ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ.. ಹಲವು ಪ್ರಮುಖ ವಿಧೇಯಕಗಳ ಮಂಡನೆಗೆ ಅಸ್ತು
Belagavi Session 2025 : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಬಹುನಿರೀಕ್ಷಿತ ಒಳ ಮೀಸಲಾತಿ ಅಡಿಯಲ್ಲಿ ಬಡ್ತಿ ನೀಡುವುದು ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡಿಸುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳಿಗೆ ಕ್ಯಾಬಿನೇಟ್ (Belagavi Session 2025) ಸಮ್ಮತಿ ನೀಡಿದೆ. ಆದರೆ ವಿವಿಧ ಷರತ್ತುಗಳನ್ನು ವಿಧಿಸಲಾಗಿದೆ.
ಎಸ್ಸಿ, ಎಸ್ಟಿ ಒಳ ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯಕ್ಕೆ ಹೊಸ ಅಫಿಡವಿಟ್ ಸಲ್ಲಿಕೆಗೆ ಕ್ಯಾಬಿನೇಟ್ ನಿರ್ಧರಿಸಿದೆ. ಅಲೆಮಾರಿ ಸಮುದಾಯಕ್ಕೆ ಬಲ ಅಥವಾ ಎಡ ಸಮುದಾಯಗಳ ಪಂಗಡಕ್ಕೆ ಸೇರಿಸಲು ಚರ್ಚೆ ನಡೆದಿತ್ತು. ಆದರೆ ಇದಕ್ಕೆ ಸಂಪುಟ ಸಭೆಯಲ್ಲಿ ಸಮ್ಮತಿ ಸಿಗದ ಕಾರಣ ಯಾವುದೇ ಬದಲಾವಣೆ ಇಲ್ಲದೇ ಮೊದಲಿದ್ದಂತೆ ಜಾರಿಗೆ ನಿರ್ಣಯ ಕೈಗೊಳ್ಳಲಾಗಿದೆ.
ಆರ್ಸಿಬಿ ವಿಜಯೋತ್ಸವ ದುರಂತದ ಬಳಿಕ ಯಾವುದೇ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೊಳ್ಳದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಶೆಗೆ ಕಾರಣವಾಗಿತ್ತು.ಆದರೆ ಸಂಪುಟ ಸಭೆಯಲ್ಲಿ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿಸಲು ಹಸಿರುನಿಶಾನೆ ದೊರಕಿದೆ. ನಿವೃತ್ತ ನ್ಯಾಯಮೂರ್ತಿ ಕುನ್ಹಾ ವರದಿ ಅಳವಡಿಸಿಕೊಂಡು ಕ್ರಿಕೆಟ್ ಮ್ಯಾಚ್ ಆಡಿಸುವ ಜವಾಬ್ದಾರಿಯನ್ನು ಗೃಹ ಇಲಾಖೆಗೆ ನೀಡಲಾಗಿದೆ.
ಇದನ್ನೂ ಓದಿ: ವಿಮಾನಯಾನಕ್ಕೆ ₹47 ಕೋಟಿಗೂ ಅಧಿಕ ಖರ್ಚು ಮಾಡಿದ ಸ’ಮಜಾ’ವಾದಿ ಸಿಎಂ ಸಿದ್ದರಾಮಯ್ಯ..!
ಇನ್ನುಳಿದಂತೆ ರಾಜ್ಯ ರಸ್ತೆ ಸುರಕ್ಷತಾ ತಿದ್ದುಪಡಿ ವಿಧೇಯಕ ಮಂಡಿಸಲಿದ್ದು, ಎಲ್ಲಾ ಮಾದರಿಯ ವಾಹನಗಳಿಗೆ 1000 ರೂಪಾಯಿ ಸೆಸ್ ವಿಧಿಸಲಾಗಿದೆ. 307 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಲ್ಕ್ ರಸ್ತೆ ಜಂಕ್ಷನ್ ನಿಂದ ಕೆ.ಆರ್ ಪುರದವರೆಗೆ ಜಾಗತಿಕ ಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. ಖಾಸಗಿ ಆಂಬ್ಯುಲೆನ್ಸ್ಗಳ ನಿಯಂತ್ರಣ ಹಾಗೂ ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆ ಎಂದು ನೋಂದಾಯಿಸಲು ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಸೇರಿದಂತೆ ಅನೇಕ ವಿಧೇಯಕಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.



