ಸಾಸ್ತಾನ : ಮನೆ ಕೆಲಸದಾಕೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಹಣ ಕಳವು

Udupi News : ಕೋಟ: ಮನೆ ಕೆಲಸ ಮಾಡುತ್ತಿದ್ದ ಮಹಿಳೆಯೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವದ ಗ್ರಾಮದಲ್ಲಿ ನಡೆದಿದೆ.
ಸಾಸ್ತಾನ ಸಮೀಪದ ಪಾಂಡೇಶ್ವರ ಗ್ರಾಮದ ನಿವಾಸಿ, ದುಬೈನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಸಿಪ್ರಿಯನ್ ಡಿ ಅಲ್ಮೆಡಾ (62 ವರ್ಷ) ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದನ್ನು ಕಳವು ಮಾಡಲಾಗಿದೆ.
ಸಿಪ್ರಿಯನ್ ಡಿ ಅಲ್ಮೆಡಾ ಅವರ ತಾಯಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ನೋಡಿಕೊಳ್ಳಲು ಕೆಲಸದವರನ್ನು ಹುಡುಕುತ್ತಿದ್ದರು.
ಹೀಗಾಗಿ ಏಜೆನ್ಸಿಯ ಮೂಲಕ ಸಾಗರ ತಾಲೂಕಿನ ಚಾಮಗಾರ ಕೇರಿಯ ಶೀಲ ಎಂಬುವವರನ್ನು ಹೋಂ ನರ್ಸ್ ಆಗಿ ನೇಮಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ : ತಲೆಬುರುಡೆ ರಹಸ್ಯ : ಎಸ್ಐಟಿಯಿಂದ ಹೊರ ನಡೆದ ಇಬ್ಬರು ಐಪಿಎಸ್ ಅಧಿಕಾರಿಗಳು
ಶೀಲ ತನ್ನ ಗಂಡ ಮಣಿ, ಮೈದುನ ಸಂತೋಷ್ ಮತ್ತು ಅತ್ತೆಯನ್ನು ಪರಿಚಯ ಮಾಡಿಸಿದ್ದಳು. ಶೀಲಾ ಕೆಲವು ದಿನಗಳ ಕಾಲ ಸಿಪ್ರಿಯನ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು.
ಆದರೆ ಕಳೆದ ಮೇ 27ರಂದು ತನ್ನ ಮಗನಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿ ಊರಿಗೆ ತೆರಳಿದ್ದಳು.
ಮರುದಿನ ಸಿಪ್ರಿಯನ್ ತನ್ನ ತಾಯಿಯ ಶುಶ್ರೂಷೆ ಮುಗಿಸಿ ಕೋಣೆಗೆ ತೆರಳಿ ಕಪಾಟಿನ ಲಾಕರ್ ತೆಗೆದು ನೋಡಿದಾಗ ಡ್ರಾವರ್ನಲ್ಲಿ ಇಟ್ಟಿದ್ದ ಹಣ ಒಡವೆ ಕಳವು ಆಗಿತ್ತು.
ಸುಮಾರು 5,00,000/- ರೂ. ಮೌಲ್ಯದ ಚಿನ್ನದ ಒಡವೆಗಳು, 87,000/- ರೂ. ನಗದು, 1,10,000/- ರೂ. ಮೌಲ್ಯದ ಚೂರಿ ಸೆಟ್ ಹಾಗೂ 78,000/- ರೂ. ಮೌಲ್ಯದ ಪಾತ್ರೆಯ ಸೆಟ್ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಒಂದೇ ವಧುವನ್ನು ಮದುವೆ ಆದ ಸಹೋದರರು
Udupi News : ಪೊಲೀಸರ ಮಾತುಕತೆಯೂ ವಿಫಲ
ಸಿಪ್ರಿಯನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಶೀಲಾಳೆ ಕಳವು ಮಾಡಿರುವ ಹಿನ್ನೆಲೆಯಲ್ಲಿ ಸಿಪ್ರಿಯನ್ ಅವರು ಆರೋಪಿಗಳನ್ನು ಆನಂದಪುರ ಪೊಲೀಸ್ ಠಾಣೆಗೆ ಕರೆಯಿಸಿದ್ದಾರೆ.
ಈ ವೇಳೆಯಲ್ಲಿ ಮಾತುಕತೆ ನಡೆಸಿದಾಗ ತಾವೇ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ನಂತರ 1,30,000/- ರೂ. ಮೌಲ್ಯದ ಬ್ರಾಸ್ಲೈಟ್ ಮತ್ತು 40,000/- ರೂ. ನಗದನ್ನು ವಾಪಸ್ ನೀಡಿದ್ದಾರೆ.
ಉಳಿದ ಹಣ ಮತ್ತು ಒಡವೆಯನ್ನು ಇದುವರೆಗೂ ಹಿಂದಿರುಗಿಸಿಲ್ಲ. ಈ ಹಿನ್ನೆಲೆಯಲ್ಲಿ ಸಿಪ್ರಿಯನ್ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಕೋಟ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಮನೆ ಕೆಲಸಕ್ಕೆ ಹಾಕಿಕೊಂಡ ತಪ್ಪಿಗೆ ಇದೀಗ ಮನೆ ಮಾಲೀಕರು ಪೊಲೀಸ್ ಠಾಣೆ ಅಲೆಯುವ ಸ್ಥಿತಿ ಬಂದಿದೆ.
Udupi News Sastana Housemaid Theft Kannada News



