ವ, ಪಡುಬಿದ್ರಿ ಮಾರ್ಗವಾಗಿಯೂ ಮಂಗಳೂರಿಗೆ ತೆರಳಬಹುದಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





