ಮಹಾರಾಷ್ಟ್ರ: ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿರುವ ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಇದೀಗ ಕಲಬೆರಕೆ ಆಡಿಕೆ ಸಂಕಷ್ಟಕ್ಕೆ ಸಿಲುಕಿಸಿದೆ. ಮಹಾರಾಷ್ಟ್ರದ ಸರಕಾರ ಕಲಬೆರಕೆ ಅಡಿಕೆಯ ವಿರುದ್ದ ಪರಿಶೀಲನೆಗೆ ಮುಂದಾಗಿದೆ. ಆಹಾರ ಮತ್ತು ಔಷಧ ಆಡಳಿತ ಇಲಾಖೆ ಗುಣಮಟ್ಟದ ಪರಿಶೀಲನೆ ನಡೆಸುತ್ತಿದ್ದು, ಉತ್ತರ ಭಾರತಕ್ಕೆ ತೆರಳುವ ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ತಡೆ ಹಿಡಿಯಲಾಗಿದೆ.
ಮೇ ತಿಂಗಳಲ್ಲಿ ಅಡಿಕೆ ಲಾರಿಗಳ ಪರಿಶೀಲನೆ ನಡೆಸಿದ ವೇಳೆಯಲ್ಲಿ ಕಲಬೆರಕೆ ಇರುವುದು ಪತ್ತೆಯಾಗಿತ್ತು. ಈ ವೇಳೆಯಲ್ಲಿ ಎಫ್ಎಡಿ ಅಧಿಕಾರಿಗಳು ಕಲಬೆರಕೆ ಅಡಿಕೆಯನ್ನು ಸುಟ್ಟು ಹಾಕಿದ್ದರು. ಹೀಗಾಗಿ ಉತ್ತರ ಭಾರತದಕ್ಕೆ ಸಾಗಾಟ ಮಾಡುವ ಅಡಿಕೆ ಲಾರಿಗಳನ್ನು ಅಧಿಕಾರಿಗಳು ತಡೆದು ನಿಲ್ಲಿಸುತ್ತಿದ್ದಾರೆ. ಹೀಗಾಗಿ ನಾಗಪುರ, ಧುಳೆ, ನಾಂದೇಡ್, ಔರಂಗಾಬಾದ್, ಭೀಡ್ ಹಾಗೂ ಹಿಂಗೋಲಿ ಜಿಲ್ಲೆಗಳಲ್ಲಿ ಲಾರಿಗಳನ್ನು ವಾರಗಟ್ಟಲೆ ತಡೆದು ನಿಲ್ಲಿಸಲಾಗ್ತಿದೆ.
ಒಂದೆಡೆಯಲ್ಲಿ ರೈತರು ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಅಂತಾ ಸಾಬೀತು ಪಡಿಸಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆಯಲ್ಲಿ ಕೆಲವು ರೈತರು ಲಾಭದ ಆಸೆಯಿಂದ ಇಂಡೋನೇಷ್ಯಾ, ಶ್ರೀಲಂಕಾ, ಮಲೇಷ್ಯಾದಿಂದ ಕಳಪೆ ಅಡಿಕೆಯನ್ನು ಕರ್ನಾಟಕಕ್ಕೆ ತಂದು ನೈಸರ್ಗಿಕ ಚೊಗರು ಬಳಸುವ ಬದಲಾಗಿ ರೆಡ್ ಆಳಕ್ಸೈಡ್ನಂತಹ ರಾಸಾಯನಿಕ ಬಳಸಿ ಬಣ್ಣ ಕಟ್ಟುತ್ತಿದ್ದಾರೆ. ವಿದೇಶಿ ಅಡಿಕೆಯನ್ನು ಕಲಬೆರಕೆ ಮಾಡಿ ಮಾರಾಟ ಮಾಡುವ ಕುರಿತು ಆರೋಪ ಕೇಳಿಬಂದಿದೆ.
Also Read : ಅಫ್ಘಾನಿಸ್ತಾನ ಭೂಕಂಪ: ಉತ್ತರ ಭಾರತದಲ್ಲಿ ಭೂಮಿ ಕಂಪಿಸಿದ ಅನುಭವ
ಮಹಾರಾಷ್ಟ್ರದಲ್ಲಿ ತಡೆದು ನಿಲ್ಲಿಸಲಾಗಿರುವ ಪ್ರತೀ ಲಾರಿಯಲ್ಲಿಯೂ ಸುಮಾರು 1.50 ಕೋಟಿ ರೂಪಾಯಿ ಮೌಲ್ಯದ ಅಡಿಕೆ ಇದೆ. ವಾರಗಟ್ಟಲೆ ರಸ್ತೆಯಲ್ಲಿಯೇ ಲಾರಿಗಳು ನಿಂತಿರುವ ಸ್ಥಿತಿ ಇರುವ ಕಾರಣದಿಂದಲೇ ಲಾರಿಗಳ ಮಾಲೀಕರು ಅಡಿಕೆ ಸಾಗಾಣಿಕೆಗೆ ನಿರಾಕರಿಸುತ್ತಿದ್ದಾರೆ. ಗುಜರಾತ್ಗೆ ಸಾಗಾಟ ಆಗಬೇಕಾದ ಅಡಿಕೆ ನಡು ರಸ್ತೆಯಲ್ಲಿಯೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ ಅಭಾವ ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಕಲಬೆರಕೆ ಪರಿಶೀಲನೆಯ ನೆಪದಲ್ಲಿ ಅಡಿಕೆ ಲಾರಿಗಳನ್ನು ತಡೆದು ನಿಲ್ಲಿಸುತ್ತಿರುವ ಕಾರಣದಿಂದಾಗಿ ಕ್ಯಾಂಪ್ಕೋ ಹಾಗೂ ಮಾಮ್ಕೋಸ್ ಸಂಸ್ಥೆಯ ಪದಾಧಿಕಾರಿಗಳು ಕೇಂದ್ರ ಸಚಿವರ ಭೇಟಿಗೆ ಮುಂದಾಗಿದ್ದಾರೆ. ಈ ಕುರಿತು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಮಧ್ಯ ಪ್ರವೇಶ ಮಾಡುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಕರಾವಳಿ ಹಾಗೂ ಮಲೆನಾಡು ಭಾಗದ ರೈತರು ಆಗ್ರಹಿಸುತ್ತಿದ್ದಾರೆ.
Karnataka areca nut adulteration fears Maharashtra stops areca nut trucks



